ರಾಮನಗರ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಮನಗರ ತಾಲ್ಲೂಕು ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ವಿ.ಎಚ್. ರಾಜು ಅವರು, ನಗರದ ಮಿನಿ ವಿಧಾನಸೌಧದಲ್ಲಿ ಹೊಸದಾಗಿ ತೆರೆದಿರುವ ಕಚೇರಿಯಲ್ಲಿ ಗುರುವಾರ ಅಧಿಕಾರ ವಹಿಸಿಕೊಂಡರು.
ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಚುನಾವಣೆ ಸಮಯದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಬಡವ–ಶ್ರೀಮಂತ, ಜಾತಿ–ಧರ್ಮದ ಬೇಧವಿಲ್ಲದೆ ರಾಜ್ಯದ ಬಹುಪಾಲು ಕುಟುಂಬಗಳಿಗೆ ಯೋಜನೆಗಳು ತಲುಪಿವೆ. ಸಂಕಷ್ಟದಲ್ಲಿದ್ದ ಜನರಿಗೆ ಆಸರೆಯಾಗಿವೆ’ ಎಂದರು.
‘ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರಾಗಿ ನೇಮಿಸಿರುವುದು ನನಗೆ ಸಿಕ್ಕ ಸೌಭಾಗ್ಯವಾಗಿದೆ. ಆ ಮೂಲಕ ಜನರಿಗೆ
ಸೇವೆಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದಕ್ಕೆ ಕಾರಣರಾದ ಪಕ್ಷದ ರಾಜ್ಯ ನಾಯಕರು, ಶಾಸಕರು, ಮಾಜಿ ಸಂಸದರು, ಶಾಸಕರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವೆ’ ಎಂದು ಹೇಳಿದರು.
‘ತಾಲ್ಲೂಕಿನಲ್ಲಿ ಯೋಜನೆಗಳ ಜಾರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸುವೆ. ಯೋಜನೆಗಳ ಜಾರಿಗೆ ಏನಾದರೂ ತೊಡಕು ಪರಿಹರಿಸಿ, ಅರ್ಹರಿಗೆ ಯೋಜನೆಗಳು ತಪ್ಪದೆ ತಲುಪುವಂತೆ ಮಾಡುವೆ. ಸರ್ಕಾರದ ಆಶಯಕ್ಕೆ ಅನುಗುಣವಾಗಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿಕೆಲಸ ಮಾಡುವೆ’ ಎಂದು ತಿಳಿಸಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷ ಕೆ.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ಕುಮಾರ್, ಕೆಎಂಎಫ್ ಮಾಜಿ ಅಧ್ಯಕ್ಷ ಪಿ. ನಾಗರಾಜು, ಮುಖಂಡರಾದ ಕೆ. ಶೇಷಾದ್ರಿ ಶಶಿ, ಸಿಎನ್ಆರ್ ವೆಂಕಟೇಶ್, ದೊಡ್ಡವೀರಯ್ಯ, ರಾಜಶೇಖರ್, ಬಿ.ಸಿ. ಪಾರ್ವತಮ್ಮ, ಗುರುಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಶ್ರೀವತ್ಸ, ಕಾರ್ಯದರ್ಶಿ ತಿಮ್ಮೇಗೌಡ ಸೇರಿದಂತೆ ಹಲವರು ರಾಜು ಅವರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.