ADVERTISEMENT

ರಾಮನಗರ | 4 ದಿನಗಳ ರಾಮೋತ್ಸವಕ್ಕೆ ತೆರೆ:‌ ಸಂಗೀತ ರಾತ್ರಿಗೆ ಸೆಲೆಬ್ರಿಟಿಗಳ ರಂಗು

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:49 IST
Last Updated 19 ಜನವರಿ 2026, 4:49 IST
ರಾಮೋತ್ಸವದ ಪ್ರಯುಕ್ತ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್ ಮತ್ತು ರಿಜ್ವಾನ್ ಅರ್ಷದ್ ಬಹುಮಾನ ವಿತರಿಸಿದರು. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಇದ್ದಾರೆ
ರಾಮೋತ್ಸವದ ಪ್ರಯುಕ್ತ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್ ಮತ್ತು ರಿಜ್ವಾನ್ ಅರ್ಷದ್ ಬಹುಮಾನ ವಿತರಿಸಿದರು. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಇದ್ದಾರೆ   

ರಾಮನಗರ: ನಾಲ್ಕು ದಿನಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಹಬ್ಬವಾದ ರಾಮೋತ್ಸವಕ್ಕೆ ಭಾನುವಾರ ಅದ್ಧೂರಿಯಾಗಿ ತೆರೆ ಬಿದ್ದಿತು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ, ಈಜು, ವೇಷಭೂಷಣ, ಮೆಹಂದಿ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.

ರಾತ್ರಿ ಶುರುವಾದ ಸಿನಿಮಾ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರ ಸಂಗೀತ ರಾತ್ರಿ ಕಾರ್ಯಕ್ರಮವು ಚಳಿಗೆ ಮುದ ನೀಡಿತು. ಹಾಡುಗಳಿಗೆ ಜನರು ಕುಣಿದು ಕುಪ್ಪಳಿಸಿದರು. ಅದರ ನಡುವೆಯೇ ವೇದಿಕೆ ಏರಿದ ಸಿನಿಮಾ ನಟ–ನಟಿಯವರು ಸಂಗೀತ ಸುಧೆಯ ರಾತ್ರಿಗೆ ರಂಗು ತಂದರು.

ವಿವೇಕಾನಂದನಗರದ ಬೆಳಿಗ್ಗೆ 8ಕ್ಕೆ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಸೆಂಟರ್‌ನಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಹಾಗೂ ಶಾಂತಿನಗರದ ಈಜುಕೋಳದಲ್ಲ ನಡೆದ ಈಜು ಸ್ಪರ್ಧೆಗೆ ಪರಿಷತ್ ಸದಸ್ಯ ಸುಧಾಮ್ ದಾಸ್ ಚಾಲನೆ ನೀಡಿದರು.

ADVERTISEMENT

ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ನಡೆದ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆಯು ಗಮನ ಸೆಳೆಯಿತು. ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಸ್ಪರ್ಧೆಗೆ ಚಾಲನೆ ನೀಡಿದರು. ಆಕರ್ಷಿಸಿದರು. ಮತ್ತೊಂದೆಡೆ ಯೂನಿವರ್ಸಲ್ ಶಾಲೆಯಲ್ಲಿ ನಡೆದ ಮೆಹಂದಿ ಸ್ಪರ್ಧೆಯಲ್ಲಿ ಹೆಣ್ಣುಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ವೇಷಭೂಷಣ ಸ್ಪರ್ಧೆಯಲ್ಲಿ ಗಮನ ಸೆಳೆದ ಬಸವಣ್ಣನ ವೇಷದಲ್ಲಿ ಗಮನ ಸೆಳೆದ ಬಾಲಕ

ಸಂಜೆ ಕ್ರೀಡಾಂಗಣದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯು ಹುರಿಗಟ್ಟಿದ ಮೈನ ಯುವಕರ ದೇಹಸಿರಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸ್ಪರ್ಧೆಗೆ ಚಾಲನೆ ನೀಡಿದ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು, ಅತ್ಯುತ್ತಮ ಮೈಕಟ್ಟಿನ ಯುವಕರಿಗೆ ಶಾಸಕ ಹುಸೇನ್ ಅವರೊಂದಿಗೆ ಬಹುಮಾನ ವಿತರಿಸಿ ಬೆನ್ನು ತಟ್ಟಿದರು.

ಸಂಗೀತ ರಾತ್ರಿ ಕಾರ್ಯಕ್ರಮದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ ನಟಿ ರಾಗಿಣಿ

ವಿವಿಧ ಸ್ಪರ್ಧೆಗಳಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಶಾಸಕ ಹುಸೇನ್ ಸೇರಿದಂತೆ ಗಣ್ಯರು ಬಹುಮಾನ ವಿತರಿಸಿದರು. ಸ್ಪರ್ಧೆಗಳಲ್ಲಿ ಪಾಲ್ಗೊಂಡವರಿಗೂ ಉಡುಗೊರೆ ನೀಡಿ ಪ್ರೋತ್ಸಾಹಿಸಲಾಯಿತು. ರಾತ್ರಿಯಾಗುತ್ತಿದ್ದಂತೆ ಶುರುವಾದ ಸಿನಿಮಾ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರ ಸಂಗೀತ ರಾತ್ರಿಯು ಚಳಿಗೆ ಮುದ ನೀಡಿತು.

ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಕುಣಿಗಲ್‌ ಶಾಸಕ ಡಾ. ಎಚ್.ಡಿ. ರಂಗನಾಥ್, ನೆಲಮಂಗಲ ಶಾಸಕ ಶ್ರೀನಿವಾಸ್, ಬಮೂಲ್ ನಿರ್ದೇಶಕ ಪಿ. ನಾಗರಾಜ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ಹಾಗೂ ಇತರರು ಇದ್ದರು.

ರಾಮೋತ್ಸವ ಪ್ರಯುಕ್ತ ನಡೆದ ಸಂಗೀತ ರಾತ್ರಿ ಕಾರ್ಯಕ್ರಮದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮಾತನಾಡಿದರು. ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್ ಸಿ.ಪಿ. ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯ ಎಸ್. ರವಿ ಇದ್ದಾರೆ
ರಾಮೋತ್ಸವವು ಕ್ಷೇತ್ರದ ಜನರನ್ನು ಸಾಂಸ್ಕೃತಿಕವಾಗಿ ಬೆಸೆಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಹಬ್ಬ. ನಾಲ್ಕೂ ದಿನ ನಡೆದ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಜನ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ನಮ್ಮ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ
– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ರಾಮನ ಹೆಸರಿನಲ್ಲಿ ಜನರನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಆದರೆ ರಾಮನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನೇತೃತ್ವದ ಈ ರಾಮೋತ್ಸವವು ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದೆ
– ರಿಜ್ವಾನ್ ಅರ್ಷದ್ ಶಿವಾಜಿನಗರ ಶಾಸಕ
ಸಂಗೀತ ರಾತ್ರಿ ಕಾರ್ಯಕ್ರಮದಲ್ಲಿ ಗಮನ ಸೆಳೆದ ನಟಿ ರಚಿತಾ ರಾಮ್
ನೀನಾಸಂ ಸತೀಶ್ ರಚಿತಾ ರಾಮ್ ಹವಾ!
ಸಿನಿಮಾ ನಟ ಸತೀಶ್ ನೀನಾಸಂ ನಟಿಯರಾದ ರಚಿತಾ ರಾಮ್ ರಾಗಿಣಿ ಸಪ್ತಮಿ ಗೌಡ ಅವರು ಸಂಗೀತ ರಾತ್ರಿಯ ವೇದಿಕೆಗೆ ವಿಶೇಷ ಕಳೆ ತಂದರು. ರಾಗಿಣಿ ಅವರು ಹಾಡೊಂದಕ್ಕೆ ಹೆಜ್ಜೆ ಹಾಕಿ ರಂಜಿಸಿದರು. ಸದ್ಯದಲ್ಲೇ ತೆರೆ ಕಾಣಲಿರುವ ತಮ್ಮ ‘ದ ರೈಸಿಂಗ್ ಅಶೋಕ’ ಸಿನಿಮಾದ ಬಗ್ಗೆ ಸತೀಶ್–ಸಪ್ತಮಿ ಗೌಡ ಮಾತನಾಡಿದರು. ರಚಿತಾ ರಾಮ್ ಮಾತುಗಳು ಪ್ರೇಕ್ಷಕರಿಗೆ ಮುದ ನೀಡಿದವು. ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.