ADVERTISEMENT

ಗುಣಮಟ್ಟದ ಇಳುವರಿ ಇದ್ದರೆ ಆದಾಯ ಕಟ್ಟಿಟ್ಟ ಬುತ್ತಿ

ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡ ಹಲಸಬೆಲೆ ಗ್ರಾಮದ ಚಂದ್ರಯ್ಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 4:49 IST
Last Updated 22 ಅಕ್ಟೋಬರ್ 2025, 4:49 IST
ಮಾಗಡಿ ತಾಲ್ಲೂಕಿನ ಹಲಸಬೆಲೆ ಗ್ರಾಮದ ಪ್ರಗತಿಪರ ರೈತ ಚಂದ್ರಯ್ಯ ಅವರ ಸಮಗ್ರ ಕೃಷಿ ತೋಟಕ್ಕೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿದ ಸಂದರ್ಭ
ಮಾಗಡಿ ತಾಲ್ಲೂಕಿನ ಹಲಸಬೆಲೆ ಗ್ರಾಮದ ಪ್ರಗತಿಪರ ರೈತ ಚಂದ್ರಯ್ಯ ಅವರ ಸಮಗ್ರ ಕೃಷಿ ತೋಟಕ್ಕೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿದ ಸಂದರ್ಭ   

ಮಾಗಡಿ: ರೈತರು ಶ್ರಮದಿಂದ ಬೆಳೆ ಬೆಳೆದು ಸಮಾಜಕ್ಕೆ ಅನ್ನದಾತರಾಗಿದ್ದಾರೆ. ಆದರೆ, ಇಂದಿನ ಕೃಷಿಯಲ್ಲಿ ಕೇವಲ ಉತ್ಪಾದನೆ ಮಾತ್ರವಲ್ಲ, ಗುಣಮಟ್ಟದ ಉತ್ಪಾದನೆಯೂ ಅತಿ ಮುಖ್ಯವಾಗಿದೆ ಎಂದು ಅರಿತು ಕೃಷಿಯಲ್ಲಿ ತೊಡಗಿಸಿಕೊಂಡವರು ತಾಲ್ಲೂಕಿನ ಹಲಸಬೆಲೆ ಗ್ರಾಮದ ಚಂದ್ರಯ್ಯ.

ಪದವಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕೃಷಿಯನ್ನು ಖುಷಿಯಿಂದ ಮಾಡಬೇಕೆಂದು ಪಣತೊಟ್ಟವರು. ಸದಾಕಾಲ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡ ಕೃಷಿಕ.

ಸಮಗ್ರ ಕೃಷಿ ಅಳವಡಿಕೆ: ತಮಗಿರುವ 5ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಿದ್ದಾರೆ. ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಪೇರಲೆ, ಸೇಬು, ಹಲಸು, ಹೂವಿನ ಬೆಳೆಗಳಾದ ಸೇವಂತಿಗೆ, ಚೈನಾ ಆಸ್ಟರ್ ಇತ್ಯಾದಿ ಆಧುನಿಕ ಪದ್ಧತಿ ಅನುಸರಿಸಿ ಬೆಳೆಯುತ್ತಿದ್ದಾರೆ.

ADVERTISEMENT

ಅದಲ್ಲದೆ ರಾಗಿ, ತೊಗರಿ, ಅವರೆ ಬೆಳೆಗಳ ನೂತನ ತಳಿ ಬೆಳೆಯುತ್ತಿದ್ದಾರೆ. ಹಾಗೆಯೇ ಅರಣ್ಯ ಕೃಷಿ ಮಾಡುತ್ತಿದ್ದು ತೇಗ, ಹೆಬ್ಬೇವು ಕೂಡ ಬೆಳೆದಿದ್ದಾರೆ. ಕೃಷಿ ಪೂರಕ ಉಪಕಸುಬುಗಳಾದ ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಸಹ ಮಾಡುತ್ತಿದ್ದಾರೆ. ತಂತ್ರಜ್ಞಾನವನ್ನು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನೆ ಇಲಾಖೆ ಮಾರ್ಗದರ್ಶನದಿಂದ ಅತಿ ಆಸಕ್ತಿಯಿಂದ ಅಳವಡಿಕೆ ಮಾಡಿಕೊಂಡು ಗುಣಮಟ್ಟದ ಇಳುವರಿ ಮತ್ತು ಆದಾಯ ಪಡೆಯುತ್ತಿದ್ದಾರೆ.

ಮಣ್ಣಿನ ಆರೋಗ್ಯಕ್ಕೆ ಒತ್ತು: ಯಾವುದೇ ಬೆಳೆ ಯಶಸ್ವಿಯಾಗುವುದರ ಮೊದಲು ಆರೋಗ್ಯವಂತ ಮಣ್ಣು ಅತಿ ಅವಶ್ಯ. ಮಣ್ಣಿನ ಆರೋಗ್ಯಕ್ಕಾಗಿ ಇವರು ಮೊದಲು ಮಣ್ಣು ಪರೀಕ್ಷೆ ಮಾಡಿಸಿ ಮಣ್ಣು ಆರೋಗ್ಯ ಚೀಟಿ ಪಡೆದು ಅದರ ಆಧಾರದ ಮೇಲೆ ಈ ಮೊದಲು ಉಪಯೋಗಿಸುತ್ತಿದ್ದ ಕೇವಲ ರಾಸಾಯನಿಕ ಗೊಬ್ಬರದ ಬಳಕೆ ಬದಲು ವಿಜ್ಞಾನಿಗಳ ಶಿಫಾರಸ್ಸಿನಂತೆ ಸಾವಯವ ಇಂಗಾಲ ಹೆಚ್ಚಿಸಲು ಮತ್ತು ಫಲವತ್ತತೆಗಾಗಿ ವಿವಿಧ ಹಸಿರೆಲೆ ಗೊಬ್ಬರಗಳಾದ ಗ್ಲಿರಿಸಿಡಿಯಾ, ಅಪ್ಪೆಣಬು ಬೆಳೆದು ಭೂಮಿಗೆ ಸೇರಿಸುತ್ತಾರೆ. ಗುಣಮಟ್ಟದ ಸಾವಯವ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ಮತ್ತು ಸೂಕ್ಷ್ಮ ಪೋಷಕಾಂಶ ಮಣ್ಣಿಗೆ ಬೆರೆಸಿ ಮಣ್ಣಿನ ಆರೋಗ್ಯ ಕಾಪಾಡುತ್ತಿದ್ದಾರೆ.

ಮಣ್ಣಿನ ಆರೋಗ್ಯಕ್ಕಾಗಿ ಬೇಕಾಗುವ ಎರೆಹುಳು ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರವನ್ನು ತಮ್ಮ ಜಮೀನಿನಲ್ಲಿ ಲಭ್ಯವಿರುವ ಕೃಷಿ ತ್ಯಾಜ್ಯ ಹಾಗೂ ಪಶು ತ್ಯಾಜ್ಯದಿಂದ ತಾವೇ ತಯಾರಿಸಿಕೊಳ್ಳುತ್ತಾರೆ. ಕಡಿಮೆ ಅವಧಿಯಲ್ಲಿ ಉತ್ಕೃಷ್ಟ ಗೊಬ್ಬರ ತಯಾರಿಸಿ ಬೆಳೆಗಳಿಗೆ ಉಪಯೋಗಿಸುತ್ತಾರೆ.

ನೀರಿನ ಸದ್ಬಳಕೆ: ಕೃಷಿಗೆ ನೀರು ಜೀವಾಳ. ತಮ್ಮ ಜಮೀನಿನಲ್ಲಿ ನೀರು ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿ ಇಳಿಜಾರಿಗೆ ಅಡ್ಡವಾಗಿ ಬಂಧಗಳ ನಿರ್ಮಾಣ, ನೀರು ಕಾಲುವೆಗಳ ನಿರ್ಮಾಣ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಶೇ40ರಿಂದ 50ರಷ್ಟು ನೀರು ಉಳಿತಾಯವಾಗುತ್ತದೆ ಹಾಗೂ ಹೆಚ್ಚಿನ ಪ್ರದೇಶಕ್ಕೆ ನೀರು ಹಾಯಿಸಬಹುದು.

ಯಾಂತ್ರೀಕರಣಕ್ಕೆ ಒತ್ತು: ಯಾಂತ್ರೀಕರಣದಿಂದ ಕೃಷಿ ಸುಲಭ ಎಂದು ಚಂದ್ರಯ್ಯ ಅನುಭವದ ಮಾತು. ಹಾಗಾಗೇ ಅವರು ಟಿಲ್ಲರ್, ಸೈಕಲ್ ವೀಡರ್, ಪವರ್ ವೀಡರ್ ಮತ್ತು ತೆಂಗಿನ ಮರ ಹತ್ತುವ ಸಾಧನಗಳನ್ನು ಉಪಯೋಗಿಸಿಕೊಂಡು ಸಕಾಲಕ್ಕೆ ಕೃಷಿ ಕಾರ್ಯ ಕೈಗೊಂಡು ಉತ್ಪಾದಕತೆ ವೆಚ್ಚ ಕಡಿಮೆಗೊಳಿಸಿ ಆದಾಯ ಹೆಚ್ಚಿಸಿಕೊಂಡಿದ್ದಾರೆ.

ಮಾರುಕಟ್ಟೆ ಮತ್ತು ಆದಾಯ: ಗುಣಮಟ್ಟದ ಇಳುವರಿಗೆ ಆದಾಯ ಕಟ್ಟಿಟ್ಟ ಬುತ್ತಿಯೆಂಬುದನ್ನ ಅರಿತ ಇವರು, ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಸ್ಥಳೀಯ ಮಾರುಕಟ್ಟೆಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಹೂವುಗಳನ್ನು ಹಬ್ಬಗಳ ಸಂದರ್ಭಗಳಿಗೆ ಸಿಗುವ ರೀತಿಯಲ್ಲಿ ನಾಟಿ ಮಾಡಿಕೊಂಡು ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ವಿಜ್ಞಾನಿಗಳ ಸಲಹೆ ಮೇರೆಗೆ ಹೊಸ ವಾಣಿಜ್ಯ ಬೆಳೆಗಳನ್ನ (ಕಾಳು ಮೆಣಸು, ಏಲಕ್ಕಿ) ಬೆಳೆದು ಅಧಿಕ ಲಾಭಗಳಿಸುತ್ತಿದ್ದಾರೆ. ಇವರು ತಮಗಿರುವ ಜಮೀನಿನಲ್ಲಿ ವಾರ್ಷಿಕವಾಗಿ ₹5 ರಿಂದ 5.5 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ.

ರೈತ ಚಂದ್ರಯ್ಯ ಬೆಳೆದಿರುವ ಹೂವಿನ ಬೆಳೆ
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ 

ಕೃಷಿಯಲ್ಲಿ ರೈತನ ಸಾಧನೆ

ಇವರು ಉತ್ಸಾಹಿ ಕೃಷಿಕರು. ಶಾಲೆ- ಸಾರ್ವಜನಿಕ ಸಭೆಗಳಲ್ಲಿ ವಿಶೇಷವಾಗಿ ಕೃಷಿ ವಿಷಯದ ಬಗ್ಗೆ ಅರಿವು ಮೂಡಿಸುತ್ತಾ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ರೈತ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಐಸಿಎಆರ್-ಎನ್.ಬಿ.ಎ.ಐ.ಆರ್ ನಿಂದ ಪ್ರಗತಿಪರ ಕೃಷಿಕ ಪ್ರಶಸ್ತಿ ಮತ್ತು ಇನ್ನು ಅನೇಕ ಪ್ರಶಸ್ತಿಗಳನ್ನು ಪಡೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ ಎಂದು ಕೃಷಿ ವಿಸ್ತರಣಾ ವಿಜ್ಞಾನಿ ಡಾ. ಸೌಜನ್ಯ. ಎಸ್.ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.