
ಮಾಗಡಿ: ಪಟ್ಟಣದ ಟಿಎಪಿಸಿಎಂಎಸ್ ವತಿಯಿಂದ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ 113 ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಮಾತನಾಡಿ, ಪರಿಸರದ ದಿನಾಚರಣೆ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಉತ್ತಮ ಪರಿಸರದಾರರಿಗೆ ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವಂತೆ ಶಾಸಕ ಬಾಲಕೃಷ್ಣ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗುತ್ತದೆ ಎಂದರು.
ಸಾಲುಮರದ ತಿಮ್ಮಕ್ಕ ಮಾಗಡಿ ತಾಲ್ಲೂಕಿನವರು ಎಂಬುದೇ ಹೆಮ್ಮೆ. ದೇಶ, ವಿದೇಶದಲ್ಲೂ ಅವರ ಹೆಸರು ಪರಿಚಿತವಾಗಿದ್ದು, ಪರಿಸರಕ್ಕೆ ಅವರ ಕೊಡುಗೆ ಅಪಾರ. ಅವರ ಸವಿ ನೆನಪಿಗಾಗಿ 113 ವಿವಿಧ ಜಾತಿಯ ಸಸಿಗಳನ್ನು ವಿತರಿಸುತ್ತಿರುವುದು ಉತ್ತಮ ಕೆಲಸ. ಸಸಿಗಳನ್ನು ಪಡೆದವರು ಉತ್ತಮ ರೀತಿಯಲ್ಲಿ ಪೋಷಿಸಿ ಹೆಮ್ಮರವಾಗಿ ಬೆಳಸಬೇಕು ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಗಂ.ದಯಾನಂದ್ ಮಾತನಾಡಿ, ‘ನನ್ನ ಮತ್ತು ತಿಮ್ಮಕ್ಕ ಅವರ ಒಡನಾಟ ಹೆಚ್ಚಾಗಿತ್ತು. ಅವರು ಕಾರ್ಯಕ್ರಮಕ್ಕೆ ಹೋಗಬೇಕಾದರೆ ನಾನು ಮತ್ತು ಕುದೂರಿನ ಸ್ನೇಹಿತರು ಕರೆದುಕೊಂಡು ಹೋಗುತ್ತಿದ್ದೆವು. ಅವರ ದತ್ತು ಪುತ್ರ ಉಮೇಶ್ ಬರುವವರೆಗೂ ಮಾಗಡಿಯಲ್ಲಿ ಸಾಕಷ್ಟು ಒಡನಾಟ ಹೊಂದಿದ್ದರು. ಅವರು ಸಾಲುಮರ ಬೆಳೆಸಲು ಬಹಳ ಕಷ್ಟ ಪಟ್ಟಿದ್ದಾರೆ. ಅವರ ಆಸೆಯಂತೆ ಹುಲಿಕಲ್ನಲ್ಲಿ ಹೆರಿಗೆ ಆಸ್ಪತ್ರೆ ಮಾಡಬೇಕೆಂಬ ಆಸೆ ಹಾಗೆ ಉಳಿದಿದೆ’ ಎಂದರು.
ಕಾಂಗ್ರೆಸ್ ಕಲ್ಪನಾ ಶಿವಣ್ಣ ಮಾತನಾಡಿ, ‘ತಿಮ್ಮಕ್ಕ ಅವರಿಗೆ ಕೊಟ್ಟಿರುವ ಎರಡು ಎಕರೆ ಜಾಗದಲ್ಲಿ ರಾಜ್ಯ ಸರ್ಕಾರ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕು. ಜೊತೆಗೆ ಸ್ಮಾರಕ ನಿರ್ಮಾಣ ಮಾಡಬೇಕೆಂದು’ ಒತ್ತಾಯಿಸಿದರು.
ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ತಿ.ನಾ.ಪದ್ಮನಾಭ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪುರಸಭೆ ಅಧ್ಯಕ್ಷೆ ಶಿವರುದ್ರಮ್ಮ ವಿಜಯಕುಮಾರ್, ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಕೆ. ಧನಂಜಯ್ಯ, ತೋಟದ ಮನೆ ಗಿರೀಶ್, ಟಿಎಪಿಎಂಎಸ್ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಸೋಮಶೇಖರ್, ಗೀತಾ ರಂಗನಾಥ್, ನಂಜುಂಡಯ್ಯ, ರವೀಶ್, ಚಂದ್ರೇಗೌಡ, ಸಿಬ್ಬಂದಿ ನಾರಾಯಣ್, ರಘು ಸೇರಿದಂತೆ ಇತರರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.