
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶುಕ್ರವಾರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.
ರಾಮನಗರ: ‘ಗ್ರಾಮ ಪಂಚಾಯಿತಿ ಕಚೇರಿಯು ದೇವಾಲಯವಿದ್ದಂತೆ. ಜನರ ಕಷ್ಟ–ಸುಖಗಳನ್ನು ಆಲಿಸುವ ಈ ಕಚೇರಿಯು ಮಹಾತ್ಮ ಗಾಂಧೀಜಿ ಅವರ ಕನಸಿನ ಗ್ರಾಮ ಸ್ವರಾಜ್ಯದ ಕನಸಿನ ಸಾಕಾರದ ರೂಪವಾಗಿದೆ. ಈ ದೇವಾಲಯವನ್ನು ಎಲ್ಲರೂ ಗೌರವದಿಂದ ಕಾಣಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ತಾಲ್ಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕಟ್ಟಡಕ್ಕೆ ಭೂಮಿಪೂಜೆ ನೆರವೇರಿದ ಕೆಲವೇ ತಿಂಗಳಲ್ಲಿ ಹೊಸ ಕಟ್ಟಡವು ಸಮರೋಪಾದಿಯಲ್ಲಿ ನಿರ್ಮಾಣವಾಗಿ, ಇದೀಗ ಉದ್ಘಾಟನೆಯಾಗಿದೆ’ ಎಂದರು.
‘ಕಟ್ಟಡ ನಿರ್ಮಾಣದ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಶ್ರಮವಿದೆ. ಕಟ್ಟಡದ ಕೆಳ ಅಂತಸ್ತು ಪೂರ್ಣವಾಗಿದೆ. ಮೇಲ್ಬಾಗದಲ್ಲೂ ಕಟ್ಟಡ ನಿರ್ಮಾಣವಾಗಲಿದ್ದು, ಅದಕ್ಕೆ ಅಗತ್ಯ ಅನುದಾನ ನೀಡಲಾಗಿದೆ. ಇಂತಹ ಸುಸಜ್ಜಿತ ಕಚೇರಿಯು ಎಲ್ಲಾ ಪಂಚಾಯಿತಿಗಳಲ್ಲೂ ಇರಬೇಕು’ ಎಂದು ತಿಳಿಸಿದರು.
ಪಂಚಾಯಿತಿ ಅಧ್ಯಕ್ಷೆ ಸುನೀತಾ ನಾಗರಾಜ್ ಸಿಂಗ್ ಮಾತನಾಡಿ,‘ಪಂಚಾಯಿತಿಯ ಆಡಳಿತ ಮಂಡಳಿ, ಅಧಿಕಾರಿಗಳು, ಗ್ರಾಮಸ್ಥರ ಸಹಕಾರ ಹಾಗೂ ಶಾಸಕರ ಅನುದಾನ ಬಳಸಿಕೊಂಡು ಉತ್ತಮ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಡಿಮೆ ಅವಧಿಯಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು’ ಎಂದು ಕೃತಜ್ಞತೆ ಸಲ್ಲಿಸಿದರು.
ಚನ್ನಪಟ್ಟಣದ ಬೇವೂರು ಮಠಾಧ್ಯಕ್ಷ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳು ಅವಶ್ಯಕ. ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ವಿಭೂತಿಕೆರೆ ಪಂಚಾಯಿತಿ ಅಭಿವೃದ್ಧಿಯಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದೆ. ಮುಂದೆಯೂ ಉತ್ತಮ ಕೆಲಸಗಳನ್ನು ಮಾಡಲಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ಕುಮಾರ್, ಪಂಚಾಯಿತಿ ಉಪಾಧ್ಯಕ್ಷೆ ಮಂಗಳ ಗೌರಮ್ಮ ಗಿರಿಯಪ್ಪ, ಪಿಡಿಒ ಬಿ.ಕೆ. ಗೋಮತಿ, ಸದಸ್ಯರಾದ ಮಹದೇಶಸ್ವಾಮಿ, ಪುಟ್ಟಸ್ವಾಮಯ್ಯ, ಮಲ್ಲೇಶ್, ರಂಗಸ್ವಾಮಿ, ಮಹದೇವಮ್ಮ, ಲೀಲಾವತಿ ಶಿವರಾಜು, ಜ್ಯೋತಿ ಬಾಲಕೃಷ್ಣ, ವೆಂಕಟಪ್ಪ, ಸುನೀತಾ, ಕೆ.ಪಿ. ವಿಶಾಲ, ಶೋಭಾ, ಲಕ್ಷ್ಮಮ್ಮ, ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭದ್ರಯ್ಯ, ಎಸ್ಡಿಎ ಸುಜಾತ, ತಾ.ಪಂ. ಸಹಾಯಕ ನಿರ್ದೇಶಕ ರೂಪೇಶ್ ಕುಮಾರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.