ADVERTISEMENT

ಲಾಕ್‌ಡೌನ್ ಸಡಿಲ: ಜಿಲ್ಲೆಯ ಜನತೆ ನಿರಾಳ, ಜಿಲ್ಲೆಯಾದ್ಯಂತ ಬಸ್ ಸಂಚಾರ ಆರಂಭ

ವಾಣಿಜ್ಯ ಚಟುವಟಿಕೆಗೂ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 4:10 IST
Last Updated 22 ಜೂನ್ 2021, 4:10 IST
ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಾದಿದ್ದ ಪ್ರಯಾಣಿಕರು
ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಾದಿದ್ದ ಪ್ರಯಾಣಿಕರು   

ರಾಮನಗರ: ಜಿಲ್ಲೆಯಲ್ಲಿ ಸೋಮವಾರದಿಂದ ಕೋವಿಡ್ ಅನ್‌ಲಾಕ್‌ ಪ್ರಕ್ರಿಯೆ ಇನ್ನಷ್ಟು ಸಡಿಲವಾಗಿದ್ದು, ನಗರ ಪ್ರದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಬರೋಬ್ಬರಿ ಎರಡು ತಿಂಗಳ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿದಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಬೆಳಿಗ್ಗೆಯಿಂದಲೇ ಡಿಪೊನಿಂದ ಬಸ್‌ ನಿಲ್ದಾಣದತ್ತ ಬಸ್‌ಗಳು ಧಾವಿಸಿದವು. ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಾದ ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣಕ್ಕೆ ಬಸ್‌ಗಳು ಸಂಚಾರ ಕೈಗೊಂಡವು. ನೆರೆಯ ಜಿಲ್ಲೆಗಳಾದ ಬೆಂಗಳೂರು, ಮಂಡ್ಯ ಭಾಗಕ್ಕೂ ಬಸ್‌ ಸಂಚಾರ ಆರಂಭಿಸಲಾಯಿತು. ಗ್ರಾಮೀಣ ಪ್ರದೇಶಗಳಿಗೆ ಮೊದಲ ದಿನ ಹೆಚ್ಚಿನ ಸೇವೆ ಇರಲಿಲ್ಲ.

ಪ್ರತಿ ಬಸ್‌ನಲ್ಲಿ ಶೇ 50ರ ಆಸನಗಳ ಬಳಕೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ, ಪ್ರತಿ ವಾಹನದಲ್ಲೂ ಗರಿಷ್ಠ 30 ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲಾಯಿತು. ಆದರೆ, ಎಲ್ಲಿಯೂ ಪ್ರಯಾಣಿಕರ ತಪಾಸಣೆ ನಡೆಯಲಿಲ್ಲ.

ADVERTISEMENT

ರಾಮನಗರದಿಂದ ಬೆಂಗಳೂರಿಗೆ ಉದ್ಯೋಗಕ್ಕೆಂದು ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಈಗಾಗಲೇ, ಬೆಂಗಳೂರಿನಲ್ಲಿ ಕಚೇರಿಗಳು ತೆರೆದಿದ್ದು, ಇಲ್ಲಿಂದ ತೆರಳಲು ಹೆಚ್ಚಿನವರು ರೈಲು ಸೇವೆ ಬಳಸುತ್ತಿದ್ದರು. ಇದರಿಂದಾಗಿ ಅಲ್ಲಿಯೂ ಜನಸಂದಣಿ ಹೆಚ್ಚುತ್ತಿತ್ತು. ಬಸ್‌ ಸಂಚಾರದಿಂದಾಗಿ ರೈಲುಗಳ ಮೇಲಿನ ಒತ್ತಡ ತಗ್ಗಿದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು, ಬೆಳಿಗ್ಗೆ ಐಜೂರು ವೃತ್ತದಲ್ಲಿ ವಾಹನ ಸಂದಣಿ ಉಂಟಾಗಿತ್ತು.

ಇತರೆ ಚಟುವಟಿಕೆಗೂ ಅವಕಾಶ: ಸೋಮವಾರದಿಂದ ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 5ರವರೆಗೂ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಖರೀದಿಗೆ ಹೆಚ್ಚಿನ ಸಮಯಾವಕಾಶ ಇದ್ದದ್ದರಿಂದ ಧಾವಂತ ಇರಲಿಲ್ಲ. ತನಕ ಬಾಗಿಲು ಹಾಕಿದ್ದ ಆಭರಣ ಮಳಿಗೆಗಳು, ಜಿಮ್, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ ಉತ್ಪನ್ನಗಳ ಮಳಿಗೆಗಳು ಸೇರಿದಂತೆ ವಿವಿಧ ಅಂಗಡಿಗಳು ಸೇವೆ ನೀಡಿದವು. ಇದರೊಟ್ಟಿಗೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು.

ಚಿನ್ನದಂಗಡಿ, ಬಟ್ಟೆಯಂಗಡಿ ಮಳಿಗೆಗಳಲ್ಲಿ ಗ್ರಾಹಕರು ಹೆಚ್ಚಾಗಿ ಕಂಡುಬಂದರು. ಸದ್ಯ ಶುಭ ಸಮಾರಂಭಗಳು ನಡೆದಿವೆ. ಅಲ್ಲದೇ, ಆಷಾಢ ಮಾಸ ಪ್ರಾರಂಭಕ್ಕೆ ಇನ್ನೆರಡು ವಾರ ಮಾತ್ರವೇ ಬಾಕಿ ಇದೆ. ಹೀಗಾಗಿ ಜನರು ಖರೀದಿಗೆ ಉತ್ಸಾಹ ತೋರಿದರು. ಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಹಾಜರಾತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಹೆಚ್ಚಿನ ಕಚೇರಿಗಳಲ್ಲಿ ಜನಸಂದಣಿ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.