
ಮಾಗಡಿ: ತಾಲ್ಲೂಕಿನ ಸಾವನದುರ್ಗದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ವೇಳೆ ವಿದೇಶಿ ಹಣ ದುರುಪಯೋಗ ಆರೋಪದ ಅಡಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಎನ್.ಜಗದೀಶ್ ಗೌಡ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಅಮಾನತ್ತು ಮಾಡಿದೆ.
ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಎನ್.ಜಗದೀಶ್ ಗೌಡ 2025ರ ಡಿಸೆಂಬರ್ 24ರಂದು ನಡೆದ ದೇವಾಲಯದ ಹುಂಡಿ ಏಣಿಕೆಯಲ್ಲಿ ವಿದೇಶಿ ಹಣ ಕಳುವು ಮಾಡಿದ ಆರೋಪ ಮೇಲೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೋಲೀಸ್ ಅಧಿಕಾರಿಗಳು, ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡ ರಚಿಸಿ, ತನಿಖೆ ನಡೆಸಲಾಗಿತ್ತು. ತಂಡದ ತನಿಖೆಯಲ್ಲಿ ಆರೋಪ ಸಾಬೀತು ಆಗಿರುವ ಹಿನ್ನೆಲೆಯುಲ್ಲಿ ಪ್ರಸ್ತುತ ರೇವಣ ಸಿದ್ದೇಶ್ವರ ಬೆಟ್ಟದ ದೇಗುಲದ ಇಒ ಆಗಿದ್ದ ಜಗದೀಶ್ ಗೌಡ ಅವರನ್ನು ಅಮಾನತ್ತು ಮಾಡಲಾಗಿದ್ದು, ವಿಚಾರಣೆ ಆದೇಶ ಕಾಯ್ದಿರಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಿ. ಶರತ್ ಆದೇಶ ಹೊರಡಿಸಿದ್ದಾರೆ.
ಹುಂಡಿ ಎಣಿಕೆ ವೇಳೆ ದೊರೆತ ವಿದೇಶಿ ನೋಟುಗಳನ್ನು ಎನ್.ಜಗದೀಶ್ಗೌಡ ಅವರಿಗೆ ನೀಡಿರುವುದಾಗಿ ದೇಗುಲದ ಸಿಬ್ಬಂದಿ ರಾಕೇಶ್ ತಿಳಿಸಿದ್ದರು. ಆದರೆ ಹುಂಡಿಯಲ್ಲಿ ದೊರೆತ ವಿದೇಶಿ ನೋಟುಗಳ ಬಗ್ಗೆ ಶಾಸನಬದ್ದ ಹುಂಡಿ ವಹಿಯಲ್ಲಿ ದಾಖಲು ಮಾಡಿರಲಿಲ್ಲ. ಹುಂಡಿ ಎಣಿಕೆ ಹಣ ದುರುಪಯೋಗ, ಕರ್ತವ್ಯಲೋಪ ತೋರಿ ಬೇಜವಾಬ್ದಾರಿತನ ಮತ್ತು ನಂಬಿಕೆ ದ್ರೋಹವೆಸಗಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದು ಮೇಲುನೋಟಕ್ಕೆ ಕಂಡು ಬಂದಿರುವುದರಿಂದ ಇವರ ಮೇಲಿನ ಆರೋಪಗಳ ಕುರಿತು ಇಲಾಖಾ ವಿಚಾರಣೆ ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಲಾಗಿದೆ ಎಂದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.