
ರಾಮನಗರ: ಟೊಯೋಡಾ ಗೋಸಾಯ್ ಸೌತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಕಾರ್ಪೊರೇಟ್ ಹೊಣೆಗಾರಿಕೆ (ಸಿಎಸ್ಆರ್) ವತಿಯಿಂದ ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಉಚಿತವಾಗಿ 15 ಟನ್ ಎರೆಹುಳು ಗೊಬ್ಬರ ಚೀಲಗಳನ್ನು ಬುಧವಾರ ವಿತರಿಸಲಾಯಿತು.
ಗ್ರಾಮದ ಖಾಸಗಿ ಕಲ್ಯಾಣ ಮಂಟಪ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೊಬ್ಬರ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಕಂಪನಿಯ ಉಪ ವ್ಯವಸ್ಥಾಪಕ ಮಂಜುನಾಥ್, ‘ದೇಶದ ಬೆನ್ನೆಲುಬಾಗಿರುವ ರೈತನ ಹಿತ ಕಾಯುವುದು ಎಲ್ಲರ ಕರ್ತವ್ಯ. ಅವರ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಪೂರಕವಾಗಿ ಕಂಪನಿಯಿಂದ ಗೊಬ್ಬರ ವಿತರಣೆ ಮಾಡಲಾಗಿದೆ’ ಎಂದರು.
‘ಎರೆಹುಳು ಗೊಬ್ಬರ ಬಳಕೆಯಿಂದ ಉತ್ತಮವಾದ ಫಸಲು ಜೊತೆಗೆ ನೆಲದ ಫಲವತ್ತತೆ ವೃದ್ಧಿಯಾಗುತ್ತದೆ. ಗೊಬ್ಬರವನ್ನು ರೈತರು ತೆಂಗು, ಅಡಿಕೆ, ಮಾವು, ಸೀಬೆ, ದಾಳಿಂಬೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಗಳಿಗೆ ಬಳಸಬಹುದು. ಇದರಿಂದ ರೈತರು ಉತ್ತಮ ಫಸಲು ಪಡೆದು ಆರ್ಥಿಕವಾಗಿ ಸಬಲರಾಗಬಹುದು’ ಎಂದು ತಿಳಿಸಿದರು.
ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅರ್ಪಿತಾ ಹರೀಶ್ ಕುಮಾರ್ ಮಾತನಾಡಿ, ‘ರೈತರಿಗೆ 15 ಟನ್ ಗೊಬ್ಬರ ನೀಡಿರುವ ಕಂಪನಿಯ ನಡೆ ಶ್ಲಾಘನೀಯ. ಸುತ್ತಮುತ್ತಲಿನ ಗ್ರಾಮಗಳ ರೈತರು ಇದರ ಪ್ರಯೋಜನ ಪಡೆಯಬೇಕು. ರಾಸಾಯನಿಕ ಬದಲು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಬೇಕು’ ಎಂದು ಸಲಹೆ ನೀಡಿದರು.
ಸಂಸ್ಥೆಯ ಪ್ರತಿನಿಧಿ ದಯಾನಂದ್, ರೈತ ಮುಖಂಡ ರಂಗಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯೆ ಶೋಭಾ, ಕೃಷಿ ಸಖಿ ದೀಪಾ, ಒಕ್ಕೂಟದ ಕ್ಲಸ್ಟರ್ ಮಟ್ಟದ ಅಧಿಕಾರಿ ಪ್ರೇಮಾ, ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಎಚ್.ಆರ್. ಮಾದೇಶ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.