ADVERTISEMENT

ಬಾಬರಿ ಮಸೀದಿ ತೀರ್ಪು: ಸ್ವಾಗತ, ಪ್ರತಿಭಟನೆ

ಪ್ರಜಾಪ್ರಭುತ್ವದ ದೃಷ್ಟಿಕೋನ ಕೆಲವರಿಗೆ ಅರ್ಥವಾಗುವುದಿಲ್ಲ: ವಿಧಾನ ಪರಿಷತ್ ಮಾಜಿ ಸಭಾಪತಿ ಶಂಕರಮೂರ್ತಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:48 IST
Last Updated 1 ಅಕ್ಟೋಬರ್ 2020, 8:48 IST
ಶಿವಮೊಗ್ಗ ಬಿಜೆಪಿ ಕಚೇರಿ ಮುಂದೆ ಬುಧವಾರ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು (ಎಡಚಿತ್ರ). ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆ ಮಾಡಿದ ಕೋರ್ಟ್ ತೀರ್ಪು ಖಂಡಿಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಬಿಜೆಪಿ ಕಚೇರಿ ಮುಂದೆ ಬುಧವಾರ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು (ಎಡಚಿತ್ರ). ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆ ಮಾಡಿದ ಕೋರ್ಟ್ ತೀರ್ಪು ಖಂಡಿಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ‘ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನಿರೀಕ್ಷಿಸಿದ್ದೆ. ತುಂಬಾ ಸಂತೋಷವಾಗಿದೆ. ಇಡೀ ದೇಶವೇ ಸಂಭ್ರಮದಲ್ಲಿದೆ. ಇದು ಸ್ವಾಗತಾರ್ಹ ತೀರ್ಪು’ ಎಂದು ವಿಧಾನ ಪರಿಷತ್ ಮಾಜಿಸಭಾಪತಿಡಿ.ಎಚ್.ಶಂಕರಮೂರ್ತಿ ಹೇಳಿದರು.

ಸುದ್ದಿಗಾರರ ಜತೆ ಬುಧವಾರ ಅವರು ಮಾತನಾಡಿದರು.

ಸಿಬಿಐವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಬಾಬರಿ ಮಸೀದಿ ಧ್ವಂಸ ಆರೋಪಕ್ಕೆ ಒಳಗಾಗಿದ್ದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸೇರಿ 32 ಜನರನ್ನು ನಿರ್ದೋಷಿಗಳು ಎಂದು ಹೇಳಿದೆ. ಅಂದು ಈ ಎಲ್ಲ ನಾಯಕರು ವೇದಿಕೆ ಮೇಲಿದ್ದರು. ಆದರೆ, ಕಟ್ಟಡ ಬಿದ್ದಿದ್ದು ಬೇರೆ ಭಾಗದಲ್ಲಿ. ಈ ಅಂಶವನ್ನು ನ್ಯಾಯಾಲಯ ಗುರುತಿಸಿದೆ ಎಂದರು.

ADVERTISEMENT

ಅಕ್ರಮ ಕಟ್ಟಡವೇ ಆಗಲಿಕೆಡವಿದ್ದು ಸರಿಯಲ್ಲ. ಪ್ರಭುತ್ವದ ನಿರ್ಣಯ ತೆಗೆದುಕೊಂಡೇ ಕೆಡವಬೇಕಿತ್ತು ಎನ್ನುವವರು ದ್ವಂದ್ವದಲ್ಲಿ ಇರುತ್ತಾರೆ. ಯಾವ ಪ್ರಜಾಪ್ರಭುತ್ವದ ದೃಷ್ಟಿಕೋನಗಳೂಅವರಿಗೆ ಅರ್ಥ
ವಾಗುವುದಿಲ್ಲ ಎಂದು ತಿರುಗೇಟು ನೀಡಿದರು.

‘ನಾನು ಎರಡು ಬಾರಿ ಕರಸೇವಕನಾಗಿ ಅಯೋಧ್ಯೆಗೆ ಹೋಗಿದ್ದೆ. ಒಮ್ಮೆ ಬಂಧನವೂ ಆಗಿತ್ತು. ಕಾಡಿನಲ್ಲಿ ಬಿಟ್ಟಿದ್ದರು’ ಎಂದು ಆ ದಿನಗಳನ್ನು ನೆನಪಿಸಿಕೊಂಡರು.

ಕೊನೆಗೂ ಗುಲಾಮಗಿರಿ ಸಂಕೇತವಾಗಿದ್ದ ಅಯೋಧ್ಯೆ ಅದರಿಂದ ಹೊರಬಂದಿರುವುದು ಸ್ಪಷ್ಟವಾಗಿದೆ. ಈಗಾಗಲೇ ರಾಮಮಂದಿರ ನಿರ್ಮಾಣವಾಗುತ್ತಿದೆ. ಭಾರತೀಯರ ಭಾವನೆಗಳಿಗೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗದು.ಕಾಶಿ ಮತ್ತು ಮಥುರಾದಲ್ಲಿಯೂ ಇಂತಹುದೇ ಪರಿಸ್ಥಿತಿ ಇದೆ. ಭವಿಷ್ಯದಲ್ಲಿ ಈ ಪ್ರದೇಶಗಳೂ ಗುಲಾಮಗಿರಿಯಿಂದ ಹೊರಬರುತ್ತವೆಎಂಬ ನಂಬಿಕೆ ಇದೆ ಎಂದರು.

ಬಿಜೆಪಿ ವಿಜಯೋತ್ಸವ:ಬಿಜೆಪಿ ನಗರ ಘಟಕ, ಯುವ ಮೋರ್ಚಾ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಮುಖಂಡರಾದ ಎಸ್.ದತ್ತಾತ್ರಿ, ನಗರಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಳ್ಳೆಕೆರೆ, ಯುವ ಮೋರ್ಚಾದ ದರ್ಶನ್, ಮಂಜುನಾಥ್, ಜಗನ್ನಾಥ್, ದೀನದಯಾಳ್, ಕೆ.ವಿ.ಅಣ್ಣಪ್ಪ, ಬಾಲು, ಜಾದವ್, ರಾಮುಇದ್ದರು.

ತೀರ್ಪು ಖಂಡಿಸಿ ಪ್ರತಿಭಟನೆ:ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆ ಮಾಡಿದ ಕೋರ್ಟ್ ತೀರ್ಪು ಖಂಡಿಸಿ ಎಸ್‌ಡಿಪಿಐ ಜಿಲ್ಲಾ ಘಟಕದಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಆರೋಪಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿದಾವೆ ಹೂಡುವುದಾಗಿ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.