ರಾಮನಗರ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಭೋವಿ ಜನಾಂಗದ ಯುವಕ ನನ್ನು ಯುವತಿಯ ತಂದೆಯೇಕೊಲೆ ಮಾಡಿದ ಘಟನೆ ಮಾಗಡಿ ತಾಲ್ಲೂಕಿನ ಕನಕೇನಹಳ್ಳಿ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ನೆಲಮಂಗಲ ತಾಲ್ಲೂಕಿನ ಬಸವೇನ ಹಳ್ಳಿ ಗ್ರಾಮದ ಲಕ್ಷ್ಮೀಪತಿ (25) ಕೊಲೆಯಾದ ಯುವಕ.
ಕನಕೇನಹಳ್ಳಿ ಗ್ರಾಮದ ಮುಸ್ಲಿಂ ಯುವತಿ ಮತ್ತು ಲಕ್ಷ್ಮೀಪತಿ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಇದನ್ನು ಸಹಿಸದ ಯುವತಿಯ ತಂದೆ ನಿಜಾಮುದ್ದೀನ್, ಪರಿಚಿತರೊಂದಿಗೆ ಸೇರಿ ಯುವಕನನ್ನು ಕೊಲೆ ಮಾಡಿದ್ದಾನೆ.
ಈ ಸಂಬಂಧ ನಿಜಾಮುದ್ದೀನ್ ಮತ್ತು ಸಿಕಂದರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ರತ್ ಹಾಗೂ ಆಟೊ ಮೊಹಮ್ಮದ್ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮನೆಬಿಟ್ಟು ಹೋಗಿದ್ದ ಜೋಡಿ: ಕಳೆದ ವರ್ಷ ಈ ಜೋಡಿ ಮನೆ ತೊರೆದು ಹೋಗಿತ್ತು. ರಾಜಿ ಬಳಿಕ ಮರಳಿ ಕರೆತರಲಾಗಿತ್ತು. ಮದುವೆ ಮಾತುಕತೆಗೆ ಬರುವಂತೆಯುವತಿಯ ತಂದೆ ಲಕ್ಷ್ಮೀಪತಿ ಹಾಗೂ ಆತನ ಸಹೋದರ ನಟರಾಜ್ನನ್ನು ಮನೆಗೆ ಕರೆದಿದ್ದಾನೆ. ಅಲ್ಲಿ ಮದ್ಯಪಾನ ಮಾಡಿಸಿದ ನಂತರಕುತ್ತಿಗೆಗೆ ಬೆಲ್ಟ್ ಬಿಗಿದು ಲಕ್ಷ್ಮೀಪತಿಯನ್ನು ಹತ್ಯೆ ಮಾಡಿದ್ದಾರೆ.
ಮನೆಗೆ ಮರಳಿದ ನಟರಾಜ್ ತಮ್ಮ ಸಂಬಂಧಿಕರಿಗೆ ಈ ವಿಷಯ ತಿಳಿಸಿದ್ದಾರೆ.
***
ಮಗಳ ಪ್ರೀತಿ ಸಹಿಸದೇ ತಾನೇ ಯುವಕನ ಹತ್ಯೆ ಮಾಡಿದ್ದಾಗಿ ಆಕೆಯ ತಂದೆ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದೇವೆ
- ಎಸ್. ಗಿರೀಶ್, ಎಸ್ಪಿ, ರಾಮನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.