ಶಿವಮೊಗ್ಗ: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ಎಂಟೂವರೆ ವರ್ಷದ ಬಾಲಕನ ಆಸೆಯಂತೆ ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬುಧವಾರ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಯಿತು.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ತಬ್ರೇಜ್ಖಾನ್ ಹಾಗೂ ನಗ್ಮಾ ದಂಪತಿ ಪುತ್ರ ಅಜಾನ್ಖಾನ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದನು.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಹೂಗುಚ್ಛ ಕೊಟ್ಟು ಧನ್ಯವಾದ ಹೇಳಿದ ಅಜಾನ್ಖಾನ್, ನಂತರ ಇನ್ಸ್ಪೆಕ್ಟರ್ ಆಸನದಲ್ಲಿ ಕುಳಿತು ಸಹಿ ಹಾಕಿದನು. ಇದಕ್ಕೆ ಸ್ವತಃ ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಅಂಜನ್ಕುಮಾರ್ ಸಾಕ್ಷಿಯಾದರು.
ಸ್ವತಃ ಅಂಜನ್ ಕುಮಾರ್ ಮೇಲಾಧಿಕಾರಿಗಳ ಅನುಮತಿ ಮೇರೆ ಬಾಲಕ ಆಜಾನ್ ಖಾನ್ ಕೋರಿಕೆ ಈಡೇರಿಸಿದರು.
ಮೂರು ತಿಂಗಳು ಮಗು ಇರುವಾಗಲೇ ಅಜಾನ್ಖಾನ್ಗೆ ಹೃದಯದಲ್ಲಿ ತೊಂದರೆ ಕಾಣಿಸಿಕೊಂಡಿದೆ. ನಟ ಸುದೀಪ್ ಅವರನ್ನು ನೋಡಬೇಕು ಎಂಬ ಮಗನ ಆಸೆ ಈಡೇರಿಸಿದ್ದ ಪೋಷಕರು, ಈಗ ಎಸ್ಪಿ ಅವರ ಸಹಾಯದಿಂದ ಇನ್ಸ್ಪೆಕ್ಟರ್ ಧಿರಿಸು ಧರಿಸಿ ಕೆಲಸ ಮಾಡುವ ಆಸೆಯನ್ನು ಪೂರೈಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.