ರಾಮನಗರ: ಮೈಸೂರು ಸ್ಯಾಂಡಲ್ ಸೋಪ್ಗೆ ಪ್ರಚಾರ ರಾಯಭಾರಿಯಾಗಿ ಹೊರರಾಜ್ಯದ ನಟಿ ತಮನ್ನಾ ಭಾಟಿಯಾ ಅವರನ್ನು ₹6.20 ಕೋಟಿ ಸಂಭಾವನೆಗೆ ಕೆಎಸ್ಡಿಎಲ್ ನೇಮಕ ಮಾಡಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ‘ಸೋಪಿಗೆ ತನ್ನದೇ ಆದ ಬ್ರ್ಯಾಂಡ್ ವ್ಯಾಲ್ಯು ಇರುವುದರಿಂದ ತಮನ್ನಾ ಸೇರಿದಂತೆ ಯಾವುದೇ ರಾಯಭಾರಿ ಬೇಡ. ಎಲ್ಲರೂ ಕನ್ನಡದ ಸೋಪನ್ನೇ ಬಳಸಿ’ ಎಂದು ಘೋಷಣೆ ಕೂಗಿದ ಅವರು, ‘ಸೋಪಿಗೆ ನಾನೇ ಪುಕ್ಸಟ್ಟೆ ರಾಯಭಾರಿಯಾಗಿದ್ದೇನೆ. ಎಲ್ಲರೂ ಇದೇ ಸೋಪು ಬಳಸಿ’ ಎಂದು ಕರೆ ನಿಡಿದರು.
ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈಗಾಗಲೇ ಮೈಸೂರು ಲ್ಯಾಂಪ್, ಎನ್ಜಿಎಫ್ ಸೇರಿದಂತೆ ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಮುಚ್ಚಲಾಗಿದೆ. ಲಾಭದಾಯಕವಾಗಿ ಉಳಿದಿರುವುದು ಮೈಸೂರು ಸ್ಯಾಂಡಲ್ ಸೋಪ್ ಒಂದೇ. ಅದರ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣ ಕೊಟ್ಟರೆ ಮುಂದೊಂದು ದಿನ ಕಾರ್ಖಾನೆಯನ್ನೇ ಮುಚ್ಚಬೇಕಾಗುತ್ತದೆ’ ಎಂದರು.
‘ವಿಶ್ವವಿಖ್ಯಾತವಾಗಿರುವ ಮೈಸೂರು ಸ್ಯಾಂಡಲ್ ಸೋಪು ಎಂಬ ಹೆಸರೇ ರಾಯಭಾರಿ ಇದ್ದಂತೆ. ಅದಕ್ಕೆ ಯಾವ ರಾಯಭಾರಿಯೂ ಬೇಡ. ನಟಿಗೆ ₹6.20 ಕೋಟಿ ಹಣ ಕೊಟ್ಟು ನೇಮಿಸಿಕೊಳ್ಳುತ್ತಿರುವುದರ ಹಿಂದೆ ದೊಡ್ಡ ರಾಜಕಾರಣವಿದೆ’ ಎಂದು ಆರೋಪಿಸಿದ ಅವರು, ‘ರಾಯಭಾರಿ ನೇಮಿಸುವ ಬದಲು ಸ್ವತಃ ಮುಖ್ಯಮಂತ್ರಿ, ಡಿಸಿಎಂ, ಸಚಿವರು, ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳೆಲ್ಲರೂ ಇದೇ ಸೋಪಿನಿಂದ ಸ್ನಾನ ಮಾಡಿ ಘಮ್ ಎನ್ನಬೇಕು’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.