ADVERTISEMENT

400 ಕಾರ್ಯಕರ್ತೆಯರ ಬಂಧನ, ಬಿಡುಗಡೆ

ಹಲವು ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 9:04 IST
Last Updated 10 ಜನವರಿ 2014, 9:04 IST

ಹೊಸನಗರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟ ತಾಲ್ಲೂಕು ಅಧ್ಯಕ್ಷೆ ತಾರಮ್ಮ ನೇತೃತ್ವದಲ್ಲಿ ಗುರುವಾರ ರಸ್ತೆ ತಡೆ ನಡೆಸಿತು.
ಈ ಸಂದರ್ಭ ಪ್ರತಿಭಟನೆ ನಡೆಸಿದ 400ಕ್ಕೂ ಹೆಚ್ಚು ಮಹಿಳೆಯರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಪ್ರತಿಭಟನಾ ಸಭೆಯಲ್ಲಿ ಸಂಚಾಲಕ ರವೀಂದ್ರ ಸಾಗರ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರ ಕೇವಲವಾಗಿ ನೋಡುತ್ತಿದೆ. ಗೋವಾ ರಾಜ್ಯದಲ್ಲಿರುವಂತೆ ಕನಿಷ್ಠ ವೇತನ ರೂ 12,500 ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರು ಎಂದು ಪರಿಗಣಿಸಿ ಇಎಸ್‌ಐ ಹಾಗೂ ಪಿಎಫ್ ನೀಡಿ ಸೇವೆಯನ್ನು ಕಾಯಂ ಮಾಡಬೇಕು. ನಿವೃತ್ತ ನೌಕರರಿಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ಐಸಿಡಿಎಸ್‌ ಅನುದಾನದಲ್ಲಿರುವ ಅಂಗನವಾಡಿಗಳನ್ನು ಪುಕ್ಕಟೆಯಾಗಿ ಅನ್ಯ ಸರ್ಕಾರಿ ಸೇವಾ ಕೆಲಸಗಳಿಗೆ ಬಳಸಿಕೊಳ್ಳಬಾರದು. ಕೇಂದ್ರ ಸರ್ಕಾರದ ಆದೇಶದಂತೆ 6 ತಿಂಗಳ ಹೆರಿಗೆ ರಜೆ ಮತ್ತು ಈ ಸಂಬಂಧಿಸಿದ ಎಲ್ಲಾ ಭತ್ಯೆಗಳನ್ನು ನೀಡುವಂತೆ ಅವರು ಕೋರಿದರು.

ಸರ್ಕಾರ ಮಿಷನ್‌ ಮೋಡ್ ಯೋಜನೆ ಕೈಬಿಟ್ಟು ಬೇಡಿಕೆ ಈಡೇರಿಸದಿದ್ದರೆ ಫೆ.22ರಂದು ಬೃಹತ್‌ ಬೆಂಗಳೂರು ಚಲೋ ಚಳವಳಿ ಮ್ಮಿಕೊಳ್ಳಲಾಗುವುದು. ಇದಕ್ಕೆ ಪ್ರತಿಯೊಬ್ಬರೂ ಹಾಜರಾಗುವಂತೆ ಅವರು ಕಾರ್ಯಕರ್ತೆಯರಲ್ಲಿ ಮನವಿ ಮಾಡಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷೆ ಸುಶೀಲಾ ಬಾಯಿ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾವತಿ, ರಿಪ್ಪನ್‌ಪೇಟೆ ಶರಿಫಾಬಿ, ಕೋಡೂರು ಸತ್ಯನಾಗರತ್ನ, ಮೂಕಾಂಬಿಕೆ ಹಾಜರಿದ್ದರು.

ಮ್ಯಾಮ್‌ಕೋಸ್ ನಿಧಿ ಚೆಕ್‌ ವಿತರಣೆ
ಇಲ್ಲಿನ ಮ್ಯಾಮ್‌ಕೋಸ್ ಸದಸ್ಯರಾಗಿದ್ದ ಸುಭದ್ರಮ್ಮ ಅವರ ಮರಣೋತ್ತರ ನಿಧಿಯ ರೂ. 1ಲಕ್ಷ ಮೌಲ್ಯದ ಚೆಕ್‌ ಅನ್ನು ಮೃತರ ಪುತ್ರ ತುಕಾರಾಮ್‌ ಅವರಿಗೆ ನಿರ್ದೇಶಕರಾದ ವಡ್ಡಿನಬೈಲು ಸುಬ್ರಹ್ಮಣ್ಯ ಹಾಗೂ ಹರತಾಳು ಶಶಿಧರ ವಿತರಿಸಿದರು.

ಪ್ರತಿ ವರ್ಷ ಕನಿಷ್ಠ ತಮ್ಮ ಸಂಸ್ಥೆಯಲ್ಲಿ 3 ಕ್ವಿಂಟಲ್‌ ಅಡಿಕೆ ವ್ಯಾಪಾರ ಮಾಡಿದ ಮ್ಯಾಮ್ಕೋಸ್‌ನ ಯಾವುದೇ ಸದಸ್ಯರ ಕುಟುಂಬಕ್ಕೆ ಮರಣೋತ್ತರ ನಿಧಿ ವಿತರಿಸಲಾಗುವುದು ಎಂದು ನಂತರ ಸುದ್ದಿಗಾರರಿಗೆ ತಿಳಿಸಿದರು.

ಅಡಿಕೆ ಬೆಳೆಗಾರ ಹಾಗೂ ಅಡಿಕೆ ಕೂಲಿ ಕಾರ್ಮಿಕರ ಹಿತ ಕಾಯಲು ಜೀವವಿಮೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಒಂದು ಬಾರಿ ರೂ. 2,500, ರೂ. 5 ಸಾವಿರ ಅಥವಾ ರೂ. 10 ಸಾವಿರ ಕಂತು ಪಾವತಿ ಮಾಡಬೇಕು. ಅಪಘಾತ ಸಂಭವಿಸಿದಲ್ಲಿ ಪ್ರೀಮಿಯಂ ಹಣ ಕಟ್ಟಿದ 10 ಪಟ್ಟು ನೀಡಲಾಗುವುದು ಎಂದರು.

ಮ್ಯಾಮ್‌ಕೋಸ್ ಸದಸ್ಯರಿಗೆ ಸೋಲಾರ್ ಮನೆ ವಿದ್ಯುತ್‌ ದೀಪ ಅಳವಡಿಕೆಗೆ ಕಾರ್ಪೊರೇಷನ್ ಬ್ಯಾಂಕ್ ಸಹಕಾರದೊಂದಿಗೆ ಸಾಲ ಹಾಗೂ ಸಬ್ಸಿಡಿ ನೀಡುವ ವ್ಯವಸ್ಥೆ ಮಾಡಲಾಗಿದ್ದು ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.