ಶಿವಮೊಗ್ಗ: ನಗರ ಪಾಲಿಕೆ ಕಂದಾಯ ವಿಭಾಗದ ಮೇಲೆ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.
ಕಂದಾಯ ವಿಭಾಗದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅರ್ಜಿಗಳನ್ನು ಹಿರಿತನದ ಆಧಾರಲ್ಲಿ ಪರಿಗಣಿಸುತ್ತಿಲ್ಲ. ಹಣ ಕೊಟ್ಟವರ ಕೆಲಸ ತ್ವರಿತವಾಗಿ ಆಗುತ್ತದೆ. ಪೌತಿಖಾತೆ, ನಿವೇಶಗಳು, ವಾಣಿಜ್ಯ ಆಸ್ತಿಗಳ ಕಂದಾಯ ನಿಗದಿ, ಹೊಸ ಲೇೌಟ್ಗಳಿಗೆ ಅನುಮತಿ, ಕಟ್ಟಡ ಪರವಾನಗಿ ಸೇರಿದಂತೆ ವಿವಿಧ ಕೆಲಸಗಳಿಗೆ ನಿತ್ಯವೂ ಅಲೆಯಬೇಕಿದೆ ಎಂದು ಹಲವರು ಎಸಿಬಿಗೆ ದೂರು ನೀಡಿದ್ದರು.
ಸಾರ್ವಜನಿಕರ ನಿರಂತರ ದೂರುಗಳನ್ನು ಆಧರಿಸಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಎಸಿಬಿ ಅಧಿಕಾರಿಗಳನ್ನು ಒಳಗೊಂಡ 50 ಸಿಬ್ಬಂದಿಯ ತಂಡ ಪಾಲಿಕೆ ಮೇಲೆ ದಾಳಿಸಿ ನಡೆಸಿದೆ. ದಾಖಲೆಗಳನ್ನು ನಿರಂತರವಾಗಿ ಪರಿಶೀಲಿಸಿತು. ಪಾಲಿಕೆಯ 25ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ, 10ಕ್ಕೂ ಹೆಚ್ಚು ಮಧ್ಯರ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು.
ಡಿವೈಎಸ್ಪಿ ಜಯಪ್ರಕಾಶ್, ಜೆ.ಲೋಕೇಶ್, ಇನ್ಸ್ಪೆಕ್ಟರ್ ವಸಂತಕುಮಾರ್ ಮತ್ತಿತರ ಅಧಿಕಾರಿಗಳು ದಾಳಿಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.