ರಾಮನಗರ: ನಗರದ 3ನೇ ವಾರ್ಡ್ ಗಾಂಧಿನಗರ ಬಡಾವಣೆಯ ಜನನಿಬಿಡ ಪ್ರದೇಶದಲ್ಲಿ ಗುರುವಾರ 20ಕ್ಕೂ ಹೆಚ್ಚು ಹಾವಿನ ಮರಿಗಳು ಕಾಣಿಸಿಕೊಂಡು ಜನರು ಆತಂಕಕ್ಕೀಡಾದರು.
ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿರುವ ಗೌತಮ್ ಎಂಬುವರ ಮನೆ ಎದುರಿನ ಚರಂಡಿಯಲ್ಲಿ ಹಾವಿನ ಮರಿಗಳು ಪತ್ತೆಯಾದವು. ಬೆಳಿಗ್ಗೆ ಗೌತಮ್ ಮನೆ ಮುಂದೆ ಒಂದು ಹಾವಿನ ಮರಿ ಕಾಣಿಸಿಕೊಂಡಿದೆ. ಆತಂಕದಿಂದ ಹುಡುಕಾಡಿದ ನಂತರ ಮೋರಿಯಲ್ಲಿ ಇನ್ನಷ್ಟು ಮರಿಗಳು ಸಿಕ್ಕವು. ಉರಗತಜ್ಞರು ಹಾಗೂ ಸಾರ್ವಜನಿಕರ ನೆರವಿನಿಂದ ಹಾವಿನ ಮರಿಗಳನ್ನು ಸುರಕ್ಷಿತವಾಗಿ ಚೀಲವೊಂದರಲ್ಲಿ ರಕ್ಷಿಸಲಾಯಿತು.
ಈ ಪೈಕಿ ಎರಡು ಮರಿಗಳು ಸಾವನ್ನಪ್ಪಿದವು. ತಾಯಿ ಹಾವಿಗಾಗಿ ಸುತ್ತಮುತ್ತಲಿನ ಚರಂಡಿ ಹಾಗೂ ಮತ್ತಿತರ ಕಡೆ ಶೋಧ ನಡೆಸಿದರೂ ಅದು ಪತ್ತೆಯಾಗಲಿಲ್ಲ. ಇಷ್ಟೊಂದು ಹಾವಿನ ಮರಿಗಳನ್ನು ಕಂಡು ಹೌಹಾರಿದ್ದ ಗಾಂಧಿನಗರದ ನಿವಾಸಿಗಳು ಮರಿಗಳ ರಕ್ಷಣೆ ನಂತರ ನಿಟ್ಟುಸಿರು ಬಿಟ್ಟರು. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.
ಈ ಹಾವುಗಳು ಮಂಡಲ ಜಾತಿಗೆ ಸೇರಿದ್ದು, ಅವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.