ADVERTISEMENT

ಪೌರಕಾರ್ಮಿಕರಿಗೆ ವಸತಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 5:50 IST
Last Updated 9 ಅಕ್ಟೋಬರ್ 2012, 5:50 IST

ಶಿವಮೊಗ್ಗ: ನಗರದ ಎಲ್ಲಾ ಪೌರಕಾರ್ಮಿಕರಿಗೆ ವಸತಿ ಸೌಕರ್ಯ ಹಾಗೂ ವಾರ್ಷಿಕವಾಗಿ ್ಙ 2 ಸಾವಿರ ಪ್ರೋತ್ಸಾಹಧನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.
ನಗರಸಭೆ ವತಿಯಿಂದ ಸೋಮವಾರ ನಗರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಗರವನ್ನು ಸ್ವಚ್ಛವಾಗಿಡುವ ಕಾಯಕದಲ್ಲಿ ತೊಡಗಿರುವವರಿಗೆ ವಸತಿ ಸೌಕರ್ಯ ಹಾಗೂ ಹಣಕಾಸಿನ ನೆರವು ನೀಡುವುದು ಸರ್ಕಾರದ ಆದ್ಯಕರ್ತವ್ಯವಾಗಿದೆ. ಈಗಾಗಲೇ ವಿವಿಧ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡುವ ಕೆಲಸ ನಗರದಲ್ಲಿ ಆರಂಭವಾಗಿದೆ ಎಂದರು.

ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹಾಗೆಯೇ ದುಶ್ಚಟಕ್ಕೆ ಬಲಿಯಾಗದೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು  ಸಲಹೆ ಮಾಡಿದರು.

ಪುಣ್ಯ ಮಾಡಿದ್ದೆ: `ನಗರದ ಪೌರ ಸನ್ಮಾನ ಸ್ವೀಕರಿಸಲು ಯಾವುದೋ ಜನ್ಮದಲ್ಲಿ ನಾನು ಪುಣ್ಯ ಮಾಡಿದ್ದೆ; ಈ ಸನ್ಮಾನ ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ, ಸ್ಫೂರ್ತಿ-ಪ್ರೇರಣೆ ನೀಡಿದೆ. ಶಿವಮೊಗ್ಗ ನಗರದ ಜನತೆಯ ಋಣ ನನ್ನ ಮೇಲಿದೆ. ಪಕ್ಷ, ಜಾತಿ ಭೇದ ಮರೆತು ಸನ್ಮಾನಿಸಿದ್ದು, ಎಲ್ಲ ಸನ್ಮಾನಗಳಿಕ್ಕಿಂತ ಹೆಚ್ಚಿನದು ಎಂದು ಭಾವಿಸುತ್ತೇನೆ~ ಎಂದು ಈಶ್ವರಪ್ಪ ಭಾವುಕರಾದರು.

 ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸದಸ್ಯ ಲಕ್ಷ್ಮಣ್ ಮಾತನಾಡಿದರು. ಆಶ್ರಯ ಸಮಿತಿ ಸದಸ್ಯ ಅನಂತಶಾಸ್ತ್ರಿ ಉಪಸ್ಥಿತರಿದ್ದರು. ಮೋಹನ್ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಆಯುಕ್ತ ಪಿ.ಜಿ. ರಮೇಶ್ ಸ್ವಾಗತಿಸಿದರು.

ಈಶ್ವರಪ್ಪಗೆ ಕಾಂಗ್ರೆಸ್ಸಿಗರ ಪ್ರಶಂಸೆ-ಕವನ ವಾಚನ!
ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರೂ ಆದ ನಗರಸಭಾ ಸದಸ್ಯ ಎಚ್.ಸಿ. ಯೋಗೀಶ್, ಈಶ್ವರಪ್ಪ ಅವರ ಸಾಧನೆಗಳನ್ನು ತಿಳಿಸಿದರೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯೂ ಆದ ನಗರಸಭಾ ಸದಸ್ಯೆ ವಿಜಯಲಕ್ಷ್ಮೀ ಪಾಟೀಲ್, ಈಶ್ವರಪ್ಪ ಅವರನ್ನು ಪ್ರಶಂಸಿಸಿ ಕವಿತೆ ವಾಚಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.