ADVERTISEMENT

ರಾಮನಗರ | ಮಾನಸಿಕ ಅಸ್ವಸ್ಥೆಗೆ ಮಗು: ಅತ್ಯಾಚಾರದ ಶಂಕೆ

ಓದೇಶ ಸಕಲೇಶಪುರ
Published 26 ಜನವರಿ 2026, 13:40 IST
Last Updated 26 ಜನವರಿ 2026, 13:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ರಾಮನಗರ: ಲೋಕದ ಅರಿವಿಲ್ಲದ 40 ವರ್ಷದ ಮಾನಸಿಕ ಅಸ್ವಸ್ಥೆಯೊಬ್ಬರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಲೋಕದ ದೃಷ್ಟಿಯಲ್ಲಿ ‘ಹುಚ್ಚಿ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಆ ಮುಗ್ಧೆ ತಾಯಿಯಾಗಲು ಕಾರಣ ಯಾರು? ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಜಿಲ್ಲೆಯ ಕನಕಪುರ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ.

ADVERTISEMENT

ಈ ಕುರಿತು ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಮಗು ತಂದೆ ಯಾರೆಂದು ಪತ್ತೆ ಹಚ್ಚುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. ದುರುಳರು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾಗುವಂತೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದಾರೆ ಆ ಮಹಿಳೆ!

ಗೊತ್ತಾಗಿದ್ದು ಹೇಗೆ?: ಊರಿನಲ್ಲಿ ಓಡಾಡಿಕೊಂಡಿದ್ದ ಮಹಿಳೆಯ ಹೊಟ್ಟೆ ಇತ್ತೀಚೆಗೆ ಊದಿಕೊಂಡಂತೆ ಕಂಡುಬಂದಿತ್ತು. ಅದನ್ನು ಗಮನಿಸಿದ ಸ್ಥಳೀಯರೊಬ್ಬರು ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ರಾಮನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದರು. ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು, ಆಕೆ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದರು.

ಮಹಿಳೆಯ ದೈಹಿಕ ಮತ್ತು ಮಾನಸಿಕ ಸ್ಥಿತಿ ಗಂಭೀರವಾಗಿದ್ದರಿಂದ ಜಿಲ್ಲಾಸ್ಪತ್ರೆ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಕಳಿಸಿದರು. ಕಳೆದ ಡಿ. 24ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ, ಜ. 1ಕ್ಕೆ ಡಿಸ್‌ಚಾರ್ಜ್ ಆದರು.

ಮಗಳನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದ ತಾಯಿಯೇ ಬಾಣಂತಿ ಮಗಳು ಮತ್ತು ಮಗುವನ್ನು ಕೆಲ ದಿನ ಆರೈಕೆ ಮಾಡಿದರು. ಆದರೆ, ಒಂದು ದಿನ ಬೆಳಿಗ್ಗೆಯೇ ಮಹಿಳೆ ಮನೆಯಿಂದ ನಾಪತ್ತೆಯಾದರು. ತಾಯಿ ಮತ್ತು ಸ್ಥಳೀಯರು ಹುಡುಕಾಡಿ ಊರಾಚೆ ಇದ್ದ ಮಹಿಳೆಯನ್ನು ಮನೆಗೆ ಕರೆತಂದು ಮತ್ತೆ ಆಸ್ಪತ್ರೆಗೆ ಸೇರಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಿಚಾರಿಸಿದರೆ ಸತ್ಯ ಗೊತ್ತಾಗಲಿದೆ: ಮಹಿಳೆಯ ಅಸಹಾಯಕತೆಯನ್ನು ದುರುಳರು ಸದುಪಯೋಗಪಡಿಸಿಕೊಂಡು ಆಕೆ ಮೇಲೆ ಅತ್ಯಾಚಾರ ಎಸಗಿರುವ ಸಾಧ್ಯತೆ ಇದೆ. ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಿದರೆ, ಆಕೆ ಗರ್ಭಿಣಿಯಾಗಲು ಕಾರಣ ಯಾರೆಂಬುದು ಗೊತ್ತಾಗುತ್ತದೆ. ಪೊಲೀಸರು ಈ ನಿಟ್ಟಿನಲ್ಲಿ ಕ್ರಮ ವಹಿಸಿ ಮಹಿಳೆಗೆ ನ್ಯಾಯ ಕೊಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.