ಶಿವಮೊಗ್ಗ: ನಗರದಲ್ಲಿ ನಿರ್ಮಾಣವಾಗಿರುವ ಶ್ರೀ ಬೀರಲಿಂಗೇಶ್ವರ ದೇವಾಲಯ ಮುಂದಿನ ದಿನಗಳಲ್ಲಿ ಇದೊಂದು ಪುಣ್ಯ ಕ್ಷೇತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಲ್ಲಿನ ಕನಕನಗರ ಬಡಾವಣೆಯಲ್ಲಿ ನಿರ್ಮಿಸಿರುವ ಶ್ರೀ ಬೀರಲಿಂಗೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಪ್ರಚಾರ ಬಯಸದೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಜಾಗದಲ್ಲಿ ಪ್ರವಾಸಿ ತಾಣದಂತೆ ದೇವಾಲಯವನ್ನು ನಿರ್ಮಿಸಿರುವ ಯುವ ಸಮೂಹದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದ ಎಲ್ಲ ಯುವಕರೂ ಪಕ್ಷಭೇದ ಮರೆತುಇಲ್ಲಿ ಸೇರಿದ್ದಾರೆ. ಬೀರಪ್ಪನ ನೆಪದಲ್ಲಿ ಸಂಘಟನೆಯಾಗಿದೆ. ಸಮುದಾಯ ಬಲಿಷ್ಠವಾಗಿ ಸಂಘಟನೆಯಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಅರ್ಚಕನಿಗೆ ದೇವರು ಒಲಿಯಲಿಲ್ಲ: ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ‘ಶಿವಮೊಗ್ಗದಲ್ಲಿ ಅದ್ಭುತ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ದೇವರನ್ನು ನಿತ್ಯ ಪೂಜಿಸುವ ಅರ್ಚಕನಿಗೆ ದೇವರು ಒಲಿದ ನಿದರ್ಶನ ತೀರಾ ಕಡಿಮೆ. ಭಕ್ತಿಯಿಂದ ನಮಿಸಿದ ಭಕ್ತನಿಗೆ ದೇವರು ಸುಲಭವಾಗಿ ಒಲಿಯುತ್ತಾನೆ. ಭಕ್ತ ಹೇಗಿರಬೇಕು ಎನ್ನುವುದರ ಸಂಕೇತವಾಗಿ ದೇವಾಲಯದಲ್ಲಿ ಕನಕನನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯವನ್ನು ಎಷ್ಟೇ ದುಡ್ಡಿದ್ದರೂ ಒಬ್ಬರೇ ನಿರ್ಮಾಣ ಮಾಡಬಾರದು. ಸಮಾಜದ ಎಲ್ಲರೂ ಒಗ್ಗೂಡಿದರೆ ಸುಂದರ ದೇವಾಲಯ ನಿರ್ಮಾಣವಾಗಲಿದೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ’ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ‘ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ಮುಂದೆಯೂ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ರೂಪಿಸಿಕೊಂಡು ಹೋಗಬೇಕು’ ಎಂದು ಕಿವಿಮಾತು ಹೇಳಿದರು.
ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿ, ‘ಕೊರೊನಾ ಭೀತಿ ದೂರವಾದ ನಂತರ ಇಂತಹುದೊಂದು ದೇವಾಲಯ ಲೋಕಾರ್ಪಣೆಗೊಳ್ಳುತ್ತಿದೆ. ಎಲ್ಲರೂ ಜಾತ್ಯತೀತವಾಗಿ ಭಗವಂತನನ್ನು ಆರಾಧಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ. ಶ್ರೀಕಾಂತ್, ಕೆ.ಇ. ಕಾಂತೇಶ್, ಕೆ.ಜಿ. ಕುಮಾರಸ್ವಾಮಿ, ಪಿ. ಮೈಲಾರಪ್ಪ, ನವುಲೆ ಈಶ್ವರಪ್ಪ, ಕೆ. ರಂಗನಾಥ್, ಸೌಮ್ಯ ಪ್ರಶಾಂತ್, ಎಂ. ಶರತ್, ಸಿ.ಎಚ್. ಮಾಲತೇಶ್, ಡಿ. ಸೋಮಸುಂದರ್, ರೇಖಾ ರಂಗನಾಥ್, ರಾಹುಲ್ ಪಿ. ಬಿದರೆ, ನಾಗರಾಜ್ ಕಂಕಾರಿ, ಕುಮಾರ್, ಎಚ್. ಫಾಲಾಕ್ಷಿ, ರಾಮಕೃಷ್ಣ ಮೂಡ್ಲಿ, ಬೊಮ್ಮನಕಟ್ಟೆ ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.