
ಹಾರೋಹಳ್ಳಿ: ಲ್ಯಾಪ್ಟಾಪ್ ರಿಪೇರಿ ಅಂಗಡಿಗೆಯ ಮಾಲೀಕನ ಜೊತೆಗೆ ಜಗಳವಾಡಿ ಕನ್ನಡಕ್ಕೆ ಅವಹೇಳನ ಮಾಡಿದ ಉಪನ್ಯಾಸಕಿ ಕ್ಷಮೆಯಾಚನೆ ಮಾಡಿದ್ದಾರೆ.
ತಾಲೂಕಿನ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಮಿಳುನಾಡಿನ ಪ್ರಿಯಾದರ್ಶಿನಿ ಎರಡು ವರ್ಷದಿಂದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಫೆ.19ರ ಸಂಜೆ ಯಡವಹನಹಳ್ಳಿ ಗೇಟ್ನಲ್ಲಿ ಲ್ಯಾಪ್ಟಾಪ್ ರಿಪೇರಿ ಅಂಗಡಿಯಲ್ಲಿ ಲ್ಯಾಪ್ ಟಾಪ್ ರಿಪೇರಿಗೆ ನೀಡಿದ್ದರು. ರಿಪೇರಿ ಮಾಡಿದ್ದು ಸರಿಯಲ್ಲ ಎಂದು ಖ್ಯಾತೆ ತೆಗೆದು ಪ್ರಿಯಾದರ್ಶಿನಿ ತಮಿಳಿನಲ್ಲಿ ನಿಂದಿಸಲು ಆರಂಭಿಸಿದ್ದರು. ಆಗ ಅಂಗಡಿಯ ಯುವಕ ಕನ್ನಡ ಮಾತಾಡಿ ಎಂದಿದ್ದಕ್ಕೆ ‘ಕನ್ನಡ ಮೈ ಪೂಟ್ ’, ‘ಐ ಡೊಂಟ್ ಟಾಕ್ ಇನ್ ಡರ್ಟಿ ಕನ್ನಡ’ ಎಂದು ಅವಹೇಳನ ಮಾಡಿದ್ದರು.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಘಟನೆ ಖಂಡಿಸಿ ಜೈನ್ ಎಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕನ್ನಡಪರ ಹೋರಾಟಗಾರರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ತಕ್ಷಣ ಹೋರಾಟಗಾರ ಸಮಾಧಾನಪಡಿಸಿ ಪೊಲೀಸರ ಸಮುಖದಲ್ಲಿ ಕುಳಿತು ಮಾತುಕತೆ ನಡೆಸಿದರು. ಕನ್ನಡ ಭಾಷೆಗೆ ಅವಮಾನ ಮಾಡಿದ ಸಿಬ್ಬಂದಿ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಕ್ಕೆ ಸ್ಪಂದಿಸದ ಆಡಳಿತ ಮಂಡಳಿ ಕ್ರಮ ಜರುಗಿಸಿ ಭರವಸೆ ನೀಡಿತು.
ಇದೇ ಸಂದರ್ಭದಲ್ಲಿ ಉಪನ್ಯಾಸಕಿ ಪ್ರಿಯಾದರ್ಶಿನಿ ಕನ್ನಡ ಭಾಷೆಗೆ ಅವಹೇಳನ ಮಾಡಿರುವ ತಪ್ಪು ಎಂದು ಕ್ಷಮೆ ಕೋರಿದರು.
ಕನ್ನಡಕ್ಕೆ ಅಪಮಾನವಾದರೆ ಕನ್ನಡಿಗರು ಸಹಿಸುವುದಿಲ್ಲ. ಯಾವುದೇ ಕಾರಣಕ್ಕೂ ರಾಜಿಯಿಲ್ಲ. ಕನ್ನಡದ ಬಗ್ಗೆ ಅವಹೇಳನ ಉದ್ದತಟನ ಮಾತನಾಡಿದ ಸಿಬ್ಬಂದಿಯನ್ನು ಅಮಾನತ್ತು ಮಾಡಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರರು ಕುಮಾರಸ್ವಾಮಿ ಆಗ್ರಹಿಸಿದರು.
ಭಾಷೆಗಳ ನಡುವೆ ಸೌಹಾರ್ದ ಇರಬೇಕು. ಇಲ್ಲಿ ಬಂದು ಜೀವನ ಮಾಡಬೇಕಾದರೆ ಇಲ್ಲಿನ ಭಾಷೆ ಗೌರವಿಸಬೇಕು. ಇಲ್ಲಿ ಇರಬೇಕಾದರೆ ನೈತಿಕತೆ ಬೆಳೆಸಿಕೊಳ್ಳಬೇಕು. ನಮ್ಮ ಭಾಷೆಯ ಗೌರವಿಸಬೇಕು ಎಂದು ರೈತ ಹಿತರಕ್ಷಣಾ ಸಂಘದ ರಾಜ್ಯ ಸಲಹೆಗಾರ ಪ್ರಶಾಂತ್ ಹೊಸದುರ್ಗ ಹೇಳಿದರು.
ಲೋಕೇಶ್ ಗೌ, ಮಾದೇಶ್ ಗೌಡ್, ಭಾಸ್ಕರ್, ಶಿವಮ್ಮ, ತುಂಗಣಿ ಮಂಜು, ಗಂಗಾಧರ್, ಮೇಘರಾಜು, ಹರೀಶ್ ತುಂಗಣಿ, ಮಳಗಾಳು ಸಂತು, ಅರ್ಜುನ್, ಸುಪ್ರೀತ್ , ಸುನಿಲ್ ಬಾಳೆ ಚೆನ್ನ ವಲಸೆ ಹಾಜರಿದ್ದರು.
ನಾವು ಎಲ್ಲಿ ಹೋದರೂ ಎಲ್ಲ ಭಾಷೆಗೂ ಗೌರವ ಕೊಡಬೇಕು. ಕನ್ನಡದ ಬಗ್ಗೆ ಅವಹೇಳನ ಮಾಡಿರುವ ಸಿಬ್ಬಂದಿಯ ಕೆಲಸದಿಂದ ವಜಾ ಮಾಡಲಾಗುವುದು.ಪಾಶ್ವಾನಾಥ್ ಜೈನ್, ಅಡಳಿತ ಮಂಡಳಿ ಮುಖ್ಯಸ್ಥ ಜೈನ್ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.