ಮಾಗಡಿ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ತೋಟಗಾರಿಕೆ ಇಲಾಖೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಮಳೆಯಿಂದ ರಾಜಕಾಲುವೆಯಲ್ಲಿ ಮಣ್ಣು ಕುಸಿದು ನೀರು ಸರಾಗವಾಗಿ ಹರಿಯದೆ ತಗ್ಗು ಪ್ರದೇಶದಲ್ಲಿರುವ ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಆವರಣಕ್ಕೆ ನೀರು ನುಗ್ಗಿದೆ. ಮಂಗಳವಾರ ನೀರು ಹೊರಹಾಕಲು ಇಲಾಖೆ ಅಧಿಕಾರಿಗಳು
ಹರಸಾಹಸಪಟ್ಟಿದ್ದಾರೆ.
ಮಾಗಡಿ ಪಟ್ಟಣದ ಎನ್ಇಎಸ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಹಾಗೂ ಪ್ರವಾಸಿಮಂದಿರದ ಬಳಿ ದೊಡ್ಡ ಮೋರಿ ನಿರ್ಮಾಣವಾಗುತ್ತಿದೆ. ಸೋಮವಾರ ರಾತ್ರಿ ಸುರಿದ ಮಳೆಯಿಂದ ರಾಜಕಾಲುವೆಗೆ ಮಣ್ಣು ಕುಸಿದಿದೆ. ಜೊತೆಗೆ ತೋಟಗಾರಿಕೆ ಇಲಾಖೆ ಕಾಂಪೌಂಡ್ ಬಳಿಯಿದ್ದ ವಿದ್ಯುತ್ ಕಂಬ ಮುರಿದಿದ್ದು, ಕಾಂಪೌಂಡ್ ಕುಸಿದು ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆ ಕಚೇರಿಯ ಆವರಣಕ್ಕೆ ಮಳೆ ನೀರು ನುಗ್ಗಿ ಕೆರೆಯಂತಾಗಿದೆ.
ಪಟ್ಟಣದ ಸೋಮೇಶ್ವರ ಬಡಾವಣೆಯ ಮುಖ್ಯರಸ್ತೆಯಲ್ಲಿ
ದೊಡ್ಡ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದ ನೀರು ರಸ್ತೆಯಲ್ಲಿ ತುಂಬಿ ಸಂಚಾರಕ್ಕೆ ತೊಂದರೆಯಾಗಿತ್ತು. ಬೃಹತ್ ಯಂತ್ರದ ಮೂಲಕ ನೀರನ್ನು ಹೊರ ಹಾಕಿ ಹೊಸ ಮಣ್ಣನ್ನು ಬಿಡಲಾಗಿದೆ. ಕೆ-ಶಿಪ್ ವತಿಯಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಗ ನೀಡಿ ಡಾಂಬರು ಹಾಕಿ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾತ್ರಿಯಿಡೀ ಸುರಿದ ಮಳೆ
ರಾಮನಗರ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಮಳೆ ಸುರಿಯಿತು. ಸಂಜೆಕೆಲಹೊತ್ತು ನಿಧಾನವಾಗಿ ಸುರಿದ ಮಳೆ ರಾತ್ರಿ ಧಾರಾಕಾರವಾಗಿ ಬಂತು. ನಂತರ ಬೆಳಿಗ್ಗೆವರೆಗೆ ಸಾಧಾರಣವಾಗಿ ಸುರಿಯಿತು. ಮಳೆರಾಯನ ಮುನಿಸಿನಿಂದಾಗಿ ಚಿಂತಾಕ್ರಾಂತರಾಗಿದ್ದ ರೈತರು, ರಾತ್ರಿ ಸುರಿದ ಮಳೆಗೆ ಸಂತಸಪಟ್ಟರು.
ಮಳೆ ಬೆನ್ನಲ್ಲೇ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಚಟುವಟಿಕೆ ಸಹ ಬಿರುಸುಗೊಂಡಿತು. ಬೆಳಿಗ್ಗೆ ಮೋಡ ಕವಿದ
ವಾತಾವರಣವಿತ್ತು. ಸಂಜೆ ತುಂತುರು ಮಳೆಯಷ್ಟೇ ಸುರಿಯಿತು. ಮಳೆಯಿಂದಾಗಿ ಮಾಗಡಿಯ ತೋಟಗಾರಿಕೆ ಇಲಾಖೆ ಕಚೇರಿ ಆವರಣ ಜಲಾವೃತಗೊಂಡಿದ್ದನ್ನು ಹೊರತುಪಡಿಸಿ, ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.