
ಶಿವಮೊಗ್ಗ: ಕೇವಲ ಕೃಷಿ ಬೆಳೆಗಳಿಂದ ರೈತ ಕೋಟ್ಯಾಧಿಪತಿ ಆಗಲಾರರು. ತೋಟಗಾರಿಕೆ ಬೆಳೆಗಳು ಆರ್ಥಿಕತೆಗೆ ಹೆಚ್ಚಿನ ಉತ್ತೇಜನ ನೀಡುತ್ತವೆ. ಹೊಸ ಬೆಳೆಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿದುಕೊಂಡು, ತಮ್ಮಲ್ಲಿರುವ ಸ್ವಾಭಾವಿಕ ಮೂಲಗಳನ್ನು ಬಳಸಿಕೊಂಡು ಮಿಶ್ರ ಬೆಳೆಗಳನ್ನು ಬೆಳೆದು ರೈತರು ಲಾಭ ಪಡೆಯಬಹುದು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರು ಮತ್ತು ಕುಲಸಚಿವರಾದಬಿ. ಹೇಮ್ಲಾನಾಯ್ಕ ತಿಳಿಸಿದರು.
ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ ಕುರಿತು ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಡಿಕೆ, ಕರಿಮೆಣಸು, ಸಾಂಬಾರು ಪದಾರ್ಥಗಳು, ಟೀ, ರಬ್ಬರ್ ನಂತಹ ತೋಟಗಾರಿಕೆ ಬೆಳೆಯಿಂದ ಆರ್ಥಿಕತೆ ಸುಧಾರಣೆ ಸಾಧ್ಯ. ನಮ್ಮ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಶೇ.70 ರಷ್ಟು ತೋಟಗಾರಿಕೆ ಬೆಳೆಗಳಿದ್ದರೆ ಶೇ. 12 ರಷ್ಟು ಕೃಷಿ ಬೆಳೆ ಮತ್ತು ಉಳಿದದ್ದು ಅರಣ್ಯ ಬೆಳೆ ಇದೆ. ಅಡಿಕೆಗೆ ಈಗಾಗಲೇ ಸಾಕಷ್ಟು ರೋಗಗಳು ಬರುತ್ತಿವೆ. ಈಗ ಅಡಿಕೆಗೆ ಉತ್ತಮ ಬೆಲೆ ಇದೆ. ಆದರೆ ಮುಂದಿನ ದಿನಗಳಲ್ಲಿ ರೈತರ ಕೈ ಹಿಡಿಯಲು ಪರ್ಯಾಯವಾದ ಮಿಶ್ರಬೆಳೆಗಳನ್ನು ಬೆಳೆಯಬೇಕು ಎಂದು ಹೇಳಿದರು.
ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ, ಡ್ರ್ಯಾಗನ್ ಫ್ರೂಟ್, ಮ್ಯಾಂಗೋಸ್ಟಿನ್, ಕೊಕೊ , ರಂಬುಟನ್ಗಳಂತಹ ಬೆಳೆ ಬೆಳೆಯಲು ಅವಕಾಶವಿದ್ದು, ಇದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವುದು ಸಹ ಮುಖ್ಯವಾಗುತ್ತದೆ. ನಮ್ಮಲ್ಲಿ ಅನೇಕ ಪ್ರಗತಿಪರ ರೈತರಿದ್ದು, ವೈಜ್ಞಾನಿಕವಾಗಿ ಮಿಶ್ರಬೆಳೆಯ ಬಗ್ಗೆ ತಿಳಿದು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಜಾಯಿಕಾಯಿ ಒಂದು ಸಾಂಬಾರು ಬೆಳೆಯಾಗಿದ್ದು, ಔಷಧೀಯ ಗುಣವಿರುವ ಕಾರಣ ಉತ್ತಮ ಬೇಡಿಕೆಯೂ ಇದೆ. ಘಮಘಮಿಸುವ ಎಣ್ಣೆಯನ್ನು ತೆಗೆಯಬಹುದು. ಔಷಧೀಯ ಗುಣಗಳಿರುವ ಕಾರಣ ಫಾರ್ಮಾಸಿಟಿಕಲ್ ಉದ್ದಿಮೆ ಹಾಗೂ ಆಯುರ್ವೇದದಲ್ಲಿಯೂ ಇದಕ್ಕೆ ಬೇಡಿಕೆ ಇದೆ. ಇದು ಜೀರ್ಣಕ್ರಿಯೆ ಶಕ್ತಿ ಹೆಚ್ಚಿಸುತ್ತದೆ. ಮೆದುಳನ್ನು ಚುರುಕುಗೊಳಿಸುತ್ತದೆ. ಈಗಾಗಲೇ ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭಾರತ ಸಾಂಬಾರು ಪದಾರ್ಥಗಳ ಶ್ರೀಮಂತ ದೇಶ. ಪ್ರಸ್ತುತ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಡಿಕೆಯೊಂದಿಗೆ ಪೂರಕ ಬೆಳೆ ಬಗ್ಗೆಯೂ ಚಿಂತಿಸಬೇಕಿದೆ. ಯಾವುದೇ ರೀತಿಯ ಆರ್ಥಿಕ ನಷ್ಟವಾಗದಂತೆ ಮಿಶ್ರಬೆಳೆಗೆ ಒತ್ತು ನೀಡಿ, ಆರ್ಥಿಕತೆ ಸುಧಾರಣೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಹುಬ್ಬಳ್ಳಿಯ ಜಿಲ್ಲಾ ಘಟಕದ ಪ್ರಧಾನ ವ್ಯವಸ್ಥಾಪಕರಾದ ರಾಮಚಂದ್ರ ಕೆ. ಮಡಿವಾಳ ತಿಳಿಸಿದರು.
ಬೆಳೆಗಳಿಗೆ ರೋಗಗಳು ಎದುರಾದಾಗ ಆ ನಷ್ಟದಿಂದ ಪಾರಾಗಲು ಅಡಿಕೆಯೊಂದಿಗೆ ಮಿಶ್ರ ಬೆಳೆಗಳನ್ನು ಬೆಳೆಯುವ ಬಗ್ಗೆ ಮಾಹಿತಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ನಾಗರಾಜಪ್ಪ ಅಡಿವಪ್ಪರ್ ಹೇಳಿದರು.
ಕಾಯಕ್ರಮದಲ್ಲಿ ಅಡಿಕೆಯಲ್ಲಿ ಲಾಭದಾಯಕ ಮಿಶ್ರಬೆಳೆಯಾಗಿ ಜಾಯಿಕಾಯಿ ಕುರಿತಾದ ಮಡಿಕೆ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಿಕಾಂತ ಬೊಮ್ಮಣ್ಣನವರ, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎಚ್.ಡಿ.ದೇವಿಕುಮಾರ್, ಶಶಾಂಕ್, ಸಂಶೋಧನಾ ನಿರ್ದೇಶಕ ದುಷ್ಯಂತ್ ಕುಮಾರ್, ಕಾಲೇಜಿನ ಡೀನ್ ಡಿ.ತಿಪ್ಪೇಶ್, ಸಹ ಸಂಶೋಧನಾ ನಿರ್ದೇಶಕ ಪ್ರದೀಪ್, ಹಿರಿಯ ವಿಜ್ಞಾನಿ ಪಿ.ಸುನಿಲ್, ಹಳ್ಳಿಕೆರೆ ಜಿಲ್ಲಾ ಘಟಕದ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಮಮತಾ ಇದ್ದರು.
‘ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಜ್ಞಾನ ಬೇಕು’
ರೈತ ಕೃಷಿಕನಾಗಬೇಕು ವಿಜ್ಞಾನಿಯಾಗಬೇಕು ಜೊತೆಗೆ ವ್ಯಾಪಾರಿಯೂ ಆಗಬೇಕು. ಆಗ ಮಾತ್ರ ಮಾತ್ರ ಲಾಭ ಸಿಗಲು ಸಾಧ್ಯ. ಉಪ ಕಸುಬುಗಳನ್ನು ಮಾಡಬೇಕು ಹಾಗೂ ವ್ಯವಸಾಯ ಉತ್ಪನ್ನ ಸಂಘಗಳ ಸಂಪರ್ಕದಲ್ಲಿರಬೇಕು. ಅವರು ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಳ್ಳುವ ಮಟ್ಟಿಗೆ ರೈತ ಮುಂದದಾಗ ಮಾತ್ರ ಹಣದಲ್ಲಿ ಶ್ರೀಮಂತನಾಗಲು ಸಾಧ್ಯ. ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿಯನ್ನು ವೈಜ್ಞಾನಿಕವಾಗಿ ಬೆಳೆಯುವ ಕುರಿತು ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ರೈತರಿಗೆ ಕೂಲಂಕಷವಾಗಿ ಪರಿಚಯ ಮಾಡಿಕೊಡಬೇಕು. ರೈತರು ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಕೃಷಿ ಮಹಾವಿದ್ಯಾಲಯದ ಕುಲಸಚಿವ ಬಿ. ಹೇಮ್ಲಾನಾಯ್ಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.