
ಮಾಗಡಿ ಪಟ್ಟಣದ ಹೊಸಪೇಟೆಯ ಮಾರುತಿ ಶಾಲೆ ಮುಂಭಾಗದಲ್ಲಿ ಪ್ರೀತಿ ಹಾಗೂ ಅವರ ಕುಟುಂಬದ ಸದಸ್ಯರು ಧರಣಿ ನಡೆಸಿದರು
ಮಾಗಡಿ: ‘ನನ್ನ ಗಂಡನ ಜತೆ ಬಾಳುವೆ ಮಾಡಲು ಅವಕಾಶ ಕೊಡಿ’ ಎಂದು ಆಗ್ರಹಿಸಿ, ತನ್ನ ಮಾವ ನಡೆಸುತ್ತಿರುವ ಶಿಕ್ಷಣ ಸಂಸ್ಥೆ ಎದುರು ಸೊಸೆ ತನ್ನ ತಂದೆ–ತಾಯಿ ಹಾಗೂ ಸಂಬಂಧಿಕರೊಂದಿಗೆ ಧರಣಿ ನಡೆಸಿದ ಘಟನೆ ಪಟ್ಟಣದ ಹೊಸಪೇಟೆಯಲ್ಲಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಮಾದಿಗೊಂಡನಹಳ್ಳಿ ಗ್ರಾಮದ ನಾಗಣ್ಣ ಮತ್ತು ಜಯಲಕ್ಷ್ಮಿ ದಂಪತಿ ಪುತ್ರಿಯಾದ ಪ್ರೀತಿ, ತನ್ನ ಮಾವ ಮಾರುತಿ ವಿದ್ಯಾಸಂಸ್ಥೆ ಮಾಲೀಕ ಗಂಗರಾಜು ವಿರುದ್ಧ ಧರಣಿ ನಡೆಸಿದವರು. ಅಲ್ಲದೆ ಪತಿ ರೂಪೇಶ್ ಕುಟುಂಬದ ವಿರುದ್ದ ವರದಕ್ಷಿಣೆ ಕಿರುಕುಳದ ಆರೋಪ ಸಹ ಮಾಡಿದ್ದಾರೆ.
ವರ್ಷದ ಹಿಂದೆ ಪ್ರೀತಿ ಅವರು ರೂಪೇಶ್ ಅವರನ್ನು ಮದುವೆಯಾಗಿದ್ದರು. ಅದಾದ ಒಂದೇ ತಿಂಗಳಿಗೆ ಇಡೀ ಕುಟುಂಬ ವರದಕ್ಷಿಣೆ ಕಿರುಕುಳ ನೀಡುತ್ತಿದೆ. ಪತಿಗೆ ನನ್ನ ಜೊತೆ ಸಂಸಾರ ಮಾಡಲು ಅತ್ತೆ–ಮಾವ ಅತ್ತೆ ಬಿಡುತ್ತಿಲ್ಲ. ಹಣ, ಆಸ್ತಿ ಹಾಗೂ ಚಿನ್ನಾಭರಣ ತರುವಂತೆ ಕಿರುಕುಳ ನೀಡುತ್ತಾ, ಹಲ್ಲೆ ಕೂಡ ನಡೆಸಿದ್ದಾರೆ ಎಂದು ಧರಣಿ ನಿರತ ಪ್ರೀತಿ ಆರೋಪಿಸಿದರು.
ಠಾಣೆ ಮೆಟ್ಟಿಲೇರಿದ್ದ ಜಗಳ: ಪತಿ ಕುಟುಂಬದ ಕಿರುಕುಳಕ್ಕೆ ಬೇಸತ್ತು ಒಂದು ತಿಂಗಳ ಹಿಂದೆ ನಾನು ಮನೆಯಿಂದ ಹೊರಬಂದಿದ್ದೇನೆ. ನಂತರ ವಿಷಯವು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಲ್ಲಿ ಇಬ್ಬರೊಂದಿಗೆ ಪೊಲೀಸರು ಮಾತುಕತೆ ನಡೆಸಿ ರಾಜಿ ಮಾಡಿಸಿದ್ದರು. 10 ದಿನದ ನಂತರ ಮತ್ತೆ ನನ್ನ ಗಂಡ ಮನೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಲಾಗಿತ್ತು. ಆದರೆ 25 ದಿನವಾದರೂ ಪತಿ ನನ್ನನ್ನ ಮನೆಗೆ ಕರೆದುಕೊಂಡು ಹೋಗಿಲ್ಲ ಎಂದು ದೂರಿದರು.
ಶಾಲೆ ಮುಂಭಾಗ ಪ್ರೀತಿ ಅವರು ಧರಣಿ ಕುಳಿತ ವಿಷಯವು ಟಿ.ವಿ ಚಾಲನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ, ಶಾಲಾ ಬಳಿಗೆ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಮುಖಂಡರಾದ ಮಾಡಬಾಳ್ ಜಯರಾಂ, ಜಯಮ್ಮ, ಶೈಲಜಾ, ಸೇರಿದಂತೆ ಅನೇಕ ಮುಖಂ
ಡರು ಪ್ರೀತಿ ಅವರ ಮಾವ ಗಂಗರಾಜು ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಲು ಯತ್ನಿಸಿದರು. ಆದರೆ, ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ಶಾಲಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರೀತಿ ಕುಟುಂಬದವರು, ಶಾಲಾವಧಿ ಮುಗಿದ ನಂತರ ಗಂಡನ ಮನೆಗೆ ತೆರಳಿ, ಮನೆ ಮುಂದೆ ಕುಟುಂಬ ಸದಸ್ಯರೊಂದಿಗೆ ಧರಣಿ ಕುಳಿತರು. ಸ್ಥಳಕ್ಕೆ ಬಂದ ಕೆಲವರು ಧರಣಿ ನಿಲ್ಲಿಸುವಂತೆ ಮನವೊಲಿಸಲು ಯತ್ನಿಸಿದರೂ
ಪ್ರಯೋಜನವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.