ರಾಮನಗರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಮಾಸಿಕ ₹2 ಸಾವಿರ ಪಾವತಿಸುವ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ 4,756 ಮಹಿಳೆಯರನ್ನು ಕೈ ಬಿಡಲಾಗಿದೆ. ಈ ಫಲಾನುಭವಿಗಳು ಐ.ಟಿ ಅಥವಾ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವ ಕುಟುಂಬದವರು ಎಂಬುದೇ ಇದಕ್ಕೆ ಕಾರಣ.
ಯೋಜನೆಯಿಂದ ಹೊರಗುಳಿದಿರುವ ತಾಲ್ಲೂಕುಗಳಲ್ಲಿ ರಾಮನಗರ ಮೊದಲಿದ್ದರೆ, ಮಾಗಡಿ ಕಡೆಯ ಸ್ಥಾನದಲ್ಲಿದೆ. ರಾಮನಗರದಲ್ಲಿ 1,736 ಮಹಿಳೆಯರು, ಎರಡನೇ ಸ್ಥಾನದಲ್ಲಿರುವ ಕನಕಪುರದಲ್ಲಿ 1,236, ಮೂರನೇ ಸ್ಥಾನದಲ್ಲಿರುವ ಚನ್ನಪಟ್ಟಣದಲ್ಲಿ 1,189 ಹಾಗೂ ಕಡೆಯ ಸ್ಥಾನದಲ್ಲಿರುವ ಮಾಗಡಿಯಲ್ಲಿ 595 ಮಹಿಳೆಯರು ‘ಗೃಹಲಕ್ಷ್ಮಿ’ ಹಣದಿಂದ ವಂಚಿತರಾಗಿದ್ದಾರೆ.
ಅರ್ಹರಿಗೆ ಮಾತ್ರ ‘ಗೃಹಲಕ್ಷ್ಮಿ’ ಸೌಲಭ್ಯ ಸಿಗುವಂತೆ ಮಾಡುವ ಉದ್ದೇಶದಿಂದ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು, ಆಗಾಗ ಪಟ್ಟಿಯನ್ನು ಪರಿಷ್ಕರಿಸುತ್ತಾ ಬಂದಿದೆ. ಯೋಜನೆಯ ಸೌಲಭ್ಯ ಪಡೆಯಲು ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿರುವ ಫಲಾನುಭವಿಗಳನ್ನು ಪಟ್ಟಿಯಿಂದ ಕೈ ಬಿಡುತ್ತಿದೆ.
ಪತಿ ಆದಾಯ ಪರಿಗಣನೆ: ‘ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ರಿಟರ್ನ್ಸ್ ಪಾವತಿದಾರರಾಗಿದ್ದಲ್ಲಿ ಅಂತಹವರು ಯೋಜನೆಗೆ ಅರ್ಹರಾಗಿರುವುದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲೆಯ ಉಪ ನಿರ್ದೇಶಕ ದಿನೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ಕಾರವು ಯೋಜನೆಗೆ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ 4,756 ಮಂದಿಯನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ’ ಎಂದು ಅವರು ಹೇಳಿದರು.
ಯಾರ್ಯಾರು ಅರ್ಹರು?: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದ್ಯಯ ಅನ್ನ ಯೋಜನೆ (ಎಎವೈ), ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಹಾಗೂ ಎಪಿಎಲ್ (ಬಡತನ ರೇಖೆಗಿಂತ ಮೇಲಿರುವ) ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ, ಒಬ್ಬರನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗುತ್ತದೆ.
ಮಹಿಳೆಗೆ ಆರ್ಥಿಕ ಬಲ ತುಂಬಿ ಸ್ವಾವಲಂಬಿಗಳನ್ನಾಗಿ ಮಾಡುವ ಆಶಯದೊಂದಿಗೆ ರಾಜ್ಯ ಸರ್ಕಾರವು ಮಹಿಳೆಯ ಬ್ಯಾಂಕ್ ಖಾತೆಗೆ ₹2 ಸಾವಿರ ಮೊತ್ತವನ್ನು ನೇರ ನಗದು ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಯನ್ನು 2023ರ ಜುಲೈನಲ್ಲಿ ಜಾರಿಗೆ ತಂದಿದೆ.
2,94,399: ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಗುರಿ
2,80,673: ಯೋಜನೆಯ ಗುರಿ ಸಾಧನೆ
95.34: ಶೇಕಡವಾರು ಸಾಧನೆ (ಅಕ್ಟೋಬರ್ 2025ರವರೆಗಿನ ಮಾಹಿತಿ)
ಎಲ್ಲಿ, ಎಷ್ಟು ಮಂದಿ ಹೊರಕ್ಕೆ
ಚನ್ನಪಟ್ಟಣ ತಾಲ್ಲೂಕು; 1,189 ಫಲಾನುಭವಿಗಳು
ಕನಕಪುರ ತಾಲ್ಲೂಕು; 1,236 ಫಲಾನುಭವಿಗಳು
ಮಾಗಡಿ ತಾಲ್ಲೂಕು; 595 ಫಲಾನುಭವಿಗಳು
ರಾಮನಗರ ತಾಲ್ಲೂಕು;1,736 ಫಲಾನುಭವಿಗಳು
ಒಟ್ಟು; 4,756 ಫಲಾನುಭವಿಗಳು
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಪತಿಯ ಆದಾಯ ಆಧರಿಸಿ ಫಲಾನುಭವಿಗಳ ಆರ್ಥಿಕ ಸ್ಥಿತಿಗತಿ ನಿರ್ಧರಿಸಲಾಗಿದೆ. ಫಲಾನುಭವಿಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ಅಂತಹವರ ಹೆಸರು ಕೈ ಬಿಡಲಾಗಿದೆ.– ದಿನೇಶ್ ಜೆ.ಆರ್, ಉಪ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.