ADVERTISEMENT

ಕೇಂದ್ರ ಬಜೆಟ್|ಗ್ರಾಮೀಣ ಅಭಿವೃದ್ಧಿಗೆ ಪೂರಕ: ಶಿವಮೊಗ್ಗ ಜಿಲ್ಲೆಯ ಹಲವರಿಂದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 3:20 IST
Last Updated 2 ಫೆಬ್ರುವರಿ 2026, 3:20 IST
ಕೆ.ಆರ್.ರಾಜು
ಕೆ.ಆರ್.ರಾಜು   

ಕೈಗಾರಿಕೆ ಆದ್ಯತೆ, ತೆರಿಗೆ ನಿಯಮ ಸರಳ

ಕೇಂದ್ರ ಬಜೆಟ್‌ನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ) ಬೆಳವಣಿಗೆಗೆ ಪೂರಕವಾದ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ಸಾರ್ವಜನಿಕ ಬಂಡವಾಳ ವೆಚ್ಚ ₹12.2 ಲಕ್ಷ ಕೋಟಿಗೆ ಹೆಚ್ಚಳ ಮಾಡಲಾಗಿದೆ. ₹40,000 ಕೋಟಿ ವೆಚ್ಚದಲ್ಲಿ ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದಾಯ ತೆರಿಗೆಯಲ್ಲಿ ಹೊಸ ಕಾನೂನು ಪರಿಚಯ, ತೆರಿಗೆ ನಿಯಮಗಳ ಸರಳೀಕರಣ, ಟ್ಯಾಕ್ಸ್ ಕಟ್ಟಲು ಸಮಯಾವಕಾಶ, ಐಟಿಆರ್ ಫಾರ್ಮ್‌ಗಳ ಸರಳೀಕರಣ ಘೋಷಣೆ, ಹೊಸ ಆದಾಯ ತೆರಿಗೆ ಕಾನೂನು ಏಪ್ರಿಲ್ 1, 2026ರಿಂದಲೇ ಜಾರಿಯಾಗುತ್ತಿದೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ

–ಬಿ.ಗೋಪಿನಾಥ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ  

ದೇಶವನ್ನು ಏಳು ಸೆಕ್ಟರ್‌ ಆಗಿ ಬದಲಾಯಿಸಿ ವಿಶೇಷವಾಗಿ ಭಾರತವನ್ನು ಉತ್ಪಾದನಾ ಕ್ಷೇತ್ರದ ಹಬ್ ಮಾಡುವ ನಿರ್ಧಾರ. ಹೊಸ ತಂತ್ರಜ್ಞಾನ, ಸಂಶೋಧನೆಗೆ ಒತ್ತು. ಎಂಎಸ್‌ಎಂಇ ಪ್ಲಾಟ್‌ಫಾರಂ ಗಟ್ಟಿಗೊಳಿಸಿದ್ದಾರೆ. ಉದ್ಯೋಗ ಆಧಾರಿತ ಶಿಕ್ಷಣ, ಆರೋಗ್ಯ ವಲಯದಲ್ಲಿ ಕೌಶಲಾಭಿವೃದ್ಧಿ, ಚೆನ್ನೈ- ಬೆಂಗಳೂರು ಸೇರಿದಂತೆ ಏಳು ಹೈ–ಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ ಮಾಡಿರುವುದು ಪ್ರಯಾಣಿಕರಿಗೆ ಮಾತ್ರವಲ್ಲ, ಉದ್ಯಮದ ಹಿತದಿಂದಲೂ ಸ್ವಾಗತಾರ್ಹ ಸಂಗತಿ. 

ADVERTISEMENT

ಎಸ್.ರುದ್ರೇಗೌಡ್ರು, ಉದ್ಯಮಿ, ಶಿವಮೊಗ್ಗ.

ಹಲವು ಯೋಜನೆ: ಸ್ವಾಗತಾರ್ಹ

ಬಜೆಟ್‌ನಲ್ಲಿ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಒತ್ತು ನೀಡಿರುವುದು, ಕ್ಯಾನ್ಸರ್ -ಮಧುಮೇಹ ಕಾಯಿಲೆಗಳ ಔಷಧಿ ಬೆಲೆ ಇಳಿಕೆ ಮಾಡಿರುವುದು, ತೆಂಗು ಬೆಳೆಗಾರರಿಗೆ ಉತ್ತೇಜನೆ, ಪಶುಪಾಲನೆ ಮತ್ತು ಮೀನುಗಾರಿಕೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. 

ಕೆ.ಆರ್.ರಾಜು, ಆಚಾಪುರ ಕೃಷಿ ಪತ್ತಿನ ಸಹಕಾರ ಸಂಘ, ಸಾಗರ

ಎಐ ತಂತ್ರಜ್ಞಾನ, ಗ್ರಾಮೀಣ ಅಭಿವೃದ್ಧಿಗೆ ಪೂರಕ

ಜಾಗತಿಕ ಆರ್ಥಿಕ ವ್ಯವಸ್ಥೆಯ ಹಲವಾರು ಸವಾಲಿನ ನಡುವೆ ಬಜೆಟ್‌ನಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಶೇ 7ರ ದರದಲ್ಲಿ ಸಾಧಿಸುವ ಪ್ರಯತ್ನ ಶ್ಲಾಘನೀಯ. ಇದು ದೂರದೃಷ್ಟಿಯ ಬಜೆಟ್ ಆಗಿದ್ದು, ಅಗ್ಗದ ಪ್ರಚಾರ ಪಡೆಯದೆ ಅಲ್ಪಾವಧಿಯಲ್ಲಿ ಯಾವುದೇ ಪರಿಣಾಮ ಬೀರದ ಬಜೆಟ್ ಆಗಿದೆ. ಖಾದಿ ಮತ್ತು ಗ್ರಾಮೋದ್ಯೋಗ, ಕೃಷಿಯಲ್ಲಿ ಎಐ ತಂತ್ರಜ್ಞಾನ ಬಳಕೆಯು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಲಿದೆ. ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.3 ಕ್ಕೆ ಇಳಿಸುವ ಪ್ರಯತ್ನ ಪ್ರಶಂಸನೀಯ. ಇದೊಂದು ಸಮತೋಲನ ಬಜೆಟ್. 

ಬಿ.ವಿ.ಶ್ರೀನಿವಾಸಮೂರ್ತಿ, ಪ್ರಾಧ್ಯಾಪಕ, ಜೆಎನ್‌ಎನ್‌ಸಿಇ, ಶಿವಮೊಗ್ಗ

ಪ್ರವಾಸೋದ್ಯಮದ ಉತ್ತೇಜನ

ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಈ ಹೊತ್ತಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ನಡೆಯಾಗಿದೆ.

ತೆಂಗು ಬೆಳೆಯುವ ರಾಜ್ಯಗಳಿಗೆ ತೆಂಗು ಬೆಳೆಯ ಸಂಶೋಧನೆ, ಮೌಲ್ಯವರ್ಧನೆ ಮೊದಲಾದ ಸಂಗತಿಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವುದು ಉತ್ತಮ ಸಂಗತಿಯಾಗಿದೆ. ಪ್ರಮುಖ ನಿರ್ಧಾರಗಳು ಇಲ್ಲದಿದ್ದರೂ ಸಮಾಧಾನ ತರುವ ಬಜೆಟ್ ಇದಾಗಿದೆ.

ಎಚ್.ಎಂ.ಶಿವಕುಮಾರ್, ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರು, ಸಾಗರ

ಜನರಿಗೆ ಹಲವು ಅನುಕೂಲ 

ಹೊಸ ತೆರಿಗೆ ಹೇರಿಲ್ಲ, ಮಹಿಳೆಯರಿಗೆ ಮಾರ್ಟ್ ನಿರ್ಮಾಣ, ಕೃಷಿಗೆ ಆದ್ಯತೆ, ಏಳು ಹೈಸ್ಪೀಡ್ ರೈಲು, ದೇಶದ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ, ರಕ್ಷಣೆಗೆ ಹೆಚ್ಚುವರಿ ಹಣ, ಕ್ಯಾನ್ಸರ್ ಔಷಧಿಗೆ ಆಮದು ಸುಂಕ ಕಡಿಮೆ, ಸೆಮಿ ಕಂಡಕ್ಟರ್ ವಲಯಕ್ಕೆ ಹೆಚ್ಚು ಹಣ ನೀಡುವ ಮೂಲಕ ತಂತ್ರಜ್ಞಾನ ಕ್ಷೇತ್ರದ ಬಲವರ್ಧನೆಗೆ ಕಾರಣವಾಗಿದೆ. ಆರ್ಯರ್ವೇದ ಉತ್ತೇಜನಕ್ಕೆ ಕಾಲೇಜು ನಿರ್ಮಾಣ, ಹೆಚ್ಚುವರಿ ಏಮ್ಸ್ ನಿರ್ಮಾಣ ಸೇರಿದಂತೆ ಹಲವು ಅನುಕೂಲ ಜನರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಇದೊಂದು ಜನಪರ ಬಜೆಟ್ ಆಗಿದೆ.

ಶಶಿಧರ ಚುರ್ಚಿಗುಂಡಿ ಟಿಎಪಿಸಿಎಂಎಸ್ ನಿರ್ದೇಶಕರು.

ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಭರವಸೆ

ಕಾನ್ಸರ್ ಔಷಧಿಗಳ ಆಮದಿಗೆ ಸುಂಕ ಕಡಿತಗೊಳಿಸಿರುವುದು ಔಷಧಿ ವಲಯಕ್ಕೆ ಅನುದಾನ ಹೆಚ್ಚು ಅನುದಾನ ನೀಡಿರುವುದು ಮಧ್ಯಮವರ್ಗದವರಿಗೆ ಹೆಚ್ಚು ಅನುಕೂಲಕರವಾಗಿದೆ. ಮಹಿಳೆಯರಿಗಾಗಿ ಶಿ ಮಾರ್ಟ್ ಸ್ಥಾಪನೆಯ ಆಲೋಚನೆ ಹೊಸ ಉದ್ಯಮದ ಕನಸಿಗೆ ಆಶಾದಾಯಕ. ಖಾದಿ ಕೈಮಗ್ಗ ಕರಕುಶಲ ವಸ್ತುಗಳ ಬಲಪಡಿಸುವಿಕೆ ಹಾಗೂ ನಾರು ಯೋಜನೆ ಜವಳಿ ವಿಸ್ತರಣೆಗಾಗಿ ಸಮರ್ಥ್ 2.0 ಯೋಜನೆಗಳನ್ನು ಕಂಡಾಗ ಒಟ್ಟಾರೆಯಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಹೊಸದೊಂದು ಭರವಸೆ ಹುಟ್ಟಿದಂತಾಗಿದೆ. ಕರ್ನಾಟಕಕ್ಕೆ ಅನುದಾನ ಕಡಿತಗೊಳಿಸಿರುವುದು ಬೇಸರದ ಸಂಗತಿಯಾಗಿದೆ.

ರಶ್ಮಿ ಶಮಂತ್, ಕಾರಣಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.