ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಮ್ಮೇಗೌಡನದೊಡ್ಡಿಯಲ್ಲಿರುವ ಅಮೃತ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಸೈನ್ಸ್ ಕಾಲೇಜಿನಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಅಭಿಮುಖತಾ ಕಾರ್ಯಕ್ರಮವನ್ನು ಆಡಳಿತ ಮಂಡಳಿ ಅಧ್ಯಕ್ಷ ಡಾ. ಮಹಾಂತೇಶ ಎಸ್. ಶೆಟ್ಟರ ಉದ್ಘಾಟಿಸಿದರು.
ಬಿಡದಿ (ರಾಮನಗರ): ‘ವಿದ್ಯಾರ್ಥಿಗಳು ಶಿಸ್ತು, ಆತ್ಮವಿಶ್ವಾಸದ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಪರೀಕ್ಷಾ ಒತ್ತಡ ಎದುರಿಸುವ ಕೌಶಲವು ತಂತಾನೆ ಬರುತ್ತದೆ’ ಎಂದು ಅಮೃತ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಸೈನ್ಸ್ನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಮಹಾಂತೇಶ ಎಸ್. ಶೆಟ್ಟರ ಹೇಳಿದರು.
ಹೋಬಳಿಯ ತಿಮ್ಮೇಗೌಡನದೊಡ್ಡಿಯಲ್ಲಿರುವ ಅಮೃತ ಕಾಲೇಜಿನಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಅಭಿಮುಖತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಪಠ್ಯಕ್ರಮವನ್ನು ಸರಿಯಾಗಿ ಅಭ್ಯಸಿಸಬೇಕು. ಜೊತೆಗೆ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನದಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ’ ಎಂದರು.
‘ತಾಂತ್ರಿಕ ಜ್ಞಾನದದ ಜೊತೆಗೆ ಸಂವಹನ ಕೌಶಲ, ನಾಯಕತ್ವ, ಒಗ್ಗೂಡಿ ಕೆಲಸ ಮಾಡುವಂತಹ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಕೋರ್ಸ್ ಮುಗಿಯುತ್ತಿದ್ದಂತೆ ಉದ್ಯೋಗಾರ್ಹತೆಗೆ ಪೂರಕವಾದ ತರಬೇತಿಗಳನ್ನು ಮುಗಿಸಿ, ಉತ್ತಮ ಉದ್ಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ. ಸಂತೋಷ್ ಎಂ. ಮುರ್ನಾಳ್ ಮಾತನಾಡಿ, ‘ಮೊದಲ ವರ್ಷದ ಪಠ್ಯಕ್ರಮವು ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನಕ್ಕೆ ಭದ್ರವಾದ ಅಡಿಪಾಯ ಹಾಕುತ್ತದೆ. ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಸಮಯ ನಿರ್ವಹಣೆಯಿಂದ ಅಧ್ಯಯನ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಡೀನ್ ಡಾ. ರಾಜೇಶ್ವರ ಕಾಡದೇವರಮಠ, ‘ಸೆಮಿಕಂಡಕ್ಟರ್ ಮಿಷನ್ನಡಿ ಭಾರತದ ಎಂಜಿನಿಯರ್ಗಳು 32-ಬಿಟ್ ‘ವಿಕ್ರಮ್’ ಚಿಪ್ ಅಭಿವೃದ್ಧಿಪಡಿಸಿದ್ದಾರೆ. ಇದು ದೇಶದ ತಾಂತ್ರಿಕ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಸಾಧನೆ. ಸೆಮಿಕಂಡಕ್ಟರ್ ತಂತ್ರಜ್ಞಾನವು ಮುಂದೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಕೌಶಲ ಬೆಳೆಸಿಕೊಳ್ಳಬೇಕು’ ಎಂದರು.
ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.