ಚನ್ನಪಟ್ಟಣ: ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಒಂಟಿ ಸಲಗವೊಂದು ದಾಳಿ ಮಾಡಿ ಮನೆಯೊಂದನ್ನು ಧ್ವಂಸ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಗ್ರಾಮದ ಚಾಮರಾಜ ಅವರ ಮನೆ ಮೇಲೆ ದಾಳಿ ಮಾಡಿರುವ ಸಲಗ, ಮನೆಯ ಗೋಡೆಯನ್ನು ಉರುಳಿಸಿ ಮೇಲ್ಭಾಗದಲ್ಲಿ ಹಾಕಿದ್ದ ಶೀಟ್ಗಳನ್ನು ಮುರಿದು ಹಾಕಿದೆ.
ಚಾಮರಾಜ, ಅವರ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ರಾತ್ರಿ ಊಟ ಮುಗಿಸಿಕೊಂಡು ಮಲಗಿದ ನಂತರ ಸಲಗ ದಾಳಿ ನಡೆಸಿದೆ. ಆಚೆ ದಡಬಡ ಸದ್ದು ಕೇಳಿ ಎದ್ದು ನೋಡಿದಾಗ ಸಲಗ ದಾಳಿ ನಡೆಸುತ್ತಿರುವುದು ಗೊತ್ತಾಗಿದೆ. ಭಯಭೀತರಾದ ಮನೆಯವರು ಆಚೆ ಬರಲು ಆಗದೆ ಒಳಗೆ ನಿಂತು ಆನೆ ದಾಳಿಯನ್ನು ಮೂಕಪ್ರೇಕ್ಷರರಂತೆ ಗಮನಿಸಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ಸಲಗ ಸ್ಥಳದಿಂದ ತೆರಳಿದ್ದು, ಆ ನಂತರ ಮನೆಯ ಹೊರಗಡೆ ಬಂದ ಚಾಮರಾಜ ಅವರು, ಗ್ರಾಮದವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆನಡೆಸಿದರು.
ಬೆಳೆ ನಷ್ಟ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ರೈತರೊಬ್ಬರ ಸಪೋಟ ತೋಟವನ್ನು ಧ್ವಂಸ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಗ್ರಾಮದ ಪಟೇಲ್ ಶಿವಣ್ಣ ಅವರ ಮಗ ಮಲ್ಲೇಶ್ ಅವರ ತೋಟಕ್ಕೆ ನುಗ್ಗಿರುವ ಆನೆಗಳು ಸಪೋಟ ತೋಟದ ಜೊತೆಗೆ ಇತರೇ ಮರಗಳನ್ನು ಮುರಿದು ಹಾಕಿವೆ. ಈ ಭಾಗದಲ್ಲಿ ಕಾಡಾನೆಗಳು ರೈತರ ಬೆಳೆಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ರೈತರು
ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.