ADVERTISEMENT

Ricky Rai Gunfire Attack | ರಿಕ್ಕಿ ರೈ ಮೇಲೆ ಶೂಟೌಟ್‌: ಅಂಗರಕ್ಷಕ ಬಂಧನ

ಹೆಚ್ಚಿನ ವಿಚಾರಣೆಗೆ 10 ದಿನ ಪೊಲೀಸ್ ವಶಕ್ಕೆ ನೀಡಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 14:39 IST
Last Updated 24 ಏಪ್ರಿಲ್ 2025, 14:39 IST
<div class="paragraphs"><p>ಮೋನಪ್ಪ ವಿಠ್ಠಲ</p></div>

ಮೋನಪ್ಪ ವಿಠ್ಠಲ

   

ರಾಮನಗರ: ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ತಾಲ್ಲೂಕಿನ ಬಿಡದಿ– ಮುದುವಾಡಿ ರಸ್ತೆಯ ಕರಿಯಪ್ಪನದೊಡ್ಡಿ ಬಳಿ ವಾರದ ಹಿಂದೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ರಿಕ್ಕಿ ಅಂಗರಕ್ಷಕ ಮೋನಪ್ಪ ವಿಠ್ಠಲ ಎಂಬಾತನನ್ನು ಬಿಡದಿ ಠಾಣೆ ಪೊಲೀಸರು ಗುರುವಾರ ಬಂಧಿಸಿದರು.

ಘಟನೆ ದಿನ ರಿಕ್ಕಿ ಮನೆಯಲ್ಲಿದ್ದ ಅಂಗರಕ್ಷಕರು ಹಾಗೂ ಕೆಲಸಗಾರರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆ ಪೈಕಿ ಏ. 22ರಂದು ಮೋನಪ್ಪನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಆತನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.

ADVERTISEMENT

ಮೋನಪ್ಪ ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ತನಿಖಾಧಿಕಾರಿಗಳು ಸಂಜೆ ಬಂಧಿಸಿದರು. ನಂತರ ರಾಮನಗರದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಿಗಿ ಭದ್ರತೆಯಲ್ಲಿ ಕರೆತಂದರು. ನ್ಯಾಯಾಲಯದ ಎದುರು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 10 ದಿನ ಪೊಲೀಸ್ ವಶಕ್ಕೆ ಪಡೆದರು.

ಪೂರಕ ಸಾಕ್ಷ್ಯಾಧಾರ: ‘ತನಿಖೆ ಸಂದರ್ಭದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳು ಹಾಗೂ ವಿಚಾರಣೆಯಲ್ಲಿ ಮೋನಪ್ಪನೇ ಕೃತ್ಯ ಎಸಗಿರುವುದು ಗೊತ್ತಾಗಿದೆ. ಹಾಗಾಗಿ, ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಸುದ್ದಿಗಾರರಿಗೆ ತಿಳಿಸಿದರು.

‘ರಿಕ್ಕಿ ಅಂಗರಕ್ಷಕರು ಬಳಸುತ್ತಿದ್ದ 7 ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂದೂಕುಗಳ ಜೊತೆಗೆ ಸ್ಥಳದಲ್ಲಿ ಸಿಕ್ಕ ಗುಂಡುಗಳು, ಖಾಲಿ ಕಾಟ್ರೀಜ್‌ಗಳನ್ನು ಸಹ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿ ಕೊಟ್ಟಿದ್ದೇವೆ. ವರದಿ ಬಂದ ಬಳಿಕ ಕೃತ್ಯಕ್ಕೆ ಯಾವ ಬಂದೂಕು ಬಳಸಿದ್ದಾರೆ ಎಂಬುದು ಗೊತ್ತಾಗಲಿದೆ’ ಎಂದರು.

ಅಗತ್ಯವಿದ್ದರೆ ಮತ್ತೆ ವಿಚಾರಣೆ: ‘ಕೃತ್ಯದ ಹಿಂದಿರುವವರ ಕುರಿತು ದೂರುದಾರರು ಅನುಮಾನ ವ್ಯಕ್ತಪಡಿಸಿರುವ ನಾಲ್ವರ ಪೈಕಿ ಮೊದಲ ಆರೋಪಿ ರಾಕೇಶ್ ಮಲ್ಲಿ, 3ನೇ ಆರೋಪಿ ನಿತೇಶ್ ಶೆಟ್ಟಿಯನ್ನು ವಿಚಾರಣೆ ನಡೆಸಲಾಗಿದೆ. ಅಗತ್ಯವಿದ್ದರೆ ಮತ್ತೆ ಕರೆಯಲಾಗುವುದು. ಪ್ರಕರಣದ 2ನೇ ಮತ್ತು 4ನೇ ಆರೋಪಿಗಳು ವಿಚಾರಣೆಗೆ ಹಾಜರಾಗಲು ಕಾಲವಕಾಶ ಕೇಳಿದ್ದಾರೆ’ ಎಂದು ತಿಳಿಸಿದರು.

ಬಿಡದಿ ಬಳಿಯ ಕರಿಯಪ್ಪನದೊಡ್ಡಿಯಲ್ಲಿರುವ ಮನೆಗೆ ಏ. 18ರಂದು ರಾತ್ರಿ ರಿಕ್ಕಿ ರೈ ಬಂದಿದ್ದರು. ಮಧ್ಯರಾತ್ರಿ ವಾಪಸ್ ಹೋಗುವಾಗ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ರಿಕ್ಕಿ ಕಿವಿ ಮತ್ತು ತೋಳಿಗೆ ಗುಂಡೇಟು ತಗುಲಿತ್ತು. ಸದ್ಯ ರೈ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತನಿಖೆ ಸಂದರ್ಭದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳನ್ನು ಆಧರಿಸಿ ರಿಕ್ಕಿ ರೈ ಅಂಗರಕ್ಷಕನನ್ನು ಬಂಧಿಸಲಾಗಿದೆ. ಗುಂಡಿನ ದಾಳಿಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುವ ಸಲುವಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
– ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

33 ವರ್ಷಗಳಿಂದ ಜೊತೆಗಿದ್ದ ಅಂಗರಕ್ಷಕ

ಸುಮಾರು 53 ವರ್ಷದ ಮೋನಪ್ಪ ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದವನಾಗಿದ್ದಾನೆ. ಮುತ್ತಪ್ಪ ರೈಗೆ ಸುಮಾರು 29 ವರ್ಷಗಳಿಂದ ಅಂಗರಕ್ಷಕನಾಗಿದ್ದ. ರೈ ನಿಧನದ ಬಳಿಕ, ಪುತ್ರ ರಿಕ್ಕಿಗೂ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದ. ಮುತ್ತಪ್ಪ ರೈಗೆ ಕೆಟ್ಟದಾಗಿ ನಿಂದಿಸಿದ್ದ ಕಾರಣಕ್ಕಾಗಿ 1993ರಲ್ಲಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ. ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಅಂದಿನಿಂದಲೂ ಮುತ್ತಪ್ಪ ರೈ ಅಂಗರಕ್ಷಕನಾಗಿದ್ದ. ಇತ್ತೀಚೆಗೆ ಹೃದಯ ಸಂಬಂಧಿ ಅನಾರೋಗ್ಯಕ್ಕೆ ಒಳಗಾಗಿದ್ದ ಆತನಿಗೆ ಸ್ಟಂಟ್ ಅಳವಡಿಸಲಾಗಿತ್ತು. ಹಾಗಾಗಿ, ಮನೆಯ ಭದ್ರತೆಯ ಜವಾಬ್ದಾರಿ ವಹಿಸಲಾಗಿತ್ತು. ವಿವಾಹಿತವಾಗಿರುವ ಮೋನಪ್ಪನಿಗೆ ಇಬ್ಬರು ಪುತ್ರರಿದ್ದಾರೆ. ಒಬ್ಬ ಕಾಲೇಜಿಗೆ, ಮತ್ತೊಬ್ಬ ಶಾಲೆಗೆ ಹೋಗುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.