ಚನ್ನಪಟ್ಟಣ: ಅರಳಾಳುಸಂದ್ರದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯ ವಿದ್ಯಾರ್ಥಿನಿ ಜಡೆ ಹಾಕಿಲ್ಲ ಎಂದು ಸಿಟ್ಟಿಗೆದ್ದ ಅತಿಥಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯ ತಲೆಗೂದಲು ಕತ್ತರಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ ಅವರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಶಿಕ್ಷಕಿಯು ತನ್ನಿಂದ ತಪ್ಪಾಗಿದೆ ಎಂದು ವಿದ್ಯಾರ್ಥಿನಿಯ ಪೋಷಕರು ಮತ್ತು ಶಾಲಾ ಮೇಲ್ವಿಚಾರಣೆ ಮತ್ತು ಅಭಿವೃದ್ಧಿ ಸಮಿತಿಯ (ಎಸ್ಡಿಎಂಸಿ) ಕ್ಷಮೆ ಕೇಳಿದ್ದಾರೆ.
ಸೂಚನೆಯ ನಂತರವೂ ವಿದ್ಯಾರ್ಥಿನಿ ಜಡೆ ಹಾಕಿಕೊಂಡು ಬಂದಿಲ್ಲ ಎಂದು ಕೋಪಗೊಂಡ ಶಿಕ್ಷಕಿ, ಒಂಬತ್ತನೇ ತರಗತಿ ವಿದ್ಯಾರ್ಥಿನಿಯ ಸ್ವಲ್ಪ ತಲೆಗೂದಲು ಕತ್ತರಿಸಿದ್ದಾರೆ. ಈ ಘಟನೆಯ ನಂತರ ಮಂಕಾಗಿದ್ದ ವಿದ್ಯಾರ್ಥಿನಿಯಿಂದ ವಿಷಯ ತಿಳಿದುಕೊಂಡ ಪೋಷಕರು ಶನಿವಾರ ಶಾಲೆಗೆ ತೆರಳಿ ಶಿಕ್ಷಕಿ ಹಾಗೂ ಎಸ್ಡಿಎಂಸಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಪ್ರತಿದಿನ ಶಾಲೆಗೆ ಎರಡು ಜಡೆ ಹಾಕಿಕೊಂಡು ಬರುವಂತೆ ಎಲ್ಲ ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿತ್ತು. ಆದರೂ, ಈ ವಿದ್ಯಾರ್ಥಿನಿ ಜಡೆ ಹಾಕಿಕೊಳ್ಳದೆ ಕೂದಲು ಹಾಗೆ ಬಿಟ್ಟುಕೊಂಡು ಬರುತ್ತಿದ್ದಳು. ಆಕೆಗೆ ಬುದ್ಧಿ ಕಲಿಸಲು ಸ್ವಲ್ಪ ತಲೆಗೂದಲು ಕತ್ತರಿಸಿದ್ದೇನೆಯೇ ಹೊರತು ಬೇರೆ ಯಾವ ದುರುದ್ದೇಶದಿಂದ ಅಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದಾರೆ ಕ್ಷಮೆ ಕೇಳುತ್ತೇನೆ’ ಎಂದು ಶಿಕ್ಷಕಿ ಸಮಜಾಯಿಷಿ ನೀಡಿದರು.
ಶಿಕ್ಷಕಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೋಷಕರು ಮತ್ತೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿ ತೆರಳಿದರು. ಘಟನೆ ನಂತರ ಸಭೆ ನಡೆಸಿದ ಎಸ್ಡಿಎಂಸಿ ಸದಸ್ಯರು, ಶಾಲೆಗೆ ಇದೊಂದು ಕಪ್ಪುಚುಕ್ಕೆಯಾಗಿದ್ದು ವಿಷಯ ಬೆಳೆಸುವುದು ಬೇಡ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಪೋಷಕರನ್ನು ಸಮಾಧಾನ ಮಾಡಿ ಕಳಿಸಿದ್ದಾರೆ.
ಒಂದು ವರ್ಷದಿಂದ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಪಿಯು ಕಾಲೇಜಿನ ಪ್ರಭಾರ ಪಾಂಶುಪಾಲರ ಪತ್ನಿ, ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಆರಿಸಿಕೊಂಡ ಮಾರ್ಗ ದಿಗ್ಭ್ರಮೆ ಮೂಡಿಸಿದೆ. ಇಂಥ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂದು ಸಂಬಂಧಿಸಿದವರು ಶಿಕ್ಷಕಿಗೆ ಬುದ್ಧಿ ಹೇಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವಿದ್ಯಾರ್ಥಿನಿ ತಲೆಗೂದಲು ಕತ್ತರಿಸಿರುವ ಘಟನೆಗೆ ಸಂಬಂಧಿಸಿದಂತೆ ಕೆಪಿಎಸ್ ಶಾಲೆಯ ಅತಿಥಿ ಶಿಕ್ಷಕಿಯನ್ನು ಕೆಲಸದಿಂದ ತೆಗೆಯಲಾಗುವುದು. ಜೊತೆಗೆ ಮುಖ್ಯ ಶಿಕ್ಷಕರನ್ನು ಸಹ ಅಮಾನತು ಮಾಡಲಾಗುವುದು– ವಿ.ಸಿ. ಬಸವರಾಜೇಗೌಡ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.