ADVERTISEMENT

ಗುಡ್ಡದ ರಂಗನಾಥಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 13:07 IST
Last Updated 18 ಡಿಸೆಂಬರ್ 2018, 13:07 IST
ವೈಕುಂಠ ಏಕಾದಶಿ ಅಂಗವಾಗಿ ಗುಡ್ಡದ ರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ವೈಕುಂಠ ಏಕಾದಶಿ ಅಂಗವಾಗಿ ಗುಡ್ಡದ ರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು   

ಮಾಗಡಿ: ಗುಡ್ಡದ ರಂಗನಾಥಸ್ವಾಮಿ ದೇವಾಲಯ ಮತ್ತು ಇತರೆ ವೈಷ್ಣವ ದೇವಾಲಯಗಳಲ್ಲಿ ಮಂಗಳವಾರ ವೈಕುಂಠ ಏಕಾದಶಿ ಪೂಜಾ ಮಹೋತ್ಸವ ಸಡಗರದಿಂದ ನಡೆಯಿತು.

ಮಾದಿಗೊಂಡನಹಳ್ಳಿ ಗುರುಮಠದ ಅಧ್ಯಕ್ಷ ಎಂ.ಆರ್.ರಾಮಸ್ವಾಮಿ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದರು.

‘ಭಕ್ತಿ ಎಂದರೆ ದೇವರ ದಾಸ್ಯವನ್ನು ಅಂಗೀಕರಿಸುವುದು ಎಂದರ್ಥ’ ಎಂದು ರಂಗನಾಥಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟಿನ ಅಧ್ಯಕ್ಷ ವೀರಪ್ಪ ತಿಳಿಸಿದರು.

ಟ್ರಸ್ಟಿನ ಕಾರ್ಯದರ್ಶಿ ಚಂದ್ರು ಮಾತನಾಡಿ, ‘ದೇವರು ಕೆಲವರ ಜೀವನದಲ್ಲಿ ಆಶೀರ್ವಾದವಾಗಿ ಬರುತ್ತಾರೆ. ಇನ್ನು ಕೆಲವರಲ್ಲಿ ಪಾಠವಾಗಿ ಕಾಣಿಸಿಕೊಳ್ಳುತ್ತಾರೆ. ಮಹಾಮಹಿಮ ಗುಡ್ಡದ ರಂಗನಾಥಸ್ವಾಮಿಯನ್ನು ನಂಬಿ ಎಲ್ಲರೊಡನೆ ಒಗ್ಗೂಡಿ ಬದುಕೋಣ’ ಎಂದರು.

ADVERTISEMENT

ಗುರುಪೀಠದ ಅಧ್ಯಕ್ಷ ಎಂ.ಆರ್.ರಾಮಸ್ವಾಮಿ ಮಾತನಾಡಿ, ‘ವೈಕುಂಠ ಏಕಾದಶಿ ದಿನ ಭೂಲೋಕದ ಮುಗ್ಧ ಭಕ್ತರ ಮನೆಗೆ ಬರುವ ಮಹಾವಿಷ್ಣು ಸತ್ಯದ ದರ್ಶನ ನೀಡಲಿದ್ದಾನೆ’ ಎಂಬ ನಂಬಿಕೆ ಇದೆ ಎಂದರು.

ಟ್ರಸ್ಟಿನ ಉಪಾಧ್ಯಕ್ಷ ರಂಗಸ್ವಾಮಿ.ಆರ್, ಖಜಾಂಚಿ ಶಿವಶಂಕರ್, ಸಹಕಾರ್ಯದರ್ಶಿ ಶಿವಪ್ರಕಾಶ್.ಆರ್ ಮಾತನಾಡಿದರು. ದೇವಾಲಯದ ಧರ್ಮದರ್ಶಿಗಳಾದ ದೇವರಾಜು.ಬಿ.ಜಿ, ಮಂಜುನಾಥ್.ಎಲ್.ಜಿ, ರಂಗಸ್ವಾಮಯ್ಯ, ನಾಗರಾಜು.ಆರ್, ಗಂಗಗುಡ್ಡಯ್ಯ, ರಂಗನಾಥ.ಆರ್, ಗಂಗಗುಡ್ಡಯ್ಯ.ಡಿ, ಗಿರೀಶ್.ಜಿ ಇದ್ದರು.

ಮುಖ್ಯಮಂತ್ರಿ ವಿಶೇಷ ಅಧಿಕಾರಿ ಶಿವಲಿಂಗಯ್ಯ ಕ್ಯಾಲೆಂಡರ್‌ ಬಿಡುಗಡೆಗೊಳಿಸಿದರು. ರಾಜಗೋಪುರ ನಿರ್ಮಾಣಕ್ಕೆ ಸಹಾಯಹಸ್ತ ಚಾಚಿದ ಭಕ್ತರಾದ ಭಾಸ್ಕರ್ ಕುಟುಂಬದವರು, ಗಿರಿಧರ್, ಪುಟ್ಟಸ್ವಾಮಯ್ಯ, ಚೇತನ್ ಅವರನ್ನು ಸನ್ಮಾನಿಸಲಾಯಿತು.

ಭಕ್ತರೆಲ್ಲರಿಗೂ ‘ಪ್ರಜಾವಾಣಿ’ ದಿನಪತ್ರಿಕೆ, ದೇವರ ಚಿತ್ರಪಟ ಮತ್ತು ಲಾಡು ವಿತರಿಸಲಾಯಿತು. ಕಲಾವಿದ ವೇಣುಗೋಪಾಲ್ ತಂಡದವರು ನಾದನಮನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕೊರೆಯುವ ಚಳಿಯಲ್ಲೂ ಭಕ್ತರು ಸಾಲಾಗಿ ನಿಂತು ದೇವರ ದರ್ಶನ ಪಡೆದರು.

ಏಕಾದಶಿ: ಶ್ರೀಪತಿಹಳ್ಳಿ ದೇವರಹಟ್ಟಿ ಲಕ್ಷ್ಮೀನರಸಿಂಹಸ್ವಾಮಿ, ಸೋಲೂರಿನ ರೇಣುಕಾ ಯಲ್ಲಮ್ಮದೇವಿ, ಆಂಜನೇಯ ಸ್ವಾಮಿ, ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀಗಿರಿಪುರದ ಆಂಜನೇಯಸ್ವಾಮಿ, ಗೊರೂರು ಬೆಟ್ಟದ ರಂಗನಾಥಸ್ವಾಮಿ, ಕುದೂರಿನ ಲಕ್ಷ್ಮೀವೆಂಕಟರಮಣಸ್ವಾಮಿ, ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ, ಕಲ್ಲೂರಿನ ಆಂಜನೇಯಸ್ವಾಮಿ, ವರದರಾಜಸ್ವಾಮಿ, ತಿರುಮಲೆ ಶ್ರೀನಿವಾಸಸ್ವಾಮಿ, ಹೊಸಪೇಟೆ ರಸ್ತೆ ಸೀತಾರಾಮ ಆಂಜನೇಯಸ್ವಾಮಿ, ಬಂಗಲೆ ಆಂಜನೇಯಸ್ವಾಮಿ, ಗದ್ದೆ ಬಯಲು ಲಕ್ಷ್ಮೀನರಸಿಂಹಸ್ವಾಮಿ, ಬೈಚಾಪುರದ ವರದರಾಜಸ್ವಾಮಿ, ದೊಡ್ಡಮುದಿಗೆರೆ ರಂಗನಾಥಸ್ವಾಮಿ, ಸಾತನೂರಿನ ವಿಠ್ಠಲರಾಯಸ್ವಾಮಿ, ಕೊಟ್ಟಗಾರಹಳ್ಳಿ ಪ್ರಸನ್ನರಾಮಾಂಜನೇಯ ಸ್ವಾಮಿ, ಶ್ರೀನಿವಾಸದೇವರು, ನೇರಳೆಕೆರೆ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಉತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.