ADVERTISEMENT

ಕನಕಪುರ | ನಗರಸಭೆ ಅವ್ಯವಸ್ಥೆ: ಸದಸ್ಯರಿಂದಲೇ ಆಕ್ರೋಶ

ಸಾಮಾನ್ಯ ಸಭೆಯಲ್ಲಿ ದೂರುಗಳ ಸರಮಾಲೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:08 IST
Last Updated 30 ಅಕ್ಟೋಬರ್ 2025, 2:08 IST
ಕನಕಪುರ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ಸಂಜಯ್ ಮಾತನಾಡಿದರು
ಕನಕಪುರ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ಸಂಜಯ್ ಮಾತನಾಡಿದರು   

ಕನಕಪುರ: ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.

ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳಾಗದೆ ಹರಾಜಕತೆ ಸೃಷ್ಟಿಯಾಗಿದೆ. ಅಧಿಕಾರಿಗಳು ತಮಗಿಷ್ಟ ಬಂದಂತೆ ರಜೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಹಾಗೂ ನಾಮ ನಿರ್ದೇಶಕ ಸದಸ್ಯರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ಪ್ರತಿದಿನ 20 ರಿಂದ 25 ಮಂದಿ ರಜೆ ಹಾಕುತ್ತಾರೆ. ಒಬ್ಬ ಅಧಿಕಾರಿ ರಜೆ ಹಾಕಿದರೆ ಹದಿನೈದು ದಿನವಾದರೂ ಕಚೇರಿಗೆ ಬರುವುದಿಲ್ಲ. ಇಲ್ಲಿ ಹೇಳುವವರು ಕೇಳುವವರು ಇಲ್ಲದೆ ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ನಾಮ ನಿರ್ದೇಶನ ಸದಸ್ಯ ಕೋಟೆ ಮುಕುಂದರಾವ್, ವೀರೇಶ್, ವೆಂಕಟೇಶ್ ಆಕ್ರೋಶ ಹೊರಹಾಕಿದರು. 

ADVERTISEMENT

ಜೆಡಿಎಸ್ ಸದಸ್ಯ ಲೋಕೇಶ್ ಮಾತನಾಡಿ ‘ಆರೋಗ್ಯ ಇಲಾಖೆ ಅಧಿಕಾರಿಗಳು ಅಧ್ಯಯನ ಪ್ರವಾಸ ಮಾಡಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸುಖಾ ಸುಮ್ಮನೆ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ. ಹಾಗಾಗಿ ಆ ಹಣವನ್ನು ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕೆಂದು ಆಗ್ರಹಿಸಿದರು.

‘ಆರೋಗ್ಯ ಇಲಾಖೆಯಲ್ಲಿ ಮೂರು ಮಂದಿ ಆರೋಗ್ಯ ನಿರೀಕ್ಷಕರಿದ್ದಾರೆ. ಅವರು ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ. ಇವರು ಬರುವವರೆಗೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಅಗತ್ಯ ವಸ್ತುಗಳು ಸಿಗುವುದಿಲ್ಲ’ ಎಂದರು.

ನಗರಸಭೆಯಲ್ಲಿ ಸಿಬ್ಬಂದಿಗಳೊಂದಿಗೆ ಮೇಲಾಧಿಕಾರಿಗಳ ಸಮನ್ವಯತೆ ಇಲ್ಲ‌. ಇದರಿಂದ ನಗರಸಭೆ ಆಡಳಿತ ಹಳಿ ತಪ್ಪುತ್ತಿದೆ ಎಂದರು.

ಭೈರವೇಶ್ವರ ರಾಜು ಮಾತನಾಡಿ, ‘ನಗರಸಭೆಯಲ್ಲಿ ಸದಸ್ಯರ ಇ-ಖಾತೆಗಳನ್ನೇ ಇಲ್ಲಿನ ಅಧಿಕಾರಿಗಳು ಮಾಡಿಕೊಟ್ಟಿಲ್ಲ, ಇನ್ನೂ ಜನಸಾಮಾನ್ಯರ ಕಥೆ ಏನು? ಕಂದಾಯ ಇಲಾಖೆಯನ್ನು ದಿವಾಳಿ ಮಾಡಲು ಹೊರಟ್ಟಿದ್ದಾರೆ’ ಎಂದು ಆರೋಪಿಸಿದರು.

ಸದಸ್ಯ ವಿಜಯ್ ಕುಮಾರ್ ಮಾತನಾಡಿ, ಪೌರಕಾರ್ಮಿಕರು ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ನಮ್ಮ ವಾರ್ಡಿನಲ್ಲಿ ಕೆಲಸಗಳಾಗುತ್ತಿಲ್ಲ. ಕೆಲವರು ಒಂದು ವರ್ಷದಿಂದ ಕೆಲಸಕ್ಕೆ ಬಂದಿಲ್ಲ. ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ ಎಮದು ಪ್ರಶ್ನಿಸಿದರು.

ಸದಸ್ಯ ಕೋಟೆ ಕಿರಣ್ ಮಾತನಾಡಿ, ಟೆಂಡರ್ ತೆಗೆದುಕೊಳ್ಳುವ ಗುತ್ತಿಗೆದಾರರು ತಿಂಗಳು ಕಳೆದರೂ ಕಾಮಗಾರಿಗಳನ್ನು ಮಾಡುತ್ತಿಲ್ಲ. ಕೋಟೆಯಲ್ಲಿ ಕಾಮಗಾರಿ ಕೈಗೊಂಡು ಒಂದೂವರೆ ತಿಂಗಳು ಕಳೆದಿದೆ, ಆದರೂ ಕಾಮಗಾರಿ ಮುಗಿದಿಲ್ಲ. ಗುತ್ತಿಗೆದಾರರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದರು.

ಪೌರಕಾರ್ಮಿಕರ ದಿನಾಚರಣೆಗೆ ಮೊದಲು ಕ್ರೀಡೆ ಆಯೋಜನೆ ಮಾಡಿಲ್ಲ. ಪೌರ ಕಾರ್ಮಿಕರಿಗೆ ಉಡುಗೊರೆ ನೀಡಿಲ್ಲ. ಅದರ ಹಣವನ್ನು ಏನು ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್ ಸಂಜಯ್ ಮಾತನಾಡಿ, ನನಗೆ ತಾಲ್ಲೂಕು ಆಡಳಿತದ ಜವಾಬ್ದಾರಿ ಇದೆ. ಇದರ ಜೊತೆಗೆ ಹೆಚ್ಚುವರಿಯಾಗಿ ನಗರಸಭೆ ಜವಾಬ್ದಾರಿ ನೀಡಿದ್ದಾರೆ. ಇನ್ನು ಮುಂದೆ ಪ್ರತಿದಿನ ಅರ್ಧ ದಿನ ನಗರಸಭೆ ಕೆಲಸ ಕಾರ್ಯಗಳಿಗೆ ಸಮಯ ಮೀಸಲಿಟ್ಟು ಬಾಕಿ ಇರುವ ಕೆಲಸ ಹಾಗೂ ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಈ ಮೂಲಕ ಆಡಳಿತ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ಹೇಮರಾಜು, ಉಪಾಧ್ಯಕ್ಷ ಸೈಯದ್ ಸಾಧಿಕ್, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.