ಚನ್ನಪಟ್ಟಣ: ತಾಲ್ಲೂಕಿನ ವಿರುಪಸಂದ್ರದಲ್ಲಿ ಶನಿವಾರ ಕಾಡಾನೆ ದಾಳಿಗೆ ಮಾವಿನ ತೋಟದ ಕಾವಲುಗಾರ ವೀರಭದ್ರಯ್ಯ(52) ಎಂಬುವವರು ಮೃತಪಟ್ಟಿದ್ದಾರೆ.
ಕನಕಪುರದವರಾದ ವೀರಭದ್ರಯ್ಯ ಅವರು, ಲೋಕೇಶ್ ಎಂಬುವರ ಮಾವಿನ ತೋಟದಲ್ಲಿ ಮೂರ್ನಾಲ್ಕು ತಿಂಗಳಿಂದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.
ನಸುಕಿನಲ್ಲಿ ತೋಟಕ್ಕೆ ಕಾಡಾನೆ ಬಂದಿರುವ ಸಾಧ್ಯತೆ ಇದೆ. ಆನೆಯನ್ನು ಓಡಿಸಲು ಪ್ರಯತ್ನಪಟ್ಟಿರುವ ವೀರಭದ್ರಯ್ಯ ಅವರನ್ನು ಅವರಿದ್ದ ಸ್ಥಳದಿಂದ ಅನತಿ ದೂರದಲ್ಲಿ ಆನೆ ತುಳಿದು ಸಾಯಿಸಿದೆ. ತಲೆ ಮೇಲೆ ಕಾಲಿಟ್ಟಿದ್ದರಿಂದ ತಲೆ ನಜ್ಜುಗುಜ್ಜಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಅಕ್ಕೂರು ಠಾಣೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಇತ್ತೀಚೆಗೆ ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿ ಸಹ ಆನೆ ದಾಳಿಗೆ ರೈತರೊಬ್ಬರು ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.