
ಆನವಟ್ಟಿ: ಸರ್ಕಾರಿ ಶಾಲೆಗಳಲ್ಲಿ ಶೇ 70ರಷ್ಟು ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಉಳಿದ ಸಮಸ್ಯೆಗಳನ್ನು ಅದಷ್ಟು ಬೇಗ ಸರಿಪಡಿಸಿ, ಎಲ್ಲ ಸರ್ಕಾರಿ ಶಾಲೆಗಳನ್ನು ಉತ್ತಮ ದರ್ಜೆಯ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಆನವಟ್ಟಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ₹50 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿ ಪೂಜೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಸೌರ ಹಾಗೂ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.
ಸದ್ಯದಲ್ಲಿಯೇ ದೊಡ್ಡ ಮೊತ್ತದ ಅನುದಾನ ಶಿಕ್ಷಣ ಇಲಾಖೆಗೆ ಬರಲಿದ್ದು, ನಂತರ ಸರ್ಕಾರಿ ಶಾಲೆಗಳ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಳ್ಳಿಗಳಲ್ಲಿ ಜೆಜೆಎಂ ಅಡಿ ಕುಡಿಯುವ ನೀರಿನ ಪೈಪ್ಲೈನ್ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ಆನವಟ್ಟಿಯಲ್ಲಿ ₹7 ಲಕ್ಷದ ಒಂದು, ₹5 ಲಕ್ಷದ ಎರಡು ಟಿಎಚ್ಒ ಟ್ಯಾಂಕ್ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಶರಾವತಿ ನದಿಯಿಂದ ದೊಡ್ಡ ಪೈಪ್ಗಳ ಕಾಮಗಾರಿ ಶೀಘ್ರವಾಗಿ ಮುಗಿಸಿ ಆನವಟ್ಟಿ, ಸೊರಬ, ಶಿರಾಳಕೊಪ್ಪ ಮುಂತಾದ ಕಡೆ ನದಿಯಿಂದ ಕುಡಿಯುವ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಪ್ರಯಾಂಕ್ ಖರ್ಗೆ ಅವರು 354 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಅಂದಾಜು ₹600 ಕೋಟಿ ಅನುದಾನ ಒದಗಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸೊರಬ, ಆನವಟ್ಟಿ, ಶಿರಾಳಕೊಪ್ಪ ನೂತನ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ₹380 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಮಧು ಮಾಹಿತಿ ನೀಡಿದರು.
ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್, ಮುಖ್ಯಾಧಿಕಾರಿ ಎಲ್. ಶಂಕರ್, ಸದಸ್ಯರಾದ ಅನೀಶ್ ಪಾಟೀಲ್, ಮಹಮ್ಮದ್ ಗೌಸ್ ಮಕಂದರ್, ಕೃಷ್ಣಪ್ಪ ತಲ್ಲೂರು, ಮುಖಂಡರಾದ ಚೌಟಿ ಚಂದ್ರಶೇಖರ್ ಪಾಟೀಲ್, ಜರ್ಮಲೆ ಚಂದ್ರಶೇಖರ್, ಕೆ.ಪಿ ರುದ್ರಗೌಡ ಗಿಣಿವಾಲ, ಸದಾನಂದ ಗೌಡ ಬಿಳಗಲಿ, ಶಿವಲಿಂಗೇಗೌಡ, ಮಧುಕೇಶ್ವರ್ ಪಾಟೀಲ್, ಚಾಂದ್ ಸಾಬ್, ಸುರೇಶ್ ಹಾವಣ್ಣನವರ್, ಗಣಪತಿ ಹುಲ್ತಿಕೊಪ್ಪ, ಎಂ.ಡಿ ಶೇಖರ್, ಅರುಣ ಸಮನವಳ್ಳಿ, ಮಾರುತಿ ಗಿಣಿವಾಲ, ರಮೇಶ್ ಬುಡುಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.