ರಾಮನಗರ: ಎಚ್ಐವಿ– ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ರೋಟರಿ ಸಿಲ್ಕ್ ಸಿಟಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಭಾಗಿತ್ವದಲ್ಲಿ ನಗರದಲ್ಲಿ ಶುಕ್ರವಾರ ರೆಡ್ರನ್ ಮ್ಯಾರಥಾನ್ ಜರುಗಿತು.
ಕಾಲೇಜು ಪ್ರಾಂಶುಪಾಲೆ ಕ್ಯಾಪ್ಟನ್ ಲಕ್ಷ್ಮಿ ಹಾಗೂ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಪ್ರಕಾಶ್ ಅವರು, ಕಾಲೇಜು ಮುಂಭಾಗ ಮ್ಯಾರಥಾನ್ಗೆ ಹಸಿರು ನಿಶಾನೆ ತೋರಿದರು. ಅಲ್ಲಿಂದ ಹೊರಟ ಮ್ಯಾರಥಾನ್ ರೋಟರಿ ವೃತ್ತ, ಐಜೂರು ವೃತ್ತ, ಕೆಂಗಲ್ ಹನುಮಂತಯ್ಯ ವೃತ್ತ, ರೈಲು ನಿಲ್ದಾಣ ಸೇರಿದಂತೆ 5 ಕಿ.ಮೀ. ಹಾದು ಮರಳಿ ಕಾಲೇಜು ತಲುಪಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಯುವಜನರು, ರೋಟರಿ ಕ್ಲಬ್ ಸದಸ್ಯರು ಸೇರಿದಂತೆ ಹಲವು ಭಾಗವಹಿಸಿದ್ದರು.
ಲಕ್ಷ್ಮಿ, ಅರುಣ್ ಕುಮಾರ್ ಪ್ರಥಮ: ಮ್ಯಾರಥಾನ್ನ ಬಾಲಕಿಯರ ವಿಭಾಗದಲ್ಲಿ ರಾಮನಗರದ ಲಕ್ಷ್ಮಿ ವಿ.ಜಿ ಪ್ರಥಮ, ಮಾಗಡಿಯ ಹೇಮಲತಾ ಟಿ.ಸಿ ದ್ವಿತೀಯ, ಕನಕಪುರದ ಸಿಂಧೂರ ಆರ್. ತೃತೀಯ ಹಾಗೂ ರಾಮನಗರದ ವರಲಕ್ಷ್ಮಿ ಮತ್ತು ಚನ್ನಪಟ್ಟಣದ ಶ್ರುತಿ ಎಚ್.ಆರ್ ಸಮಾಧಾನಕರ ಬಹುಮಾನ ಪಡೆದರು.
ಬಾಲಕರ ವಿಭಾಗದಲ್ಲಿ ಮಾಗಡಿಯ ಅರುಣ್ಕುಮಾರ್ ಎಲ್. ಪ್ರಥಮ, ವಿಕಾಸ್ ದ್ವಿತೀಯ, ಕನಕಪುರದ ಚಂದನ್ ತೃತೀಯ ಹಾಗೂ ಚನ್ನಪಟ್ಟಣದ ಆಕಾಶ್ ಮತ್ತು ಜೀವನ್ ಸಮಾಧಾನಕರ ಬಹುಮಾನ ಪಡೆದರು. ವಿಜೇತರಿಗೆ ಗಣ್ಯರು ಪದಕ ಹಾಗೂ ನಗದು ಬಹುಮಾನ ವಿತರಿಸಿದರು.
ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಶಶಿಕಿರಣ್, ಆರೋಗ್ಯ ಇಲಾಖೆಯ ಡಾ. ನಳಿನಿ, ಕಾರ್ಯದರ್ಶಿ ಎಂ.ಬಿ. ಪರಮೇಶ್, ಮಾಜಿ ಅಧ್ಯಕ್ಷ ರವಿಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎಂ. ಶಿವಕುಮಾರ್, ಆರೋಗ್ಯ ಇಲಾಖೆಯ ಪ್ರಭಾಕರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.