ADVERTISEMENT

ಕುವೆಂಪು ವಿಶ್ವವಿದ್ಯಾಲಯ ವಿದ್ಯಾವಿಷಯಕ ಪರಿಷತ್ ಸಭೆ.89.65 ಕೋಟಿ ವೆಚ್ಚದ ಬಜೆಟ್ ಮಂಡನೆ.

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 5:55 IST
Last Updated 31 ಮಾರ್ಚ್ 2011, 5:55 IST
ಕುವೆಂಪು ವಿಶ್ವವಿದ್ಯಾಲಯ ವಿದ್ಯಾವಿಷಯಕ ಪರಿಷತ್ ಸಭೆ.89.65 ಕೋಟಿ ವೆಚ್ಚದ ಬಜೆಟ್ ಮಂಡನೆ.
ಕುವೆಂಪು ವಿಶ್ವವಿದ್ಯಾಲಯ ವಿದ್ಯಾವಿಷಯಕ ಪರಿಷತ್ ಸಭೆ.89.65 ಕೋಟಿ ವೆಚ್ಚದ ಬಜೆಟ್ ಮಂಡನೆ.   

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ 2011-12ನೇ ಸಾಲಿಗೆ ಸಮತೋಲನ ಬಜೆಟ್ ಮಂಡಿಸಿದ್ದು, ಯೋಜನೆ ಮತ್ತು ಯೋಜನೇತರ ಸೇರಿದಂತೆ ಒಟ್ಟು ` 89.65ಕೋಟಿ  ವೆಚ್ಚ ಅಂದಾಜಿಸಲಾಗಿದೆ.ವಿವಿಯ ಆವರಣದಲ್ಲಿ ಬುಧವಾರ ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಹಣಕಾಸು ಅಧಿಕಾರಿ ಪ್ರೊ.ಕೆ.ಎಸ್. ಅನಂತಮೂರ್ತಿ ಬಜೆಟ್‌ನ ಪ್ರಮುಖಾಂಶಗಳನ್ನು ಮಂಡಿಸಿದರು. 
 

  ` 89.65 ಕೋಟಿಯಲ್ಲಿ ಶೈಕ್ಷಣಿಕ ವೆಚ್ಚಕ್ಕಾಗಿ ` 27.02ಕೋಟಿ, ಆಡಳಿತಾತ್ಮಕ ವೆಚ್ಚಕ್ಕೆ ` 19.47ಕೋಟಿ, ಅಭಿವೃದ್ಧಿ ಕಾಮಗಾರಿಗಳಿಗೆ ` 14.60ಕೋಟಿ ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದ ವೆಚ್ಚಕ್ಕೆ ` 12 ಕೋಟಿ ಅನುದಾನ ಮೀಸಲಿಡಲಾಗಿದೆ.  ಉಳಿದಂತೆ ವಿದ್ಯಾರ್ಥಿ ಬೆಂಬಲ ಸೇವೆಗಳಿಗಾಗಿ ` 2.47ಕೋಟಿ, ಪರೀಕ್ಷಾ ವೆಚ್ಚ ` 60ಲಕ್ಷ, ವಿವಿಯ ರಜತ ಮಹೋತ್ಸವದ ಪೂರ್ವಸಿದ್ಧತೆಗೆ, ಸೌರಶಕ್ತಿ ಮತ್ತು ಪವನ ಶಕ್ತಿ ಬಳಕೆಗೆ, ವಿವಿಯ ಕಚೇರಿ ಯಾಂತ್ರೀಕರಣಕ್ಕೆ ತಲಾ ` 50ಲಕ್ಷ, ಗಣಕೀಕರಣ ಕೇಂದ್ರ ಮತ್ತು ಆವಿಷ್ಕಾರಗಳಿಗೆ ಪೇಟೆಂಟ್ ಪಡೆಯಲು ಹಾಗೂ ಸಮುದಾಯ ಬಾನುಲಿ ಕೇಂದ್ರಕ್ಕೆ ತಲಾ ` 25 ಲಕ್ಷ, ಹೊಸ ಕೋರ್ಸ್‌ಗಳಿಗೆ ` 15ಲಕ್ಷ  ಅನುದಾನ ಕಲ್ಪಿಸಲಾಗಿದೆ.
 

ಇದಕ್ಕಾಗಿ ಯೋಜನೆ ಮತ್ತು ಯೋಜನೇತರ ಅಡಿ ` 89.65ಕೋಟಿ  ನಿರೀಕ್ಷಿಸಲಾಗಿದೆ. ಇದರಲ್ಲಿ ಸರ್ಕಾರದಿಂದ ಮಂಜೂರಾದ ` 2ಕೋಟಿ ಹಾಗೂ ವೇತನ ಅನುದಾನ ` 20ಕೋಟಿ ಒಳಗೊಂಡಿದೆ. ಶಿಕ್ಷಣದ ಜತೆಗೆ ಸಂಶೋಧನೆ ಮತ್ತು ನೌಕರರ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹೆಚ್ಚಿನ ಒತ್ತು ನೀಡಿದ್ದು, ` 3ಕೋಟಿ ಹಂಚಿಕೆ ಮಾಡಿದ್ದು ವಿಶೇಷ ಎಂದು ಈ ಸಂದರ್ಭದಲ್ಲಿ ಕುಲಪತಿ ಪ್ರೊ.ಎಸ್.ಎ. ಬಾರಿ ತಿಳಿಸಿದರು.
 

ADVERTISEMENT

ವಿವಿಗೆ ಈ 2011-12ನೇ ಸಾಲಿಗೆ ಯೋಜನೆ ಮತ್ತು ಯೋಜನೇತರ ಅಡಿ ಸರ್ಕಾರದಿಂದ ` 2ಕೋಟಿ ನಿರೀಕ್ಷಿಸಿದ್ದರೆ, ವೇತನ ಅನುದಾನ ` 20ಕೋಟಿ ಒಳಗೊಂಡಿದೆ ಎಂದು ಹೇಳಿದರು.
2010-11ನೇ ಸಾಲಿಗೆ ವಿವಿಯ ಬಜೆಟ್ ` 69.50ಕೋಟಿ ಬಜೆಟ್ ಮಂಡಿಸಲಾಗಿತ್ತು. ಇದರಲ್ಲಿ ` 18.23ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ, ` 20.31ಕೋಟಿ  ಶೈಕ್ಷಣಿಕ ವೆಚ್ಚ, ` 13.15ಕೋಟಿ ಆಡಳಿತಾತ್ಮಕ ವೆಚ್ಚ, ` 2.38ಕೋಟಿ  ವಿದ್ಯಾರ್ಥಿ ಬೆಂಬಲ ಸೇವೆಗಳಿಗೆ ಹಾಗೂ ಪರೀಕ್ಷಾ ವೆಚ್ಚಕ್ಕೆ ` 5.89ಕೋಟಿ   ಹಾಗೂ ದೂರ ಶಿಕ್ಷಣ ನಿರ್ದೇಶನಾಲಯಕ್ಕೆ ` 9.52ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.   ಸಭೆಯಲ್ಲಿ ಕುಲಸಚಿವ ಪ್ರೊ.ಎಂ. ಕೃಷ್ಣಪ್ಪ ಉಪಸ್ಥಿತರಿದ್ದರು.
 

ಇಂದು 103 ಮನೆ ಉದ್ಘಾಟನೆ

ಶಿವಮೊಗ್ಗ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ನಗರದ ಇಂದಿರಾ ಬಡಾವಣೆ (ಗುಡ್ಡೆಕಲ್) ಕೊಳಚೆ ಪ್ರದೇಶದಲ್ಲಿ ಕೇಂದ್ರ ಪ್ರಾಯೋಜಿತ ಸಮಗ್ರ ವಸತಿ ಮತ್ತು ಕೊಳಚೆ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ನಿರ್ಮಿಸಿರುವ 103 ಮನೆಗಳನ್ನು ಮಾರ್ಚ್ 31ರಂದು ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಫಲಾನುಭವಿಗಳಿಗೆ ಹಸ್ತಾಂತರಿಸುವರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಸತಿ ಸಚಿವ ವಿ. ಸೋಮಣ್ಣ ಉಪಸ್ಥಿತರಿರುವರು.
 

ನಂತರ ಕುವೆಂಪು ರಂಗಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ. ನರಸಿಂಹಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್. ಜ್ಞಾನೇಶ್ವರ್ ಪಾಲ್ಗೊಳ್ಳುವರು.
 

ಇಂದಿನಿಂದ ಉಚಿತ ಯೋಗ ತರಬೇತಿ ಶಿಬಿರ
 

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 31ರಿಂದ ಏ.14ರವರೆಗೆ ನೆಹರು ಕ್ರೀಡಾಂಗಣದಲ್ಲಿ ಯೋಗಪಟು ಅನಿಲ್‌ಕುಮಾರ್ ಎಚ್. ಶೆಟ್ಟರ್ ಮಾರ್ಗದರ್ಶನದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಏರ್ಪಡಿಸಲಾಗಿದೆ.ಅರ್ಜಿಯನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಶಿವಮೊಗ್ಗ ಕಚೇರಿಯಲ್ಲಿ ಪಡೆಯಬಹುದು. ಮಾಹಿತಿಗೆ ದೂ: 223328/ 9886674375 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.