
ಕನಕಪುರ: ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ ಪಿಎಸ್ಐ ಹರೀಶ್ ಅವರನ್ನು ಮಾತ್ರ ಅಮಾನತ್ತು ಮಾಡಲಾಗಿದೆ. ಅವರಿಗೆ ಸಹಕರಿಸಿದ ಉಳಿದ ನಾಲ್ವರು ಸಿಬ್ಬಂದಿಯನ್ನೂ ಅಮಾನತ್ತು ಮಾಡಬೇಕು ಎಂದು ಸಂತ್ರಸ್ತ ದೂರುದಾರ ರಾಜೇಶ್ ಒತ್ತಾಯಿಸಿದ್ದಾರೆ.
ಇಲ್ಲಿನ ರಾಜಾರಾವ್ ರಸ್ತೆಯಲ್ಲಿರುವ ರೈತ ಸಂಘದ ಕಚೇರಿಯಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಬಲವಂತವಾಗಿ ಕರೆದುಕೊಂಡು ಹೋಗಿ ಹಣ ವಸೂಲಿ ಮಾಡಿದ್ದಾರೆ. ಪ್ರತಿಯೊಂದು ಆರೋಪಕ್ಕೂ ದಾಖಲೆ ನೀಡಿದ್ದೇನೆ. ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
‘ಕನಕಪುರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿ ವಂಚಿಸಿರುವ ಸಾಕಷ್ಟು ಪ್ರಕರಣ ನಡೆದಿವೆ. ಈ ಎಲ್ಲಾ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಸತ್ತ ವ್ಯಕ್ತಿ ಹೆಸರಿನಲ್ಲಿ, ಅಸ್ತಿತ್ವದಲ್ಲಿಯೇ ಇಲ್ಲದ ವ್ಯಕ್ತಿ ಹೆಸರಿನಲ್ಲಿ ಆಧಾರ್ ಕಾರ್ಡ್, ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲಾಗಿದೆ. ಇಂತಹ ಪ್ರಕರಣಗಳ ತನಿಖೆ ನಡೆಸಿ ವಂಚಕರನ್ನು ಬಂಧಿಸುವ ಬದಲು ಯಾವುದೇ ತಪ್ಪು ಮಾಡದ ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ’ ಎಂದು ದೂರಿದರು.
ರಾಜೇಶ್ ಅವರ ಪ್ರಕರಣ ತನಿಖೆ ನಡೆಸಿರುವ ಡಿವೈಎಸ್ಪಿ ಕೆಂಚೇಗೌಡರು ವರದಿ ಮೇರೆಗೆ ಪಿಎಸ್ಐ ಹರೀಶ್ ಅಮಾನತ್ತು ಮಾಡಲಾಗಿದೆ. ಆದರೆ ಅದೇ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ವರು ಸಿಬ್ಬಂದಿ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಕುಮಾರಸ್ವಾಮಿ ಒತ್ತಾಯಿಸಿದರು.
ಪೊಲೀಸರೇ ಕಳ್ಳರಾದರೆ ಯಾರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯ. ಪೊಲೀಸ್ ಇಲಾಖೆ ಶ್ರೀಮಂತರು ಮತ್ತು ಉಳ್ಳವರ ಪರವಾದರೆ ಬಡವರಿಗೆ ಮತ್ತು ಅಶಕ್ತರಿಗೆ ನ್ಯಾಯ ಕೊಡಿಸುವವರು ಯಾರು ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಪ್ರಶ್ನಿಸಿದರು.
ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳನ್ನು ಅಮಾನತ್ತು ಮಾಡುವುದು ನಾಮ್ ಕಾ ವಾಸ್ತೆ ಆಗಿದೆ. ಸಸ್ಪೆಂಡ್ ಆದವರಿಗೆ ವಾರದಲ್ಲಿ ಬೇರೆ ಠಾಣೆಗೆ ವರ್ಗಾವಣೆ ಆಗುತ್ತದೆ. ಇಲ್ಲವಾದರೆ ಅದೇ ಠಾಣೆಗೆ ಬರುತ್ತಾರೆ. ಇದೊಂದು ಕಣ್ಣೊರಿಸುವ ತಂತ್ರವಾಗಿದೆ. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಮನವಿ ಮಾಡಿದರು.
Quote - ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಮಾಫಿಯಾಗಳ ಅಡ್ಡೆಯಾಗುತ್ತಿವೆ. ತಮಗೆ ಬೇಕಾದಂತೆ ರಾಜಿ ಪಂಚಾಯಿತಿ ಮಾಡಿ ಇತ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇಲಾಖೆಯ ಉನ್ನತ ಅಧಿಕಾರಿಗಳ ಆದೇಶಗಳಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ. ಕುಮಾರಸ್ವಾಮಿ ಸಾಮಾಜಿಕ ಹೋರಾಟಗಾರ
Cut-off box - ‘ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಹಾಕಿ’ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದೂರು ದಾಖಲಿಸಿ ಕರೆತಂದು ಠಾಣೆಯಲ್ಲಿ ಕೂರಿಸಲಾಗುತ್ತದೆ. ಅಮಾಯಕರಲ್ಲಿ ಭಯ ಹುಟ್ಟಿಸಿ ಪ್ರಕರಣ ದಾಖಲಾಗದಂತೆ ಮುಚ್ಚಿ ಹಾಕಲು ಇಂತಿಷ್ಟು ಹಣ ನೀಡಬೇಕೆಂದು ಬೇಡಿಕೆ ಇಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಜನರಿಗೆ ಪೊಲೀಸ್ ಠಾಣೆ ಮೇಲಿನ ವಿಶ್ವಾಸವೇ ಇಲ್ಲದಂತಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಕುಮಾರಸ್ವಾಮಿ ಆರೋಪಿಸಿದರು. ರಾಜೇಶ್ ವಿರುದ್ಧ ಯಾವುದೇ ಪ್ರಕರಣ ಇಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಅವರನ್ನು ಕರೆದುಕೊಂಡು ಹೋಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಅವರಿಗೆ ಸಾಮಾಜಿಕವಾಗಿ ಅವಮಾನವಾಗಿದೆ. ಪೊಲೀಸ್ ಠಾಣೆಗಳಿಗೆ ಸರ್ಜರಿ ಆಗಬೇಕು. ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವ ಜೊತೆಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಾಡಿ ಕ್ಯಾಮರಾ ಅಳವಡಿಸಿ ಇಲಾಖೆ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಬೇಕೆಂದು ಒತ್ತಾಯಿಸಿದರು.