ADVERTISEMENT

ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತನ ಮೇಲೆ ಹಲ್ಲೆ ಯತ್ನ: ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 14:57 IST
Last Updated 14 ಜನವರಿ 2022, 14:57 IST
ವಿಡಿಯೊದಿಂದ ತೆಗೆದ ಸ್ಕ್ರೀನ್‌ಗ್ರ್ಯಾಬ್
ವಿಡಿಯೊದಿಂದ ತೆಗೆದ ಸ್ಕ್ರೀನ್‌ಗ್ರ್ಯಾಬ್   

ರಾಮನಗರ: ರಾಮನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಜನವರಿ 12ರಂದು ಹಾವೇರಿ ಜಿಲ್ಲೆಯ ವಿರೂಪಾಕ್ಷಪ್ಪ ಎಂಬ ರೈತನ ಮೇಲೆ ಸ್ಥಳೀಯ ರೀಲರ್ ಒಬ್ಬರು ಹಲ್ಲೆ ಯತ್ನ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರ ವಿಡಿಯೊ ವೈರಲ್ ಆಗುತ್ತಿದೆ.

ವಿರೂಪಾಕ್ಷಪ್ಪ ತಂದಿದ್ದ ರೇಷ್ಮೆಗೂಡು ಆನ್‌ಲೈನ್‌ ಹರಾಜಿನಲ್ಲಿ ಪ್ರತಿ ಕೆ.ಜಿ.ಗೆ ₹550 ದರದಲ್ಲಿ ಮಾರಾಟ ಆಗಿತ್ತು. ಈ ಹರಾಜು ಪಡೆದಿದ್ದ ರೀಲರ್ ರೈತನ ಬಳಿ ಬಂದು ‘ನಾನು ತಪ್ಪಾಗಿ ಪ್ರತಿ ಕೆ.ಜಿ.ಗೆ ₹550 ದರ ನಮೂದು ಮಾಡಿದ್ದೇನೆ. ಪ್ರತಿ ಕೆ.ಜಿ.ಗೆ ₹100 ರಂತೆ ಹಣ ಕಡಿತ ಮಾಡಿ ಉಳಿದಿದ್ದನ್ನು ಕೊಡುತ್ತೇನೆ. ಹಾಗೆಯೇ ವೇಸ್ಟೇಜ್‌ ಲೆಕ್ಕದಲ್ಲಿ 4 ಕೆ.ಜಿ. ಗೂಡಿನ ಹಣ ಕೊಡುವುದಿಲ್ಲ’ ಎಂದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿರೂಪಾಕ್ಷಪ್ಪ ‘ಹಾಗೆ ಮಾಡಬೇಡಿ. ಬೇಕಿದ್ದರೆ ನಿಮ್ಮ ಹರಾಜು ಹಿಂಪಡೆಯಿರಿ’ ಎಂದು ರೀಲರ್‌ಗೆ ಕೈ ಮುಗಿದಿದ್ದರು. ಈ ಸಂದರ್ಭ ರೀಲರ್‌ ಮತ್ತವರ ಬೆಂಬಲಿಗರು ವಿರೂಪಾಕ್ಷಪ್ಪ ಅವರನ್ನು ನಿಂದಿಸಿ, ಹಲ್ಲೆಗೂ ಯತ್ನಿಸಿದ್ದರು ಎಂದು ದೂರಲಾಗಿದೆ.

ಘಟನೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಮಾರುಕಟ್ಟೆ ಉಪನಿರ್ದೇಶಕ ವೆಂಕಟೇಶ್‌ಗೆ ಮನವಿ ಸಲ್ಲಿಸಿದರು. ಸಂಬಂಧಿಸಿದ ರೀಲರ್‌ನ ಪರವಾನಗಿ ರದ್ದುಪಡಿಸಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದರು.

ADVERTISEMENT

ದೂರು ದಾಖಲು: ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ರಾಮನಗರದ ಟಿಪ್ಪು ನಗರ ನಿವಾಸಿ ಮುನೀರ್ ಅಹಮ್ಮದ್ ಎಂಬುವರ ವಿರುದ್ಧ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಅಧಿಕಾರಿಗಳು ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.