ಶಿವಮೊಗ್ಗ : ಜಿಲ್ಲಾ ಪಂಚಾಯ್ತಿ ಮುಂಭಾಗದ ಕುವೆಂಪು ರಸ್ತೆಯಲ್ಲಿರುವ ಮರಗಳ ಕಡಿತಲೆಯನ್ನು ಖಂಡಿಸಿ ನೂರಾರು ಪರಿಸರ ಪ್ರೇಮಿಗಳು ಭಾನುವಾರ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕುವೆಂಪು ರಸ್ತೆಯ ಇಕ್ಕೆಲಗಳಲ್ಲಿರುವ ಗಿಡಮರಗಳು ಈ ಭಾಗದ ಸೌಂದರ್ಯವನ್ನು ವೃದ್ಧಿಸುತ್ತಿವೆ.
ನೂರಾರು ಪ್ರಯಾಣಿಕರು ಇಲ್ಲಿನ ಸುಂದರ ವಾತಾವರಣದಿಂದ ನೆಮ್ಮದಿಯಾಗಿ ಈ ರಸ್ತೆಯಲ್ಲಿಯೆ ಪ್ರತಿದಿನ ಸಂಚರಿಸುತ್ತಿದ್ದಾರೆ. ಆದರೆ, ಅಭಿವೃದ್ಧಿಯ ನೆಪದಲ್ಲಿ ಗಟ್ಟಿಯಾದ ಮರಗಳನ್ನು ಕಡಿಯಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಮರಕಡಿಯುವರನ್ನು ತರಾಟೆಗೆ ತೆಗೆದುಕೊಂಡರು.
ವಿಪರೀತ ಬಿಸಿಲು ಮತ್ತು ಬರಗಾಲಕ್ಕೆ ಶಿವಮೊಗ್ಗದ ಪರಿಸರ ದಿನದಿಂದ ದಿನಕ್ಕೆ ಸೊರಗುತ್ತಿದೆ. ಈಗಾಗಲೇ ಶಿವಮೊಗ್ಗದ ಸುತ್ತಮತ್ತ ಹಸಿರು ಕಣ್ಮರೆಯಾಗಿದೆ. ಇಂತಹ ಸಂದರ್ಭದಲ್ಲಿ ಸೌಂದರ್ಯ ವೃದ್ಧಿಸುವ ಬದಲಾಗಿ ಹತ್ತಾರು ವರ್ಷಗಳಿಂದ ನೆರಳು ನೀಡುತ್ತಿರುವ ಗಟ್ಟಿಮುಟ್ಟಾದ ಮರಗಳನ್ನು ಕಡಿಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳ ಮಹಜರು ಮಾಡಿ ಮರಗಳ ಕಡಿತಲೆಗೆ ಒಪ್ಪಿಗೆ ಸೂಚಿಸಿದ ಎಸಿಎಫ್, ಆರ್ಎಫ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಮರ ಗುತ್ತಿಗೆ ಪಡೆದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಬೆಳಿಗ್ಗೆ 9ರಿಂದ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆಯುಂಟಾಯಿತು.
ಪರಿಸರ ಪ್ರೇಮಿಗಳಾದ ಕೆ.ವಿ.ವಸಂತಕುಮಾರ್, ನಾಗರಾಜ್ ಶೆಟ್ಟರ್, ಗಿರೀಶ್, ಮಂಜುನಾಥ್, ಅಶೋಕ್, ಶಿವಮೊಗ್ಗ ನಂದನ್, ತ್ಯಾಗರಾಜ್, ಮಧುಸೂದನ್, ಮೋಹನ್, ಎಚ್.ಎಸ್.ಬಾಲಾಜಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.