ಕನಕಪುರ: ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು.
ಸ್ವ ಕರವೇ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ಭಾಸ್ಕರ್, ಜಯ ಕರ್ನಾಟಕ ಸಂಘಟನೆಯ ವೀರೇಶ್ ಮಾತನಾಡಿ, ಪ್ರತಿವರ್ಷದಂತೆ ಕನ್ನಡಾಂಬೆ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಜಾನಪದ ಕಲಾತಂಡ ಮತ್ತು ಆಶಾ ಅಂಗನವಾಡಿ ಕಾರ್ಯಕರ್ತೆಯರ ಪೂರ್ಣಕುಂಭ ಕಳಸದೊಂದಿಗೆ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಅಂಬೇಡ್ಕರ್ ಭವನದವರೆಗೂ ಅದ್ದೂರಿ ಮೆರವಣಿಗೆ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ಕಚೇರಿ ಮತ್ತು ಮೆರವಣಿಗೆ ಸಾಗುವ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಕ್ರಮ ಕೈಗೊಳ್ಳಬೇಕು. ಮೆರವಣಿಗೆಯಲ್ಲಿ ಸಾಗುವ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಂತೆ ನಗರಸಭೆ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.
ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿ ರಮೇಶ್, ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಜಯಸಿಂಹ ಮಾತನಾಡಿ, ರಾಜ್ಯೋತ್ಸವದಲ್ಲಿ ನಾಡು– ನುಡಿ, ನೆಲ ಜಲ ಸೇರಿದಂತೆ ನಿರಂತರವಾಗಿ ಕನ್ನಡಪರ ಹೋರಾಟ ಮಾಡಿಕೊಂಡು ಬಂದಿರುವ ಹೋರಾಟಗಾರನ್ನು ಸತ್ಕರಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಮಾತನಾಡಿ, ತಹಶೀಲ್ದಾರ್ ಬಳಿ ಚರ್ಚಿಸಿ ಅದ್ದೂರಿ ಮತ್ತು ಅರ್ಥಪೂರ್ಣ ರಾಜ್ಯೋತ್ಸವ ಆಚರಿಸಲು ಕ್ರಮವಹಿಸಲಾಗುವುದು ಎಂದರು.
ತಾಲ್ಲೂಕು ಕಚೇರಿ ಶಿರಸ್ತೆದಾರ್ ರಘು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಪ್ರಕಾಶ್, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಯು.ಸಿ. ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಮುಖಂಡರಾದ ಕೆ.ಕಾಳಯ್ಯ, ಮಿಲ್ಟ್ರಿ ರಾಮಣ್ಣ, ಕೆ.ಆರ್.ಸುರೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.