ADVERTISEMENT

ರಾಮನಗರ: ಇ–ಕೆವೈಸಿ ಮಾಡಿಸಲು ಕೃಷಿ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 2:44 IST
Last Updated 23 ಫೆಬ್ರುವರಿ 2026, 2:44 IST
   

ರಾಮನಗರ: ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಅಗ್ರಿಸ್ಟಾಕ್ ಘಟಕದಡಿ, ಸರ್ಕಾರದ ಮಾನದಂಡಗಳನ್ನು ಅಳವಡಿಸಿ ಭೂ ಹಿಡುವಳಿಗಳನ್ನು ಹೊಂದಿರುವ ರಾಜ್ಯದ ಎಲ್ಲಾ ರೈತರ ವಿವರಗಳನ್ನೊಳಗೊಂಡ ಸ್ಟೇಟ್ ಫಾರ್ಮರ್ ರಿಜಿಸ್ಟ್ರಿ ಸ್ಥಾಪಿಸಲು ಯೋಜಿಸಲಾಗಿದೆ.

ಮಾನದಂಡಗಳ ಪ್ರಕಾರ ಫ್ರೂಟ್ (ಸ್ಟೇಟ್ ಫಾರ್ಮರ್ ರಿಜಿಸ್ಟ್ರಿ) ಹಾಗೂ ಭೂಮಿ (ಲ್ಯಾಂಡ್ ರೆಕಾರ್ಡ್ಸ್ ಸಿಸ್ಟಮ್) ದತ್ತಾಂಶಗಳನ್ನು ನಿಯತವಾಗಿ ಸಿಂಕ್ರೋನೈಜ್ ಮಾಡುವುದು ಅತಿ ಮುಖ್ಯವಾಗಿರುತ್ತದೆ. ಇದರೊಂದಿಗೆ ಫ್ರೂಟ್ ತಂತ್ರಾಂಶದಲ್ಲಿ ರೈತರ ಇ– ಕೆವೈಸಿ ಮತ್ತು ರೈತರ ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದಿಂದ ಒಂದು ಕೇಂದ್ರ ನೋಂದಾಯಿತ ರೈತರ ಸಂಖ್ಯೆ ಸೃಜಿಸಲಾಗುತ್ತದೆ. ಈ ರೀತಿ ಸೃಜಿಸಲಾದ ಕೇಂದ್ರ ನೋಂದಾಯಿತ ರೈತ ಸಂಖ್ಯೆಯನ್ನು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸುವ ಪಿ.ಎಂ. ಕಿಸಾನ್ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲೂ ಕಡ್ಡಾಯವಾಗಿ ಬಳಸಲಾಗುತ್ತದೆ.

ADVERTISEMENT

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಬರ ಪರಿಹಾರ, ಬೆಳೆ ವಿಮೆ ಹಾಗೂ ಪಿಎಂ ಕಿಸಾನ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖಾ ಕಚೇರಿಗಳನ್ನು ತಮ್ಮ ಆಧಾರ್ ಕಾರ್ಡ್, ಆಧಾರ್‌ನೊಂದಿಗೆ ಜೋಡಣೆಯಾಗಿರುವ ಮೊಬೈಲ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಹಾಗೂ ಎಲ್ಲಾ ಪಹಣಿಗಳನ್ನು ಫೆ. 26ರೊಳಗೆ ಕಡ್ಡಾಯವಾಗಿ ಸಂಪರ್ಕಿಸಿ ಇ-ಕೆವೈಸಿ ಮಾಡಿಸಬೇಕು.

ರೈತರು ವಿದ್ಯುನ್ಮಾನ ಸಹಮತಿ ಪತ್ರ ನೀಡುವ ಜೊತೆಗೆ ಎಲ್ಲಾ ಭೂಹಿಡುವಳಿಗಳನ್ನು ಕಡ್ಡಾಯವಾಗಿ ತಮ್ಮ ಎಫ್‌ಐಡಿಯಲ್ಲಿ ಸೇರಿಸಬೇಕು. ತಪ್ಪಿದ್ದಲ್ಲಿ ಕೇಂದ್ರ/ರಾಜ್ಯ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವಿರಿ. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.