ಡಿಕೆ ಶಿವಕುಮಾರ್
ಪ್ರಜಾವಾಣಿ ಚಿತ್ರ
ಕನಕಪುರ (ರಾಮನಗರ): ‘ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಸಂಬಂಧಿಸಿದಂತೆ ಅದೇನು ರಕ್ತಪಾತ ಮಾಡುತ್ತಾರೆ? ಅದಕ್ಕೆಲ್ಲ ನಾವು ಹೆದರುವುದಿಲ್ಲ. ರಾಜಕೀಯಕ್ಕಾಗಿ ಯಾರೇ ವಿರೋಧಿಸಿದರೂ, ನಾವು ಯೋಜನೆಯನ್ನು ಜಾರಿ ಮಾಡೇ ಮಾಡುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಯೋಜನೆ ಜಾರಿಯಾದರೆ ರಕ್ತಪಾತವಾಗಲಿದೆ’ ಎಂಬ ತುಮಕೂರು ಗ್ರಾಮೀಣ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿಕೆ ಕುರಿತು ನಗರದಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ಯೋಜನೆಯಲ್ಲಿ ಅವರ ವೈಯಕ್ತಿಕ ವಿಚಾರಗಳಿವೆ. ಅದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
‘ಹಿಂದೆ ನಾನು ನೀರಾವರಿ ಸಚಿವ ಹಾಗೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಕಾಮಗಾರಿ ಕುರಿತು ಸಮಿತಿ ವರದಿ ಆಧರಿಸಿ ಯೋಜನೆಯನ್ನು ಜಾರಿ ಮಾಡುತ್ತೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಪ್ರತಿಷ್ಠೆ ಬಿಟ್ಟು ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಹೋಗಬೇಕು’ ಎಂದರು.
‘ಬ್ಲ್ಯಾಕ್ಮೇಲ್ ಮಾಡಿ ಸರ್ಕಾರವನ್ನು ಹೆದರಿಸುತ್ತೇವೆ ಎನ್ನುವವರಿಗೆ ನಾವು ಹೆದರುವುದಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಅವರು ಗುತ್ತಿಗೆದಾರರನ್ನು ಕರೆದು ಏನೇನು ಮಾತನಾಡಿದ್ದಾರೆಂದು ಗೊತ್ತಿದೆ. ಅದನ್ನೆಲ್ಲಾ ನಾನು ಬಹಿರಂಗವಾಗಿ ಹೇಳುವುದಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.