ADVERTISEMENT

ಚನ್ನಪಟ್ಟಣ: ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:40 IST
Last Updated 10 ಅಕ್ಟೋಬರ್ 2021, 5:40 IST
ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಓವರ್‌ಹೆಡ್ ಟ್ಯಾಂಕ್‌ನಲ್ಲಿ ಸಿಕ್ಕ ಶವ ಪ್ರಕರಣದ ತನಿಖೆ ನಡೆಸಲು ತಹಶೀಲ್ದಾರ್ ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೇಶ್ ಗೌಡ, ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದಾಪುರ ಕೃಷ್ಣೇಗೌಡ, ಪದಾಧಿಕಾರಿಗಳಾದ ವೆಂಕಟೇಶ್, ದೇವೇಗೌಡ, ದಿಲೀಪ್ ಮತ್ತೀಕೆರೆ, ಹಸ್ಮಾನ್, ಸಯದ್ ನವಾಜ್, ಪ್ರಮೋದ್ ಕೋಟೆ, ಆಸಿಫ್ ಇದ್ದರು
ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಓವರ್‌ಹೆಡ್ ಟ್ಯಾಂಕ್‌ನಲ್ಲಿ ಸಿಕ್ಕ ಶವ ಪ್ರಕರಣದ ತನಿಖೆ ನಡೆಸಲು ತಹಶೀಲ್ದಾರ್ ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೇಶ್ ಗೌಡ, ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದಾಪುರ ಕೃಷ್ಣೇಗೌಡ, ಪದಾಧಿಕಾರಿಗಳಾದ ವೆಂಕಟೇಶ್, ದೇವೇಗೌಡ, ದಿಲೀಪ್ ಮತ್ತೀಕೆರೆ, ಹಸ್ಮಾನ್, ಸಯದ್ ನವಾಜ್, ಪ್ರಮೋದ್ ಕೋಟೆ, ಆಸಿಫ್ ಇದ್ದರು   

ಚನ್ನಪಟ್ಟಣ: ಪಟ್ಟಣವನ್ನು ಬೆಚ್ಚಿ ಬೀಳಿಸಿರುವ ಓವರ್‌ಹೆಡ್ ಟ್ಯಾಂಕ್‌ನಲ್ಲಿನ ಶವದ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಶನಿವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪ್ರತಿನಿತ್ಯ ಸಾವಿರಾರು ಜನರಿಗೆ ನೀರು ನೀಡುವ ಈ ಟ್ಯಾಂಕ್‌ಗೆ ಭದ್ರತೆ ಇಲ್ಲವಾಗಿದೆ. ಇಂದು ಶವವೊಂದು ಟ್ಯಾಂಕ್ ನೀರಿನಲ್ಲಿ ಮಿಶ್ರಣವಾಗಿ ನೀರೆಲ್ಲಾ ಕಲುಷಿತವಾಗಿ ಕಳೆದ ಎಂಟತ್ತು ದಿನಗಳಿಂದ ಜನರು ಈ ನೀರನ್ನು ಬಳಕೆ ಮಾಡಿದ್ದಾರೆ ಎಂದು
ದೂರಿದರು.

ಪ್ರತಿ ತಿಂಗಳು ಟ್ಯಾಂಕ್ ಸ್ವಚ್ಛತೆಗೆ ಗಮನ ನೀಡಬೇಕಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಈ ಪ್ರಕರಣಕ್ಕೆ ಕಾರಣವಾಗಿರುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ರಸ್ತೆಗಳಲ್ಲಿ ಪೈಪ್‌ಗಳು ಒಡೆದು ಹೋಗಿ ಚರಂಡಿಯ ಕಲುಷಿತ ನೀರು ಸೇರಿದರೂ ಈ ಬಗ್ಗೆ ಗಮನ ನೀಡುವುದಿಲ್ಲ. ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯವಹಿಸಿರುವುದು ನೂರಾರು ಜನರು ಅನಾರೋಗ್ಯಕ್ಕೆ ಕಾರಣವಾಗುವ ಸಂಭವವಿದೆ. ಇವೆಲ್ಲವೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿದೆ. ಜನರ ಪ್ರಾಣಕ್ಕೆ ಅಪಾಯವಾದರೆ ಅವರ ಕುಟುಂಬಕ್ಕೆ ಯಾರು ಹೊಣೆ ಎಂದು ವೇದಿಕೆಯ ಪದಾಧಿಕಾರಿಗಳು ಪ್ರಶ್ನಿಸಿದರು.

ಪ್ರಕರಣದಲ್ಲಿ ಶವದ ಪತ್ತೆಗೆ ಸೂಕ್ತ ಕ್ರಮ ಕೈಗೊಂಡು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ಮಾಡಲು ಪೊಲೀಸ್ ಇಲಾಖೆ ಹೆಚ್ಚಿನ ಶ್ರಮವಹಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ನಾಗೇಶ್, ಈ ಪ್ರಕರಣದಲ್ಲಿ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ವಾರ್ಡ್‌ಗಳಲ್ಲಿನ ಮನೆಗಳಲ್ಲಿ ನೀರನ್ನು ಬಳಸದಂತೆ ಮನವಿ ಮಾಡಿದ್ದು ಮನೆಗಳಲ್ಲಿನ ಟ್ಯಾಂಕ್, ಸಂಪುಗಳನ್ನು ಸ್ವಚ್ಛತೆ ಮಾಡಲು ಮನವಿ ಮಾಡಿದ್ದೇವೆ. ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೇಶ್ ಗೌಡ, ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದಾಪುರ ಕೃಷ್ಣೇಗೌಡ, ಪದಾಧಿಕಾರಿಗಳಾದ ವೆಂಕಟೇಶ್, ದೇವೇಗೌಡ, ದಿಲೀಪ್ ಮತ್ತೀಕೆರೆ, ಹಸ್ಮಾನ್, ಸಯದ್ ನವಾಜ್, ಪ್ರಮೋದ್ ಕೋಟೆ, ಆಸಿಫ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.