
ಸಾಗರ: ಕರ್ನಾಟಕ ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ಹಲವು ಸವಲತ್ತುಗಳನ್ನು ಬ್ರಾಹ್ಮಣ ಸಮುದಾಯಕ್ಕೆ ಕಲ್ಪಿಸಿದ್ದು ಇದರ ಸದುಪಯೋಗ ಪಡೆಯಬೇಕಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಜಿಲ್ಲಾ ನಿರ್ದೇಶಕ ಪಿ.ಎಂ.ಮಾಲತೇಶ್ ಹೇಳಿದರು.
ಇಲ್ಲಿನ ಅಜಿತ್ ಸಭಾಭವನದಲ್ಲಿ ಶನಿವಾರ ನಡೆದ ಹವ್ಯಕ ಆತ್ಮಬಂಧು ಸ್ವಸಹಾಯ ಒಕ್ಕೂಟದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ಕೊರತೆಯಿಂದ ಅರ್ಹ ಫಲಾನುಭವಿಗಳು ಬ್ರಾಹ್ಮಣ ಅಭಿವೃದ್ಧಿ ನಿಗಮದ ಸೌಲಭ್ಯಗಳಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿ ಎಂದರು.
ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು, ನೌಕರರ ಮಕ್ಕಳ ಶಿಕ್ಷಣಕ್ಕೆ ನಿಗಮದಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ವಿಪ್ರ ಸಮುದಾಯದ ಯುವ ಉದ್ಯಮಿಗಳಿಗೆ ನೇರ ಸಾಲ ಯೋಜನೆಯಡಿ ಉದ್ದಿಮೆ ಆರಂಭಿಸಲು ₹2 ಲಕ್ಷ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ರೇಷ್ಮಾ ರಘುಪತಿ, ವೀಣಾ ಪ್ರಸನ್ನ, ಕೆ.ಎಸ್.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷೆ ಮೈತ್ರಿ ಪಾಟೀಲ್, ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್, ಸಾಮಾಜಿಕ ಕಾರ್ಯಕರ್ತ ಮ.ಸ.ನಂಜುಂಡಸ್ವಾಮಿ, ರೋಹಿಣಿ ಶರ್ಮ, ಬಿ.ವಿ.ಮಹಾಬಲಗಿರಿ, ಎಂ.ಎಲ್.ಹಿರಿಯಣ್ಣ, ನಾಗೇಶ್ ರಾವ್, ಬಿ.ಕೆ.ನಾರಾಯಣ ರಾವ್ ಇದ್ದರು.
ಹವ್ಯಕ ಆತ್ಮಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಗಿರಿಜಾ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಗೀತಾ ಕೃಷ್ಣಮೂರ್ತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶುಭಾ ನಾಗರಾಜ್ ಸ್ವಾಗತಿಸಿದರು. ಬಿ.ಎಲ್.ದಯಾನಂದ ವಂದಿಸಿದರು. ನಿರ್ಮಲಾ ಕೃಷ್ಣಮೂರ್ತಿ ನಿರೂಪಿಸಿದರು.