ADVERTISEMENT

ಬಿಡದಿ: ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:43 IST
Last Updated 29 ಮಾರ್ಚ್ 2021, 2:43 IST
ಜಿಲ್ಲಾ ಘಟಕ ಕಾರ್ಯಗಳ ಸಭೆಯನ್ನು ಕರ್ನಾಟಕ ಜನಸೈನ್ಯ ಸಂಘಟನ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಕೆ. ಎರ್ರಿಸ್ವಾಮಿ ಉದ್ಘಾಟಿಸಿದರು
ಜಿಲ್ಲಾ ಘಟಕ ಕಾರ್ಯಗಳ ಸಭೆಯನ್ನು ಕರ್ನಾಟಕ ಜನಸೈನ್ಯ ಸಂಘಟನ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಕೆ. ಎರ್ರಿಸ್ವಾಮಿ ಉದ್ಘಾಟಿಸಿದರು   

ಬಿಡದಿ: ರೈತ ಸೇವಾ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಘಟಕ ಕಾರ್ಯಗಳ ಸಭೆಯನ್ನು ಕರ್ನಾಟಕ ಜನಸೈನ್ಯ ಸಂಘಟನ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಕೆ ಎರ್ರಿಸ್ವಾಮಿ ಉದ್ಘಾಟಿಸಿದರು.

‘ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಬಿ ಮತ್ತು ಸಿ ದರ್ಜೆ ಹುದ್ದೆಗಳ ಉದ್ಯೋಗಾವಕಾಶಕ್ಕೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು. ಡಾ. ಸರೋಜಿನಿ ಮಹಿಷಿ ವರದಿ ಪ್ರಕಾರ ಕೈಗಾರಿಕಾ ವಲಯದಲ್ಲಿ ಕನ್ನಡಿಗರಿಗೆ ಶೇಕಡ 80 ರಷ್ಟು ಉದ್ಯೋಗ ಮೀಸಲಾತಿ ಸಿಗಬೇಕು. ಇದರಲ್ಲಿ ಬಿ ಮತ್ತು ಸಿ ದರ್ಜೆ ಹುದ್ದೆಗಳನ್ನು ನೀಡಬೇಕಾಗಿದೆ. ಆದರೆ ಪ್ರಸ್ತುತ ಸಿ ಮತ್ತು ಡಿ ಉದ್ಯೋಗವಕಾಶಗಳನ್ನು ಮಾತ್ರ ನೀಡಲಾಗುತ್ತಿದೆ’ ಎಂದರು.

‘ಸ್ಥಳೀಯರಿಗೆ ಸುದ್ದಿ ದೊರಕಿರುವ ಉದ್ಯೋಗವಕಾಶಗಳ ಸಾಧ್ಯತೆ ಬಗ್ಗೆ ಎಲ್ಲ ಖಾಸಗಿ ಕಂಪನಿಗಳಿಂದ ಹಾಗೂ ಕಾರ್ಮಿಕ ಇಲಾಖೆಯಿಂದ ಮಾಹಿತಿ ಪಡೆಯಲಾಗುತ್ತಿದೆ. ವರದಿ ಕೈ ಸೇರಿದ ನಂತರ ಅಸಮಾನತೆಯನ್ನು ಸರಿದೂಗಿಸಲು ಕನ್ನಡಪರ ಪ್ರಗತಿಪರ ಹಾಗೂ ರೈತರ ಪರ ಸಂಘಟನೆಗಳ ಸಹಯೋಗದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡಲಾಗುತ್ತದೆ. ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿರುವ ಬಿಡದಿ
ಕೈಗಾರಿಕೆ ಪ್ರದೇಶದಿಂದಲೇ ಈ ಹೋರಾಟದ ಕಿಚ್ಚು ಹೊತ್ತಿಕೊಳ್ಳಲಿದೆ’ ಎಂದು ತಿಳಿಸಿದರು.

ADVERTISEMENT

‘ಕನ್ನಡಪರ ಸಂಘಟನೆಗಳು ಜನರಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸೇವೆಗೆ ಬದ್ಧ, ಹೋರಾಟಕ್ಕೆ ಸಿದ್ಧ ಎಂಬ ಘೋಷಣೆಯೊಂದಿಗೆ ಕರ್ನಾಟಕ ಸಂಘಟನೆ ಜನಸ್ನೇಹಿಯಾಗಿ ನಾಡಿನ ಸೇವೆ ಮಾಡಲಿದೆ’ ಎಂದರು.

‘ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ವಿವಾದಗಳ ಜೊತೆಗೆ ಗಡಿ ವಿವಾದಗಳು ಸಾಕಷ್ಟಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು, ರಾಜಕಾರಣಿಗಳು ಸಿ.ಡಿ ಹಗರಣದ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಜನಸೈನ್ಯ ಸಂಘಟನೆ ಜಿಲ್ಲಾ ಘಟಕದ ಧ್ಯಕ್ಷ ಬಿ.ಸಿ ಬಸವಲಿಂಗಯ್ಯ, ಪದಾಧಿಕಾರಿಗಳಾದ ನಾಗರಾಜು, ಕೃಷ್ಣ, ಸಂತೋಷ್, ಶಿವಕುಮಾರ್, ರಾಕೇಶ್, ವಿಜಯ್, ಅನಿಫ್, ರಾಜಣ್ಣ, ಸಿದ್ದಲಿಂಗರಾಜ ಅರಸು, ಮುನಿರಾಜು, ಪ್ರಜ್ವಲ್ ಕುಮಾರ್, ಮಹಿಳಾ ಘಟಕದ ಸದಸ್ಯರು ಜಯಲಕ್ಷ್ಮಮ್ಮ, ಯಶೋಧ, ಗೀತಾ, ಲಾವಣ್ಯ, ಪಲ್ಲವಿ, ಸ್ಪರ್ಧಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.