ADVERTISEMENT

ಸೊರಬ | ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿ: ಮಹದೇವಪ್ಪ

ಕೃಷಿಕ ಸಮಾಜ ಹಾಗೂ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:08 IST
Last Updated 14 ಡಿಸೆಂಬರ್ 2025, 7:08 IST
ಸೊರಬ ಪಟ್ಟಣದ ಕೃಷಿ ಕಚೇರಿಯಲ್ಲಿ ಕೃಷಿಕ ಸಮಾಜದ ಸದಸ್ಯರ ಹಾಗೂ ಅಧಿಕಾರಿಗಳ ಸಮಾಲೋಚನಾ ಸಭೆ ನಡೆಯಿತು.
ಸೊರಬ ಪಟ್ಟಣದ ಕೃಷಿ ಕಚೇರಿಯಲ್ಲಿ ಕೃಷಿಕ ಸಮಾಜದ ಸದಸ್ಯರ ಹಾಗೂ ಅಧಿಕಾರಿಗಳ ಸಮಾಲೋಚನಾ ಸಭೆ ನಡೆಯಿತು.   

ಸೊರಬ: ‘ಮಲೆನಾಡಿನಲ್ಲಿ ಅಡಿಕೆ ಬೆಳೆ ನಂಬಿಕೊಂಡು ಜೀವನ‌ ನಡೆಸುತ್ತಿರುವ ರೈತರಿಗೆ ಅಡಿಕೆಗೆ ಎಲೆ ಚುಕ್ಕೆ ರೋಗ ವ್ಯಾಪಕವಾಗಿ ಹರಡುತ್ತಿದ್ದು, ರೋಗ ನಿಯಂತ್ರಣಕ್ಕೆ ಕ್ರಮ ವಹಿಸದಿದ್ದರೆ ರೈತರ ಬದುಕು ಮೂರಾಬಟ್ಟೆಯಾಗಿದೆ’ ಎಂದು ಕೃಷಿಕ ಸಮಾಜದ ರಾಜ್ಯ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.

ಪಟ್ಟಣದ ಕೃಷಿ ಕಚೇರಿಯಲ್ಲಿ ಕೃಷಿಕ ಸಮಾಜದ ಸದಸ್ಯರ ಹಾಗೂ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶ ಅಡಿಕೆಗೆ ಕೊಳೆರೋಗ ತಗುಲಿ ಬೆಳೆ ಹಾಳಾಗಿರುವ ಬಗ್ಗೆ ತೋಟಗಾರಿಕೆ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ. ದೀರ್ಘಾವಧಿ ಬೆಳೆಯಾದ ಅಡಿಕೆಗೆ ರೋಗ ತಗುಲಿದರೆ ಸುಮಾರು ಹತ್ತು ವರ್ಷಕ್ಕೂ ಅಧಿಕ ಕಾಲ ವ್ಯಯ ಮಾಡಿದ ಬಂಡವಾಳ ನಷ್ಟದ ಜೊತೆಗೆ ರೈತನ ಶ್ರಮವೂ ವ್ಯರ್ಥವಾಗುತ್ತದೆ. ಅಲ್ಪಾವಧಿ ಬೆಳೆ ರೋಗಕ್ಕೆ ತುತ್ತಾದರೆ ಮತ್ತೊಂದು ಬೆಳೆ ಬೆಳೆಯಲು ಅವಕಾಶವಿದೆ. ಆದರೆ, ಅಡಿಕೆಗೆ ಉಂಟಾಗುವ ನಷ್ಟದಿಂದ ಆರ್ಥಿಕವಾಗಿ ದಿವಾಳಿಯಾಗುವ ರೈತರ ಹಿತ ಕಾಪಾಡಲು ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ದೇಶದ ಇತಿಹಾಸದಲ್ಲಿ ವಾಣಿಜ್ಯ ಬೆಳೆಗಳಿಗೆ ಬೆಳೆ ಪರಿಹಾರ ಮೊದಲು ನೀಡಿರುವುದು ಕಾಂಗ್ರೆಸ್ ಸರ್ಕಾರ. ಈ ವರ್ಷ ಮುಖ್ಯಮಂತ್ರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಬಜೆಟ್‌ನಲ್ಲಿ ₹ 60 ಕೋಟಿ ಘೋಷಣೆ ಮಾಡಲಾಗಿದೆ’ ಎಂದರು.

‘ರಾಷ್ಟ್ರ ಮಟ್ಟದ ಕೃಷಿ‌ ತಜ್ಞ ಹಾಗೂ ಅಧಿಕಾರಿಗಳನ್ನು ಕರೆಯಿಸಿ ಅಡಿಕೆಗೆ ತಗುಲಿರುವ ಎಲೆ ಚುಕ್ಕೆ ರೋಗಕ್ಕೆ ತುರ್ತಾಗಿ ಸಂಶೋಧನೆ ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿಕ ಸಮಾಜದೊಂದಿಗೆ ನಿಯೋಗ‌‌ ಕೊಂಡೊಯ್ಯಲಾಗುವುದು. ಕೃಷಿಕ‌ ಸಮಾಜ ಯೋಧರ ರೀತಿಯಲ್ಲಿ ಕೆಲಸ‌ ಮಾಡಲಿದೆ’ ಎಂದು ಹೇಳಿದರು.

‘ನಗರದ ಮಹದೇವಪ್ಪ ಅವರು ಮುಖ್ಯಮಂತ್ರಿ ಜೊತೆಗೆ ‌ಉತ್ತಮ ಬಾಂಧವ್ಯ ಹೊಂದಿದ್ದು, ಕೃಷಿಕ ಸಮಾಜದ ರಾಜ್ಯ ಅಧ್ಯಕ್ಷರಾಗಿರುವುದು ಸಂತೋಷ ತಂದಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಶಕ್ತಿ ಅವರಿಗಿದೆ’ ಎಂದು ಕಾಂಗ್ರೆಸ್ ಮುಖಂಡ‌ ತಬಲಿ ಬಂಗಾರಪ್ಪ ತಿಳಿಸಿದರು.

ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಸುರೇಶಗೌಡ, ಸದಸ್ಯರಾದ ಮಂಜುನಾಥ್, ಶಶಿಕಾಂತಗೌಡ ಬೆನ್ನೂರು, ದಯಾನಂದಗೌಡ, ಉಮೇಶ್ ಪಾಟೀಲ್, ರೈತ ಹೋರಾಟಗಾರ ಬಸವರಾಜಪ್ಪ, ಮಲ್ಲಿಕಾರ್ಜುನಗೌಡ ಹೆಗ್ಗೋಡು, ಮಲ್ಲಿಕಾರ್ಜುನ ಗುತ್ತೇರ್, ಪ್ರಭಾವತಿ ಚಂದ್ರಪ್ಪ, ಉಮೇಶ್ ಉಡುಗಣಿ, ವಿಜಯೇಂದ್ರ ತಲಗುಂದ, ಕಾಂಗ್ರೆಸ್ ಬ್ಲಾಕ್ ಕಿಸಾನ್ ಸಮಿತಿ ಅಧ್ಯಕ್ಷ ರೇವಣಪ್ಪ ಟಿ.ಜಿ.ಕೊಪ್ಪ, ತೋಟಗಾರಿಕೆ ಅಧಿಕಾರಿಗಳಾದ‌ ಮಂಜುನಾಥ್, ಸಂಜೀವ್ ಸೇರಿದಂತೆ ಕೃಷಿ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.