ADVERTISEMENT

ನುಡಿನಮನ | ಸೇವೆಗೆ ಮಾದರಿಯಾಗಿದ್ದ ಡಾ. ಹೆಗ್ಡೆ: ಕೆ. ಶೇಷಾದ್ರಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 3:14 IST
Last Updated 12 ಡಿಸೆಂಬರ್ 2025, 3:14 IST
ರಾಮನಗರದ ರಾಯಲ್ ಕನ್ವೆನ್ಷನ್‌ ಹಾಲ್‌ನಲ್ಲಿ ಡಾ. ಕೆ.ಪಿ. ಹೆಗ್ಡೆ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ನಿಧನರಾದ ಬಡವರ ವೈದ್ಯ ಖ್ಯಾತಿಯ ಡಾ.ಕೆ.ಪಿ. ಹೆಗ್ಡೆ ಅವರಿಗೆ ನುಡಿ ನಮನ ಕಾರ್ಯಕ್ರಮ ಜರುಗಿತು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ರೈ, ಹೆಗ್ಡೆ ಕುಟುಂಬದ ಸದಸ್ಯರು ಹಾಗೂ ವಿವಿಧ ಸಂಘ–ಸಂಘಟನೆಗಳ ಮುಖಂಡರು ಇದ್ದಾರೆ
ರಾಮನಗರದ ರಾಯಲ್ ಕನ್ವೆನ್ಷನ್‌ ಹಾಲ್‌ನಲ್ಲಿ ಡಾ. ಕೆ.ಪಿ. ಹೆಗ್ಡೆ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ನಿಧನರಾದ ಬಡವರ ವೈದ್ಯ ಖ್ಯಾತಿಯ ಡಾ.ಕೆ.ಪಿ. ಹೆಗ್ಡೆ ಅವರಿಗೆ ನುಡಿ ನಮನ ಕಾರ್ಯಕ್ರಮ ಜರುಗಿತು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ರೈ, ಹೆಗ್ಡೆ ಕುಟುಂಬದ ಸದಸ್ಯರು ಹಾಗೂ ವಿವಿಧ ಸಂಘ–ಸಂಘಟನೆಗಳ ಮುಖಂಡರು ಇದ್ದಾರೆ   

ರಾಮನಗರ: ‘ಬಡವರ ವೈದ್ಯ ಖ್ಯಾತಿಯ ಡಾ. ಕೆ.ಪಿ. ಹೆಗ್ಡೆ ಅವರು ಅಪರೂಪದ ಸಮಾಜ ಸೇವಕ. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಅವರು ತಮ್ಮ ಬದುಕಿನುದ್ದಕ್ಕೂ ಮಾಡಿಕೊಂಡು ಬಂದ ಸೇವೆಯು ಮಾದರಿಯಾದುದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಬಣ್ಣಿಸಿದರು.

ನಗರದ ರಾಯಲ್ ಕನ್ವೆನ್ಷನ್ ಹಾಲ್‌ನಲ್ಲಿ ಡಾ. ಕೆ.ಪಿ. ಹೆಗ್ಡೆ ಅಭಿಮಾನಿ ಬಳಗ ಸೋಮವಾರ ಹಮ್ಮಿಕೊಂಡಿದ್ದ, ಬಡವರ ವೈದ್ಯ ಡಾ. ಕೆ.ಪಿ. ಹೆಗ್ಡೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಮನಗರದಲ್ಲಿ 50 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಅವರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ’ ಎಂದು ನೆನೆದರು.

‘ಹೆಗ್ಡೆ ಅವರು ತಾವು ವಾಸಿಸುತ್ತಿದ್ದ ಸುತ್ತಮುತ್ತಲಿನ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಶ್ರಮಿಸಿದ್ದಾರೆ. ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಅವರ ಸೇವೆ ದೊಡ್ಡದು. ಸರ್ಕಾರಿ ಕೆಲಸ ಸಿಕ್ಕರೂ ಬಡವರ ಮೇಲಿನ ಕಾಳಜಿಯಿಂದ ಆ ವೃತ್ತಿ ತೊರೆದು ನಗರದಲ್ಲಿ ಪ್ರಗತಿ ಚಿಕಿತ್ಸಾಲಯ ತೆರೆದು ಬಡವರಿಗೆ ಚಿಕಿತ್ಸೆ ನೀಡುವ ಮೂಲಕ ಬಡವರ ವೈದ್ಯ ಎಂದೇ ಖ್ಯಾತರಾಗಿದ್ದರು’ ಎಂದು ಹೇಳಿದರು.

ADVERTISEMENT

ವೈದ್ಯ ವೃತ್ತಿ ಇತರೆ ವೃತ್ತಿಗಳಿಗಿಂತ ಮಹತ್ವವಾದುದು. ಇವತ್ತು ವೈದ್ಯ ವೃತ್ತಿ ವ್ಯಾಪರೀಕರಣಕ್ಕೆ ಒಳಗಾಗಿದೆ. ಸೇವಾ ಮನೋಭಾವನೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲೂ ಸೇವೆಯನ್ನೇ ಪ್ರಮುಖ ಆಶಯವನ್ನಾಗಿ ಇಟ್ಟು ಕೊಂಡು ದುಡಿದವರಲ್ಲಿ ಡಾ.ಕೆ.ಪಿ. ಹೆಗ್ಡೆ ಪ್ರಮುಖರು’ ಎಂದರು.

‘ ಹೆಗ್ಡೆ ಅವರು ವೈದ್ಯ ವೃತ್ತಿಯನ್ನು ಎಂದೂ ಕೂಡ ಹಣ ಗಳಿಕೆಗೆ ಬಳಸಿಕೊಂಡವರಲ್ಲ. ಇವರ ಕೈ ಗುಣ ಹಾಗೂ ದುಬಾರಿ ಹಣಕ್ಕೆ ಆಸೆ ಬೀಳದ ಕಾರಣ ಜನಸಾಮಾನ್ಯರು ಇವರನ್ನು ಹೆಚ್ಚು ಇಷ್ಟಪಡುತ್ತಿದ್ದರು. ವೈದ್ಯ ವೃತ್ತಿಯನ್ನು ಎಂದಿಗೂ ಅವರು ಹಣ ಗಳಿಕೆಗೆ ಬಳಸಿಕೊಂಡವರಲ್ಲ. ಕನ್ನಡ ಮಾಧ್ಯಮದಲ್ಲಿ ಪ್ರಗತಿ ಶಾಲೆ ಪ್ರಾರಂಭಿಸಿ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರು’ ಎಂದು ತಿಳಿಸಿದರು.

ನಗರದ ಒಂದು ವೃತ್ತಕ್ಕೆ ಅಥವಾ ಪ್ರಮುಖ ರಸ್ತೆಗೆ ಹೆಗ್ಡೆ ಅವರ ಹೆಸರಿಡಬೇಕು ಎಂಬ ಆಯೋಜಕರ ಮನವಿಗೆ ಸ್ಪಂದಿಸಿದ ಶಶಿ, ಈ ಕುರಿತು ನಗರಸಭೆಗೆ ಮನವಿ ಕೊಡಿ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ರೈ, ಡಾ. ಕೆ.ಪಿ. ಹೆಗ್ಡೆ ಮೊಮ್ಮಗಳು ಶಿವಾಲಿ ಶೆಟ್ಟಿ, ಹಿರಿಯ ಪತ್ರಕರ್ತರಾದ ತ್ಯಾಗರಾಜ, ಚಲುವರಾಜು, ಸು.ತ. ರಾಮೇಗೌಡ, ನೇಗಿಲ ಯೋಗಿ ಟ್ರಸ್ಟಿನ ಪಟೇಲ್ ರಾಜು, ಸಂಸ್ಕೃತಿ ಸೌರಭ ಟ್ರಸ್ಟಿನ ಡಾ. ರಾ.ಬಿ. ನಾಗರಾಜು, ಸ್ನೇಹಕೂಟ ಸಂಸ್ಥೆ ಅಧ್ಯಕ್ಷ ಎಚ್.ಪಿ. ನಂಜೇಗೌಡ, ಭಾರತ್ ವಿಕಾಸ ಪರಿಷತ್‌ನ ರಾ.ಶಿ. ಬಸವರಾಜು, ಬಿಜೆಪಿ ಮುಖಂಡ ಎಸ್.ಆರ್. ನಾಗರಾಜು, ಶಾಂತಲಾ ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್, ಕಮಲಮ್ಮ, ಶಿಕ್ಷಕ ರಾಜಶೇಖರ್ ಸೇರಿದಂತೆ ಹಲವರು ಅಭಿಪ್ರಾಯ ಹಂಚಿಕೊಂಡರು.

ಗಾಯಕರಾದ ಚೌ.ಪು. ಸ್ವಾಮಿ, ಕೆಂಗಲ್ ವಿನಯ್ ಕುಮಾರ್, ಎಚ್.ವಿ. ಮೂರ್ತಿ, ಗೋಪಾಲ್, ಚಿತ್ರಾ ರಾವ್ ಗೀತಗಾಯನ ನಡೆಸಿಕೊಟ್ಟರು. ನಗರಸಭಾ ಸದಸ್ಯ ಸೋಮಶೇಖರ್, ಬಳಗದ ಎಸ್. ರುದ್ರೇಶ್ವರ, ಧನಪಾಲ್, ಸಿ.ಕೆ. ನಾಗರಾಜು, ರಾಮಚಂದ್ರು, ಕೆ.ಪಿ. ಹೆಗ್ಡೆ ಅವರ ಪತ್ನಿ ಚಂದ್ರಲೇಖ ಹೆಗ್ಡೆ, ಮಕ್ಕಳಾದ ಪ್ರಗತಿ ಹೆಗ್ಡೆ, ಪ್ರಸನ್ನ ಕುಮಾರ್ ಹೆಗ್ಡೆ, ಪ್ರತಿಮಾ ಹೆಗ್ಡೆ, ವಿನೋದ್ ಶೆಟ್ಟಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.