
ಹಾರೋಹಳ್ಳಿಯ ತಾಲ್ಲೂಕು ಆಡಳಿತ ಸೌಧ ಕಟ್ಟಡದಲ್ಲಿರುವ ಈಗಿನ ಪಟ್ಟಣ ಪಂಚಾಯಿತಿ ಕಚೇರಿ
ಹಾರೋಹಳ್ಳಿ: ಇಲ್ಲಿನ ಹಾರೋಹಳ್ಳಿ ಪಟ್ಟಣ ಪಂಚಾಯಿತಿಗೆ ಕಡೆಗೂ ಪುರಸಭೆಯಾಗಿ ಮೇಲ್ದರ್ಜೆಗೇರುವ ಭಾಗ್ಯ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪ.ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ನಿರ್ಣಯ ಕೈಗೊಳ್ಳಲಾಗಿದೆ.
ತಮ್ಮ ತವರು ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ಕೇಂದ್ರದ ಪ.ಪಂಚಾಯಿತಿ ಸ್ಥಳೀಯ ಸಂಸ್ಥೆಗೆ ಪುರಸಭೆಯಾಗಿ ಬಡ್ತಿ ಕೊಡಿಸುವಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಹಾರೋಹಳ್ಳಿ ಪಟ್ಟಣವು ಅಭಿವೃಧ್ಧಿಯ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದೆ.
ಬೆಂಗಳೂರು-ಕನಕಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಹಾರೋಹಳ್ಳಿ ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರ ಸ್ಥಾನವಾದ ರಾಮನಗರದಿಂದ 35 ಕಿ.ಮೀ. ಹಾಗೂ ರಾಜಧಾನಿ ಬೆಂಗಳೂರಿನಿಂದ ಕೇವಲ 45 ಕಿ.ಮೀ. ದೂರದಲ್ಲಿದೆ.
ಅಭಿವೃದ್ಧಿಗೆ ಪೂರಕ:
ಹಾರೋಹಳ್ಳಿಯು ಕೈಗಾರಿಕೆಯಾಗಿಷ್ಟೇ ಅಲ್ಲದೆ, ಶೈಕ್ಷಣಿಕ ಹಾಗೂ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿಯೂ ಅಭಿವೃದ್ಧಿ ಕಾಣುತ್ತಿದೆ. ವರ್ಷಗಳು ಕಳೆದಂತೆ ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆ ಹೆಚ್ಚಳದಿಂದಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಅಭಿವೃದ್ಧಿಗೆ ಹೊಸ ಇಂಬು ಸಿಕ್ಕಂತಾಗಿದೆ.
ಹಾರೋಹಳ್ಳಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಪ್ರತಿ ಕಾರ್ಯಕ್ರಮದಲ್ಲಿಯೂ ಭರವಸೆ ನೀಡುತ್ತಲೇ ಬಂದಿದ್ದರು. ಅವರು ಮಾತು ಸಾಕಾರವಾಗಿದ್ದು, ಪಟ್ಟಣದ ಪ್ರಜೆಗಳಲ್ಲಿ ಅಭಿವೃಧ್ಧಿಯ ಹೊಸ ಕನಸು ಶುರುವಾಗಿದೆ.
ಆಸ್ತಿ ಮೌಲ್ಯ ಹೆಚ್ಚಳ:
ಕೈಗಾರಿಕೆಗಳು, ವೈದ್ಯಕೀಯ ಕಾಲೇಜು, ಆಸ್ಪತ್ರೆ, ಎಂಜಿನಿಯರಿಂಗ್ ಕಾಲೇಜು, ಪಟ್ಟಣಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ, ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಚಟುವಟಿಕೆ ಹಾರೋಹಳ್ಳಿ ಕಡೆಗೆ ಹಿಗ್ಗುತ್ತಿರುವುದರಿಂದ ಈ ಭಾಗದ ಬಂಗಾರದ ಬೆಲೆ ಬಂದಿದೆ. ಇದೀಗ ಪುರಸಭೆಯಾಗಿ ಮೇಲ್ದರ್ಜೇರುವುದರಿಂದ ಆಸ್ತಿ ಮೌಲ್ಯ ಮತ್ತಷ್ಟು ಜಿಗಿಯಲಿದೆ.
ಇಷ್ಟು ದಿನ ಪಟ್ಟಣ ಪಂಚಾಯಿತಿಯಾಗಿದ್ದ ಹಾರೋಹಳ್ಳಿಗೆ ಸರ್ಕಾರದಿಂದ ಅನುದಾನಗಳು ಹೇಳಿಕೊಳ್ಳುವಷ್ಟು ಮಟ್ಭಿಗೆ ಲಭಿಸುತ್ತಿರಲಿಲ್ಲ. ಇದೀಗ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವುದರಿಂದ ಹೆಚ್ಚಿನ ಅನುದಾನ ಸಿಗಲಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶ್ರಮವಹಿಸಿ ಅಭಿವೃಧ್ಧಿ ಕೆಲಸಗಳ ಕಡೆಗೆ ಒತ್ತು ನೀಡಬೇಕು ಎನ್ನುತ್ತಾರೆ ಹಿರಿಯ ನಾಗರಿಕ ಗೋಪಾಲ್.
ಕಳೆದ 4 ವರ್ಷದ ಹಿಂದೆ ಹಾರೋಹಳ್ಳಿಯು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿತ್ತು. ಅಲ್ಲಿಂದ ಇಲ್ಲಿಯವರೆಗೂ ಸಹ ಅಧಿಕಾರಿಗಳೇ ಪಟ್ಟಣ ಪಂಚಾಯ್ತಿಯಲ್ಲಿ ದರ್ಬಾರ್ ನಡೆಸುತ್ತಿದ್ದಾರೆ. ಇನ್ನಾದರೂ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿ ಎಂದು ಸಲಹೆ ನೀಡಿದರು.
ವಾರ್ಡ್ ವಿಂಗಡಣೆ ಯಾಗಲಿ:
ಹಾರೋಹಳ್ಳಿಯನ್ನು ಪಟ್ಟಣ ಪಂಚಾಯಿತಿ ಎಂದು ಘೋಷಿಸಿ 3 ವರ್ಷವಾಯಿತು. ಆದರೆ, ಇದುವರೆಗೆ ಚುನಾವಣೆ ನಡೆಯುವುದರಿಲಿ ವಾರ್ಡ್ಗಳ ವಿಂಗಡಣೆಯೂ ನಡೆದಿಲ್ಲ. ಇದರಿಂದ ಪಟ್ಟಣದ ಅಭಿವೃದ್ಧಿ ಹೇಳಿಕೊಳ್ಳುವಂತೆ ಆಗದೆ ಹಿನ್ನಡೆಯಾಗಿದೆ. ಪುರಸಭೆ ಘೋಷಣೆಯಾದ ನಂತರವಾದರೂ ವಾರ್ಡ್ ವಿಂಗಡಣೆಯಾಗಿ ಚುನಾವಣೆ ನಡೆಯಲಿ. ಆಗ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಪಟ್ಟಣದ ನಿವಾಸಿ ಶಂಕರ್ ಅಭಿಪ್ರಾಯಪಟ್ಟರು.
ತಾಲ್ಲೂಕು ಕೇಂದ್ರವಾಗಿರುವ ಹಾರೋಹಳ್ಳಿಯಲ್ಲಿ ಮುಖ್ಯವಾಗಿ ಸರ್ಕಾರಿ ಕಟ್ಟಡಗಳು ಇಲ್ಲ. ಹೆಸರಿಗಷ್ಟೇ ಹಾರೋಹಳ್ಳಿ ತಾಲ್ಲೂಕಾಗಿದ್ದು, ವಿವಿಧ ಇಲಾಖೆಗಳ ಕೆಲಸಗಳಿಗೆ ಕನಕಪುರಕ್ಕೆ ಹೋಗಬೇಕಾಗಿದೆ. ಹಾಗಾಗಿ, ಎಲ್ಲಾ ಇಲಾಖೆಗಳು ಪಟ್ಟಣಕ್ಕೆ ಸ್ಥಳಾಂತರವಾಗಿ, ಇಲ್ಲಿಯೇ ಎಲ್ಲಾ ಕಚೇರಿಗಳು ಶುರುವಾಗಬೇಕು. ಸರ್ಕಾರಿ ಕಟ್ಟಡಗಳು ಸಹ ಬೇಗನೇ ತಲೆ ಎತ್ತಬೇಕು. ಈ ವಿಷಯದಲ್ಲಿಲ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು ಎಂದು ಆಗ್ರಹಿಸಿದರು.
ಪಟ್ಟಣಕ್ಕೆ 24 ಗ್ರಾಮ ಸೇರ್ಪಡೆ
ಪಟ್ಟಣವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸರ್ಕಾರದ ನಿರ್ಣಯದ ಬೆನ್ನಲ್ಲೇ, ಪಟ್ಟಣದ ವ್ಯಾಪ್ತಿಗೆ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರುವಯ್ಯನಪಾಳ್ಯ, ಹಳೆ ಗಬ್ಬಾಡಿ, ಬಡೇಸಾಬರದೊಡ್ಡಿ, ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಾಗರ, ದಾಸೇಗೌಡನದೊಡ್ಡಿ ಗ್ರಾಮಗಳನ್ನು ಒಳಗೊಂಡಂತೆ ಒಟ್ಟು 24 ಗ್ರಾಮಗಳು ನೂತನ ಪುರಸಭೆ ವ್ಯಾಪ್ತಿಗೆ ಸೇರಲಿವೆ. 2021ರ ಜನಗಣತಿ ಪ್ರಕಾರ ಪಟ್ಟಣವು 19.33 ಚ.ಕಿ.ಮೀ. ವಿಸ್ತೀರ್ಣ ಹಾಗೂ 21,351 ಜನಸಂಖ್ಯೆ ಹೊಂದಿದೆ. ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಿರುವ ಪಟ್ಟಣದ ವ್ಯಾಪ್ತಿಯಲ್ಲೀಗ ಕೃಷಿಯೇತರ ಚಟುವಟಿಕೆ ಅಂದಾಜು ಶೇ 70ಷ್ಟು ತಲುಪಿದೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು.
ಕೈಗಾರಿಕೆಗೆ ಹೆಸರುವಾಸಿಯಾದ ಪಟ್ಟಣ
ಹಾರೋಹಳ್ಳಿಯು ಕೈಗಾರಿಕಾ ಪ್ರದೇಶ ಹೊಂದಿದೆ. ನಗರೋಪಾದಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅರೆ ನಗರ ಪ್ರದೇಶವಾದ ಹಾರೋಹಳ್ಳಿಯು, ಏಷ್ಯಾ ಖಂಡದಲ್ಲೇ ಎರಡನೇ ಸ್ಥಾನದಲ್ಲಿರುವ ಬೃಹತ್ ಕೈಗಾರಿಕಾ ಪ್ರದೇಶ ಹೊಂದಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಇಲಾಖೆಯಿಂದ ಸುಮಾರು 4 ಸಾವಿರ ಸಾವಿರ ಎಕರೆ ಕೈಗಾರಿಕಾ ಪ್ರದೇಶ ಇಲ್ಲಿದ್ದು, ನೂರಾರು ಕೈಗಾರಿಕಾ ಉದ್ದಿಮೆಗಳು ಇಲ್ಲಿವೆ.
ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಭರವಸೆ ಈಡೇರಿಸಿದ್ದೇವೆ. ಜನರ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಅಭಿನಂದಿಸುವೆಎಚ್.ಎ. ಇಕ್ಬಾಲ್ ಹುಸೇನ್, ರಾಮನಗರ ಶಾಸಕ
ಪುರಸಭೆಯಾಗಿ ಮೇಲ್ದರ್ಜೆಗೇರುವುದರಿಂದ ಹೆಚ್ಚಿನ ಅನುದಾನ ಬರಲಿದೆ. ಅಭಿವೃದ್ಧಿ ಚಟುವಟಿಕೆಗೆ ಅನುಕೂಲವಾಗಲಿದ್ದು, ಪಟ್ಟಣದ ಚಹರೆ ಬದಲಾಗಲಿದೆಶ್ವೇತಾ ಬಾಯಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಹಾರೋಹಳ್ಳಿ
ರಾಜ್ಯ ಸರ್ಕಾರ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ನಿರ್ಧಾರ ಕೈಗೊಳ್ಳುವ ಮೂಲಕ, ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದಿದೆನಾಗೇಶ್, ಮುಖಂಡ, ತಾಮಸಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.