
ತಿಂಗಳ ಹಿಂದೆ ಮಾಗಡಿ ತಾಲ್ಲೂಕಿನ ಸಿಡಿಗನಹಳ್ಳಿಯಲ್ಲಿ ನಡೆದಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಪುತ್ರನ ಕಾರಿನ ಹಿಟ್ ಆ್ಯಂಡ್ ರನ್ನಿಂದ ಯುವಕ ರಾಜೇಶ್ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ತಂದೆ ಗುಡ್ಡೇಗೌಡ, ತಾಯಿ ನಾಗರತ್ನ ಹಾಗೂ ಅಕ್ಕ ನಂದಿನಿ ಅವರು ಮಾಧ್ಯಮದೊಂದಿಗೆ ಅಳಲು ತೋಡಿಕೊಂಡರು
ಮಾಗಡಿ (ರಾಮನಗರ): ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಪುತ್ರನ ಕಾರಿನ ಹಿಟ್ ಆ್ಯಂಡ್ ರನ್ನಿಂದ ಯುವಕ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವಕನ ಕುಟುಂಬದವರಿಗೆ ಪರಿಹಾರ ಕೊಡುವುದಾಗಿ ರೇವಣ್ಣ ಅವರು ಮನೆಗೆ ಕರೆಯಿಸಿಕೊಂಡು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಿಂಗಳ ಹಿಂದೆ ತಾಲ್ಲೂಕಿನ ಸಿಡಿಗನಹಳ್ಳಿಯಲ್ಲಿ ನಡೆದಿದ್ದ ಅಪಘಾತದಲ್ಲಿ ಮೃತಪಟ್ಟಿದ್ದ ಬೆಳಗುಂಬ ಗ್ರಾಮದ ರಾಜೇಶ್ (27) ಅವರ ತಂದೆ ಗುಡ್ಡೇಗೌಡ, ತಾಯಿ ನಾಗರತ್ನ ಹಾಗೂ ಅಕ್ಕ ನಂದಿನಿ ಅವರು, ರೇವಣ್ಣ ಅವರ ವಿರುದ್ಧ ಮಾಧ್ಯಮದ ಜೊತೆಗೆ ಮಂಗಳವಾರ ಅಸಮಾಧಾನ ತೋಡಿಕೊಂಡರು.
‘ಅಪಘಾತ ನಡೆದ ದಿನ ನಮ್ಮ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ರೇವಣ್ಣ, ಗ್ರಾಮದ ಹಿರಿಯರ ಮೂಲಕ ಮಾಗಡಿಯಲ್ಲಿರುವ ತಮ್ಮ ತೋಟದ ಮನೆಗೆ ನಮ್ಮನ್ನು ಕರೆಯಿಸಿಕೊಂಡರು. ನಿಮ್ಮ ಮಗನಿಗೆ ಸಾಯಲು ನಮ್ಮ ಕಾರೇ ಬೇಕಿತ್ತಾ? ಘಟನೆ ಕುರಿತು ಮಾಧ್ಯಮದ ಮುಂದೆ ಮಾತನಾಡಿ ನಮ್ಮ ಮರ್ಯಾದೆ ಹಾಳು ಮಾಡಿದ್ದೀರಿ ಎಂದು ಧಮ್ಕಿ ಹಾಕಿದರು’ ಎಂದು ಕುಟುಂಬದವರು ದೂರಿದರು.
‘ಪರಿಹಾರವಾಗಿ ₹2 ಲಕ್ಷ ಕೊಡುವೆ ತೆಗೆದುಕೊಂಡು ಹೋಗಿ. ಇಲ್ಲವಾದರೆ ಬಿಡಿ. ಹೇಗಿದ್ದರೂ ನಮ್ಮ ಕಾರಿಗೆ ವಿಮೆ ಇದೆ. ಪ್ರಕರಣವನ್ನು ನಾನು ಕೋರ್ಟ್ನಲ್ಲಿ ನೋಡಿಕೊಳ್ಳುತ್ತೇನೆ ಎಂದು ಉಡಾಫೆಯಾಗಿ ಹೇಳಿದರು. ತಮ್ಮ ಮಗನಿಂದ ಕುಟುಂಬವೊಂದರ ಏಕೈಕ ಪುತ್ರ ತೀರಿಕೊಂಡಿದ್ದಾನೆ ಎಂಬ ಕನಿಕರವನ್ನು ಸಹ ರೇವಣ್ಣ ತೋರಲಿಲ್ಲ’ ಎಂದು ನೋವಿನಿಂದ ನುಡಿದರು.
‘ಊರಿನವರ ಎದುರಿಗೇ ವಯಸ್ಸಾದ ತಂದೆ–ತಾಯಿಗೆ ನೋವಾಗುವಂತೆ ಮಾತನಾಡಿದರು. ನಾವೇನೂ ಕೇಳದಿದ್ದರೂ, ಅವರೇ ಪರಿಹಾರ ಕೊಡುತ್ತೇವೆ ಬನ್ನಿ ಎಂದು ಕರೆಯಿಸಿಕೊಂಡು ಅವಮಾನಿಸಿದರು. ಅವರ ಮಾತುಗಳಿಂದ ನಮಗೆ ತುಂಬಾ ನೋವಾಯಿತು. ಅವರ ಹಣ ಮುಟ್ಟದೆ ನಾವು ಮನೆಗೆ ವಾಪಸ್ ಬಂದೆವು’ ಎಂದು ಹೇಳಿದರು.
ಕಾನೂನು ಹೋರಾಟ: ‘ಪ್ರಕರಣದಲ್ಲಿ ಪೊಲೀಸರು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ರಾಜೇಶ್ಗೆ ಡಿಕ್ಕಿ ಹೊಡೆದ ಕಾರಿನ ಅಪರಿಚಿತ ಚಾಲಕ ಯಾರೆಂಬುದನ್ನು ಇದುವರೆಗೆ ಪತ್ತೆಹಚ್ಚಿಲ್ಲ. ಬಡವರ ಜೀವಕ್ಕೆ ಬೆಲೆ ಇಲ್ಲವಾಗಿದೆ. ಏಕೈಕ ಪುತ್ರನನ್ನು ಕಳೆದುಕೊಂಡ ನಮ್ಮ ಕುಟುಂಬಕ್ಕೆ ಆಸರೆ ಇಲ್ಲವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕಾನೂನು ಹೋರಾಟ ನಡೆಸುತ್ತೇವೆ’ ಎಂದು ರಾಜೇಶ್ ಅಕ್ಕ ನಂದಿನಿ ಹೇಳಿದರು.
ಡಿ. 12ರಂದು ರಾತ್ರಿ ರೇವಣ್ಣ ಅವರ ಪುತ್ರ ಆರ್. ಶಶಾಂಕ್ ಅವರ ಕಾರು ತಾಲ್ಲೂಕಿನ ಗುಡೇಮಾರನಹಳ್ಳಿ ಮುಖ್ಯರಸ್ತೆಯ ಸಿಡಿಗನಹಳ್ಳಿ ಬಳಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ, ಚಾಲಕ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅಪಘಾತ ನಡೆದಿರುವುದು ಸತ್ಯ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಯುವಕನ ಸಾವಿನಿಂದ ನನಗೂ ನೋವಾಗಿದೆ. ಅವರು ನಮ್ಮ ಕ್ಷೇತ್ರದವರಾಗಿದ್ದರಿಂದ ಮಾನವೀಯ ದೃಷ್ಟಿಯಿಂದ ಕುಟುಂಬದವರನ್ನು ಮನೆಗೆ ಕರೆಸಿಕೊಂಡಿದ್ದೆ. ಆಗ ಸ್ಥಳೀಯ ಮುಖಂಡರಿದ್ದರು. ಏನು ಬೇಕೆಂದು ಕೇಳಿದಾಗ, ಮಗಳ ಮದುವೆಗೆ ₹25 ಲಕ್ಷ ಕೊಡಿ ಎಂದರು.
₹2 ಲಕ್ಷ ಕೊಡುತ್ತೇನೆ ಎಂದಿದ್ದಕ್ಕೆ ಒಪ್ಪದೆ ಎದ್ದು ಹೋದರು. ಕುಳಿತು ಮತ್ತಷ್ಟು ಕೇಳಿದ್ದರೆ ಕೊಡುತ್ತಿದ್ದೆ. ರಾಜ್ಯದಲ್ಲಿ ನಿತ್ಯ ಅಪಘಾತದಿಂದ ಸಾವುಗಳು ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಯಾರು ಪರಿಹಾರ ಕೊಡುತ್ತಾರೆ? ನಮ್ಮ ಕಾರಿಗೆ ವಿಮೆ ಇದೆ. ಮುಂದೆ ವಿಮಾ ಕಂಪನಿಯಿಂದ ಪರಿಹಾರ ಸಿಗುತ್ತದೆ. ದುಃಖದಲ್ಲಿರುವ ಯುವಕನ ಕುಟುಂಬದವರಿಗೆ ನಾನು ಅವಮಾನಿಸುವುದಾಗಲಿ ಅಥವಾ ನಿಂದಿಸುವುದಾಗಲಿ ಮಾಡಿಲ್ಲ. ಅವರ ಆರೋಪದ ಕುರಿತು, ಎರಡ್ಮೂರು ದಿನದಲ್ಲಿ ಮಾಗಡಿ ಬಂದು ಮಾತನಾಡುವೆ’ ಎಂದು ಎಚ್.ಎಂ. ರೇವಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.