ಹೊಸನಗರ: ಮಾನವನ ಹಸ್ತಕ್ಷೇಪದಿಂದ ಜೀವವೈವಿಧ್ಯ ಅಪಾಯದಂಚಿನಲ್ಲಿದೆ. ಜೀವ ವೈವಿಧ್ಯ ರಕ್ಷಿಸುವ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಹೇಳಿದರು.
ತಾಲ್ಲೂಕಿನ ಕಾರಣಗಿರಿ ಸಿದ್ಧಿವಿನಾಯಕ ಸಭಾ ಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಕಾರಣಗಿರಿ ಮತ್ತು ಪರಿಸರ ಜಾಗೃತಿ ವೇದಿಕೆ ಆಶ್ರಯದಲ್ಲಿ ನಡೆದ ಜೀವವೈವಿಧ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸುತ್ತಲೂ ಹಚ್ಚ ಹಸಿರ ಪರಿಸರ, ಲೆಕ್ಕವಿಲ್ಲದಷ್ಟು ಜೀವ ರಾಶಿಗಳು, ಹಳ್ಳಕೊಳ್ಳಗಳು ಹೀಗೆ ಸುಂದರವಾದ ಪ್ರಕೃತಿಗೆ ಕಾರಣವಾಗಿರುವ ಅಂಶಗಳು ಒಂದೆರಡಲ್ಲ. ಆದರೆ, ಮನುಷ್ಯನ ಅಭಿವೃದ್ಧಿ ಚಟುವಟಿಕೆಗಳು ಜೀವವೈವಿಧ್ಯಗಳ ನಾಶಕ್ಕೆ ಕಾರಣವಾಗಿವೆ. ಕಾಡುಗಳ ನಾಶ, ಹವಾಮಾನ ಬದಲಾವಣೆ, ಅರಣ್ಯಗಳಲ್ಲಿ ವಾಹನ ಸಂಚಾರ, ಪ್ರಾಣಿ ಬೇಟೆ ಸೇರಿದಂತೆ ಇನ್ನಿತ್ತರ ಅತಿಕ್ರಮಣಗಳಿಂದ ಜೀವವೈವಿಧ್ಯ ಸಂಪತ್ತಿಗೆ ಧಕ್ಕೆ ಬಂದಿದೆ. ಯುವಜನತೆ ಪರಿಸರ ಕುರಿತು ಆಸಕ್ತಿ ತೋರದಿದ್ದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಕೆ ನೀಡಿದರು.
ಇರುವುದೊಂದೇ ಭೂಮಿ. ಈ ಭೂಮಿಯಲ್ಲಿ ಮಾನವನ ಜೊತೆ ಜೀವಿಗಳಿಗೂ ಬದುಕುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾವು ಜೀವವೈವಿಧ್ಯತೆಯನ್ನು ಉಳಿಸುವ ಮತ್ತು ಸಂರಕ್ಷಿಸುವ ಕಾರ್ಯ ಮಾಡಬೇಕಾಗಿದೆ ಎಂದು ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಹೇಳಿದರು.
ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ.ಎಸ್. ನಳಿನಚಂದ್ರ, ಗ್ರಾಮ ಪಂಚಾಯತಿ ಸದಸ್ಯ ಹನಿಯ ಗುರುಮೂರ್ತಿ, ಯಕ್ಷಗಾನ ಕಲಾವಿದ ಗಣಪತಿ ಹೆಗಡೆ ಪುರಪ್ಪೆಮನೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.