ರಾಮನಗರ: ತಾಲ್ಲೂಕಿನ ಬೆಜ್ಜರಹಳ್ಳಿ ಕಟ್ಟೆ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಭೂಮಿ ಕಂಪಿಸಿದ ಅನುಭವ ಆಗಿದ್ದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ಬೆಳಿಗ್ಗೆ 5.30ರ ಸುಮಾರಿಗೆ ಭಾರಿ ಶಬ್ದದೊಂದಿಗೆ ಮೂರು ಬಾರಿ ಭೂಕಂಪನದ ಅನುಭವ ಆಗಿದ್ದಾಗಿ ಹೇಳಲಾಗಿದೆ. ಇದರಿಂದ ಹೆದರಿದ ಜನರು ಮನೆಗಳಿಂದ ಹೊರಗೆ ಬಂದಿದ್ದಾರೆ. ನಂತರದಲ್ಲಿ ಮಧ್ಯಾಹ್ನ 3 ಗಂಟೆ ಹಾಗೂ ಸಂಜೆ 5.40ರ ವೇಳೆಗೂ ಇದೇ ರೀತಿಯ ಅನುಭವ ಆಗಿದ್ದು, ಜನರ ಆತಂಕ ಹೆಚ್ಚಿಸಿದೆ. ಜನರು ಮನೆಗಳಿಂದ ಹೊರಗೆ ಕಾಲ ಕಳೆದಿದ್ದು, ಆತಂಕದಿಂದ ಇದ್ದಾರೆ.
ಈ ಗ್ರಾಮಗಳಿಗೆ ಹತ್ತಿರ ಇರುವ ಲೇಔಟ್ ಒಂದರಲ್ಲಿನ ಸ್ಫೋಟಕ ಕಾಮಗಾರಿಯಿಂದಾಗಿ ಬೆಳಿಗ್ಗೆ ಜನರಿಗೆ ಈ ಅನುಭವ ಆಗಿರಬಹುದು ಎಂದು ಹೇಳಲಾಗಿತ್ತು. ಆದರೆ ಸಂಜೆ ಮತ್ತೊಮ್ಮೆ ಇದೇ ಅನುಭವ ಆಗಿದ್ದಾಗಿ ಜನರು ಹೇಳಿದ್ದಾರೆ. ಒಂದೇ ಕಡೆ ಭೂಮಿಯಿಂದ ಆಗಾಗ್ಗೆ ಶಬ್ದ ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆಗೆ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.