ADVERTISEMENT

ನಗರಸಭಾ ಸದಸ್ಯತ್ವ ರದ್ದುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 7:18 IST
Last Updated 5 ಡಿಸೆಂಬರ್ 2023, 7:18 IST
ಚನ್ನಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ವಾಸಿಲ್ ಆಲಿಖಾನ್ ಮಾತನಾಡಿದರು. ನಗರಸಭಾ ಸದಸ್ಯರಾದ ಮತಿನ್, ಲಿಯಾಖತ್, ಇತರರು ಇದ್ದರು
ಚನ್ನಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ವಾಸಿಲ್ ಆಲಿಖಾನ್ ಮಾತನಾಡಿದರು. ನಗರಸಭಾ ಸದಸ್ಯರಾದ ಮತಿನ್, ಲಿಯಾಖತ್, ಇತರರು ಇದ್ದರು   

ಚನ್ನಪಟ್ಟಣ: ‘ನಗರಸಭೆ ಆವರಣದಲ್ಲೇ ನನ್ನ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 28ನೇ ವಾರ್ಡಿನ ನಗರಸಭೆ ಸದಸ್ಯೆ ಅಬಿದಾ ಬಾನು ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಬೇಕು’ ಎಂದು ನಗರಸಭೆ ಕಾಂಗ್ರೆಸ್ ಸದಸ್ಯ ವಾಸೀಲ್ ಅಲಿಖಾನ್ ಆಗ್ರಹಿಸಿದರು.

ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಪ್ರಸ್ತಾಪವಾದ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯೆ ಅಬಿದಾ ಬಾನು ಮಗ ಸುಹೇಲ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದ ವಿಡಿಯೋ ಸೇರಿದಂತೆ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದು, ಜನಪ್ರತಿನಿಧಿಗೆ ಅಪಮಾನ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆ ಆವರಣದಲ್ಲಿ ನಡೆದ ಘಟನೆ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದೆ. ಇದರಿಂದ ಮನನೊಂದ ನನ್ನ ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಇತರೆ ನಗರಸಭೆ ಸದಸ್ಯರು, ಹಿತೈಷಿಗಳ ಒತ್ತಾಯದ ಮೇರೆಗೆ ನನ್ನ ನಿರ್ಧಾರವನ್ನು ಹಿಂಪಡೆದೆ. ನಗರಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಕುಟಂಬದವರು ಹಸ್ತಕ್ಷೇಪ ನಡೆಸುತ್ತಾ, ಅಧಿಕಾರ ನಡೆಸುತ್ತಿರುವ ವಿಚಾರವನ್ನು ನಾನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದೆ. ಇದನ್ನೆ ಆಧಾರವಾಗಿಟ್ಟುಕೊಂಡು ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ನಾನು ನಗರಸಭೆಗೆ ಮೂರು ಬಾರಿ ಸದಸ್ಯನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದೇನೆ. ಎಂದೂ ಈ ರೀತಿಯ ಕಹಿ ಅನುಭವವಾಗಿರಲಿಲ್ಲ. ನಮ್ಮ ಪಕ್ಷದವರು ಸಹ ಈ ವಿಚಾರದಲ್ಲಿ ಸರಿಯಾಗಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಸಹ ನನಗೆ ಸರಿಯಾದ ಸಹಕಾರ ಸಿಗಲಿಲ್ಲ. ಇದರಿಂದ ಬೇಸರವಾಗಿದೆ ಎಂದು ವಾಸಿಲ್ ತಿಳಿಸಿದರು.

ನಗರಸಭೆ ಸದಸ್ಯರಾದ ಮತಿನ್, ಲಿಯಾಖತ್, ಮುಖಂಡರಾದ ಶಬೀರ್, ತೌಸಿಫ್, ಲೋಕೇಶ್, ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.